ಬಿಜೆಪಿ ಸೋಲಿಸಲು ಬಿಎಸ್ಪಿಯೊಂದಿಗೆ ಎಸ್ಪಿ ಮೈತ್ರಿ
- ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ದರಾದ ಸಮಾಜವಾದಿ ಪಕ್ಷ
- 2,3 ಸ್ಥಾನಗಳ ಚೌಕಾಸಿಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಸ್ಪರ್ಧೆ
ನವದೆಹಲಿ[ಜೂ.11]: ಇತ್ತೀಚಿಗೆ ಕೆಲವು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾದ ನಂತರ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರವನ್ನು ಸೋಲಿಸಲು ಒಂದಂದಾಗಿ ವಿರೋಧಪಕ್ಷಗಳು ಒಂದುಗೂಡುತ್ತಿವೆ.
ಹಲವು ವರ್ಷಗಳ ಕಾಲ ಬದ್ಧವೈರಿಗಳೆನಿಸಿಕೊಂಡು ಸರ್ಕಾರಕ್ಕಾಗಿ ಕಿತ್ತಾಡಿದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಎದುರಿಸಲಿದ್ದಾರೆ.
ಲಖನೌನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಾವು ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬದ್ಧರಾಗಿದ್ದು, ಇದಕ್ಕಾಗಿಯೇ ಮೂರ್ನಾಲ್ಕು ಸ್ಥಾನಗಳನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ. ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಎರಡೂ ವಿಪಕ್ಷಗಳು ಒಂದುಗೂಡಿ 2 ಲೋಕಸಭೆ ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು ಇದಕ್ಕೆ ಪ್ರಮುಖ ಸಾಕ್ಷಿ ಎಂದು ತಿಳಿಸಿದ್ದಾರೆ.
ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಕೂಡ ಬಿಜೆಪಿ ಸರ್ಕಾರವನ್ನು ಎದುರಿಸಲು ವಿರೋಧ ಪಕ್ಷಗಳನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಕೆಲವು ದಿನಗಳ ಹಿಂದೆ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದರು.
ಪುನಃ ಗೆಲುವು ನಮ್ಮದೆ ಎಂದ ಅಮಿತ್ ಶಾ
ವಿರೋಧ ಪಕ್ಷಗಳೆಲ್ಲ ಒಂದುಗೂಡಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ 2014ರ ಚುನಾವಣೆಯಲ್ಲಿ ಎಲ್ಲರೂ ನಮ್ಮ ವಿರುದ್ಧ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. 2019ರಲ್ಲೂ ನಾವು ಗೆಲುವುಗಳಿಸುವುದು ಖಂಡಿತಾ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮನ್ನು ತಾವೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಂಡಿರಬಹುದು. ಆದರೆ, ಅವರಿಗೆ ಇತರ ಪಕ್ಷಗಳ ನಾಯಕರಿಂದ ಬೆಂಬಲ ಸಿಗುವುದು ಹಾಗಿರಲಿ, ಅವರದೇ ಪಕ್ಷದ ನಾಯಕರಿಂದಲೂ ಬೆಂಬಲ ಸಿಕ್ಕಿಲ್ಲ. ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಗ್ರೆಸಿಗರ ಜೊತೆ ನಾವು ಅಂಕಿಅಂಶಗಳು ಹಾಗೂ ಸಾಧನೆಗಳ ಪಟ್ಟಿಯನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದೂ ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿ ಅವರು ಅತ್ಯಂತ ಜನಪ್ರಿಯ ಹಾಗೂ ಅತಿಹೆಚ್ಚು ಕೆಲಸ ಮಾಡುವ ಪ್ರಧಾನಿಯಾಗಿದ್ದಾರೆ. ಅವರಲ್ಲಿ ಅನಂತ ಶಕ್ತಿಯಿದೆ. ಯುಪಿಎ ಸರ್ಕಾರದ ದುರಾಡಳಿತವನ್ನು ಕೊನೆಗೊಳಿಸಿ ಬಡವರ ಪರ ಕೆಲಸ ಮಾಡುವ, ಆರ್ಥಿಕತೆಯನ್ನು ಮೇಲೆತ್ತುವ ಹಾಗೂ ದೇಶದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಆಡಳಿತವನ್ನು ಅವರು ನೀಡಿದ್ದಾರೆ ಎಂದು ಹೇಳಿದರು.