'ಕಟ್ಟಪ್ಪ' ವಿರುದ್ಧದ ಕನ್ನಡಿಗರ ಹೋರಾಟಕ್ಕೆ ನಟ ಅಂಬರೀಷ್ ಪರೋಕ್ಷ ಬೆಂಬಲ
ಖಾಸಗಿ ಹೋಟೆಲ್'ನಲ್ಲಿ ನಾಳೆ ನಡೆಯಬೇಕಿದ್ದ ಪತ್ರಿಕಾಗೋಷ್ಠಿಯನ್ನು ಬಾಹುಬಲಿ ತಂಡ ರದ್ದುಮಾಡಿದೆ. ಸಿನಿಮಾದ ನಿರ್ಮಾಪಕ ಶೋಭು ಯರ್ಲಗುಡ್ಡ, ನಟರಾದ ರಾಣಾ ದಗ್ಗುಬಾಟಿ, ಅನುಷ್ಕಾ ಶರ್ಮಾ ಮೊದಲಾದವರು ಈ ಪ್ರೆಸ್'ಮೀಟ್'ಗೆ ಬರುವ ಯೋಜನೆ ಇತ್ತು.
ಬೆಂಗಳೂರು(ಏ. 19): ಬಾಹುಬಲಿ ಬಿಡುಗಡೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ನಟ ಅಂಬರೀಷ್ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೋರಾಟ ಕೈಬಿಡಬೇಕೆಂದು ಕನ್ನಡಪರ ಸಂಘಟನೆಗಳ ಮನವೊಲಿಸಲು ತಾನು ಯಾವುದೇ ಸಂಧಾನ ನಡೆಸಿಲ್ಲ ಎಂದು ರೆಬೆಲ್ ಸ್ಟಾರ್ ಈ ವೇಳೆ ಸ್ಪಷ್ಟಪಡಿಸಿದ್ದಾರೆ. ಬಾಹುಬಲಿ ಸಿನಿಮಾದ ನಿರ್ಮಾಪಕರಾಗಲೀ ಅಥವಾ ಯಾವುದೇ ಟಾಲಿವುಡ್ ನಿರ್ಮಾಪಕರಾಗಲೀ ತಮ್ಮನ್ನು ಸಂಪರ್ಕಿಸಿಲ್ಲ ಎಂದೂ ಅಂಬಿ ಖಚಿತಪಡಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸುವರ್ಣನ್ಯೂಸ್'ನಲ್ಲಿ ಪ್ರಸಾರವಾಗುತ್ತಿದ್ದ ಎಕ್ಸ್'ಕ್ಲೂಸಿವ್ ವರದಿಗೆ ನಟ ಅಂಬರೀಷ್ ಕೊಟ್ಟ ಪ್ರತಿಕ್ರಿಯೆ ಇದಾಗಿದೆ.
ಬೆಂಗಳೂರು ಬಂದ್:
ಬಾಹುಬಲಿ ಸಿನಿಮಾ ಬಿಡುಗಡೆ ವಿರೋಧಿಸಿ ವಾಟಾಳ್ ನಾಗರಾಜ್ ಹಾಗೂ ಅನೇಕ ಕನ್ನಡಪರ ಸಂಘಟನೆಗಳು ಏ.28ರಂದು ಬಂದ್'ಗೆ ಕರೆಕೊಟ್ಟಿದ್ದಾರೆ. ಬಾಹುಬಲಿ 'ಕಟ್ಟಪ್ಪ' ಪಾತ್ರಧಾರಿ ಸತ್ಯರಾಜ್ ಕನ್ನಡಿಗರ ಕ್ಷಮೆ ಯಾಚಿಸುವವರೆಗೂ ಬಾಹುಬಲಿ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಕನ್ನಡ ಹೋರಾಟಗಾರರು ಪಣತೊಟ್ಟಿದ್ದಾರೆ.
ಬಾಹುಬಲಿ ಪ್ರೆಸ್'ಮೀಟ್ ರದ್ದು:
ಇದೇ ವೇಳೆ, ಖಾಸಗಿ ಹೋಟೆಲ್'ನಲ್ಲಿ ನಾಳೆ ನಡೆಯಬೇಕಿದ್ದ ಪತ್ರಿಕಾಗೋಷ್ಠಿಯನ್ನು ಬಾಹುಬಲಿ ತಂಡ ರದ್ದುಮಾಡಿದೆ. ಸಿನಿಮಾದ ನಿರ್ಮಾಪಕ ಶೋಭು ಯರ್ಲಗುಡ್ಡ, ನಟರಾದ ರಾಣಾ ದಗ್ಗುಬಾಟಿ, ಅನುಷ್ಕಾ ಶರ್ಮಾ ಮೊದಲಾದವರು ಈ ಪ್ರೆಸ್'ಮೀಟ್'ಗೆ ಬರುವ ಯೋಜನೆ ಇತ್ತು.
ಯಾಕೆ ಈ ಹೋರಾಟ?
ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪ ಪಾತ್ರ ಮಾಡಿದ್ದ ತಮಿಳು ನಟ ಸತ್ಯರಾಜ್ ಅವರು ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಹೋರಾಟಗಾರರ ಅವಹೇಳನ ಮಾಡಿದ್ದರು. ಅವರು ಆ ರೀತಿ ಮಾತನಾಡುತ್ತಿರುವ ವಿಡಿಯೋವೊಂದು ಕಾವೇರಿ ಹೋರಾಟದ ಸಂದರ್ಭ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿದೆ. ಇದು, ಹೋರಾಟಗಾರರ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ಹೀಗಾಗಿ, ಸತ್ಯರಾಜ್ ಅಭಿನಯಿಸಿರುವ "ಬಾಹುಬಲಿ" ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಸುತಾರಾಂ ಅವಕಾಶ ಕೊಡುವುದಿಲ್ಲ ಎಂದು ಪಣತೊಟ್ಟಿದ್ದಾರೆ. ಸತ್ಯರಾಜ್ ಬಹಿರಂಗವಾಗಿ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂಬುದು ಕನ್ನಡ ಹೋರಾಟಗಾರರು ಪ್ರಮುಖ ಬೇಡಿಕೆಯಾಗಿದೆ. ಸತ್ಯರಾಜ್ ಕ್ಷಮೆ ಯಾಚಿಸುವಂತೆ ಮಾಡಿದರೆ ಬಾಹುಬಲಿ ಬಿಡುಗಡೆ ನಿರ್ವಿಘ್ನವಾಗಿರುತ್ತದೆ ಎಂದೂ ಹೋರಾಟಗಾರರು ಸ್ಪಷ್ಟವಾಗಿ ಹೇಳಿದ್ದಾರೆ.