ಹಸುಗೂಸಿನ ಜೀವ ಉಳಿಸಲು 400 ಕಿ.ಮೀ ಗ್ರೀನ್ ಕಾರಿಡಾರ್!
15 ದಿನದ ಮಗುವಿನ ಜೀವಕ್ಕಾಗಿ 400 ಕಿ.ಮೀ ಗ್ರೀನ್ ಕಾರಿಡಾರ್!| ಮಂಗಳೂರಿನಿಂದ ಕೊಚ್ಚಿಗೆ ಆ್ಯಂಬುಲೆನ್ಸ್ನಲ್ಲಿ ಮಗು ರವಾನೆ
ಕೊಚ್ಚಿ[ಏ.17]: ಹೃದಯ, ಕಿಡ್ನಿ ಸೇರಿದಂತೆ ಅಮೂಲ್ಯ ಅಂಗಾಂಗಗಳನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ಗಳಿಗೆ ಸಂಚಾರ ದಟ್ಟಣೆ ರಹಿತ ಗ್ರೀನ್ ಕಾರಿಡಾರ್ ನಿರ್ಮಿಸುವ ಹಲವು ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿದೆ. ಆದರೆ ಕೇವಲ ಹುಟ್ಟಿ15 ದಿನವಷ್ಟೇ ಆಗಿರುವ ಮಗುವಿನ ಜೀವ ಉಳಿಸಲು ಕರ್ನಾಟಕದ ಮಂಗಳೂರಿನಿಂದ, ಕೇರಳದ ಕೊಚ್ಚಿವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಿದ ಘಟನೆ ಮಂಗಳವಾರ ನಡೆದಿದೆ.
ಕಾಸರಗೋಡಿನ ಸಾನಿಯಾ ಮತ್ತು ಮಿಥಾ ದಂಪತಿಗೆ 15 ದಿನಗಳ ಹಿಂದೆ ಮಂಗಳೂರಿನಲ್ಲಿ ಹುಟ್ಟಿದ ಮಗುವಿಗೆ ಗಂಭೀರ ಹೃದಯ ತೊಂದರೆ ಕಾಣಿಸಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ರಸ್ತೆಯಲ್ಲಿ ಆ್ಯಂಬುಲೆನ್ಸ್ ಮೂಲಕ 600 ಕಿ.ಮೀ ದೂರದ ತಿರುವನಂತರಪುರದ ಆಸ್ಪತ್ರೆಗೆ ದಾಖಲಿಸಲು ದಂಪತಿ ನಿರ್ಧರಿಸಿತ್ತು. ಆದರೆ ಅಷ್ಟುದೂರಕ್ಕೆ ರಸ್ತೆ ಮಾರ್ಗದಲ್ಲಿ ಕರೆದೊಯ್ಯುವುದು ಅಪಾಯಕಾರಿ ಎಂದು ಮನಗಂಡ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿದ್ದೂ, ಅಲ್ಲದೆ ದಂಪತಿಯ ಮನವೊಲಿಸಿ ಕೊಚ್ಚಿಗೆ ಕರೆತರುವಂತೆ ಒಪ್ಪಿಸಿದರು.
ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಗ್ರೀನ್ ಕಾರಿಡಾರ್ ನಿರ್ಮಿಸಲು ಮನವಿ ಮಾಡಿದರು. ಈ ಸುದ್ದಿ ವೈರಲ್ ಆಗಿತ್ತು. ಎಲ್ಲೆಡೆ ಜನ ರಸ್ತೆಯಲ್ಲಿ ಕಾದು ನಿಂತು ಆ್ಯಂಬುಲೆನ್ಸ್ ತೆರಳಲು ಅವಕಾಶ ಮಾಡಿಕೊಟ್ಟರು. ಪರಿಣಾಮ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೊರಟ ಆ್ಯಂಬುಲೆನ್ಸ್ ಸುಮಾರು 400 ಕಿ.ಮೀ ಮಾರ್ಗವನ್ನು ಯಾವುದೇ ತೊಂದರೆ ಇಲ್ಲದೇ ಸಂಜೆಯ ವೇಳೆಗೆ ಕೊಚ್ಚಿ ತಲುಪಿದ್ದು, ಇದೀಗ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.