ವಿಮಾನದ ಬಾಗಿಲು ಹಾಕುವಾಗ ಏರಿಂಡಿಯಾ ಗಗನಸಖಿಯೊಬ್ಬರು ಆಯತಪ್ಪಿ 20 ಅಡಿ ಕೆಳಗೆ ಬಿದ್ದು ಗಂಭೀರವಾಗಿ  ಗಾಯಗೊಂಡ ಘಟನೆ ಮುಂಬೈನಲ್ಲಿ ಸೋಮವಾರ ನಡೆದಿದೆ. 

ಮುಂಬೈ: ಏರಿಂಡಿಯಾ ಗಗನಸಖಿಯೊಬ್ಬರು, ವಿಮಾನದ ಬಾಗಿಲು ಹಾಕುವಾಗ ಆಯತಪ್ಪಿ 20 ಅಡಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಮುಂಬೈನಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಹರ್ಷಾ ಲೋಬೋ ಗಾಯಗೊಂಡಿದ್ದು ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Add Asianetnews Kannada as a Preferred SourcegooglePreferred

ಏನಾಯ್ತು?: ಏರಿಂಡಿಯಾ ವಿಮಾನ ಸೋಮವಾರ ಮುಂಜಾನೆ ಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಡಲು ಅನುವಾಗಿತ್ತು. ಈ ವೇಳೆ ಎಲ್ಲಾ ಪ್ರಯಾಣಿಕರು ಆಗಮಿಸಿದ ಬಳಿಕ ಹರ್ಷಾ ಲೋಬೋ ಅವರು ವಿಮಾನದ ಬಾಗಿಲು ಹಾಕಲು ಮುಂದಾಗಿದ್ದರು. ಆದರೆ ಈ ವೇಳೆ ಅವರು ಬಾಗಿಲು ಮತ್ತು ವಿಮಾನದ ಬಾಗಿಲ ಬಳಿ ಪ್ರಯಾಣಿಕರು ಏರಲು ಹಾಕಿರುವ ಏಣಿಯ ನಡುವಿನ ಜಾಗದಿಂದ ಏಕಾಏಕಿ ಆಯತಪ್ಪಿ ವಿಮಾನದಿಂದ ಕೆಳಗೆ ಬಿದ್ದಿದ್ದಾರೆ. 

ಬಿದ್ದ ಹೊಡೆತಕ್ಕೆ ಹರ್ಷಾ ಅವರ ಬಲಗಾಲಿಗೆ ತೀವ್ರ ಹಾನಿಯಾಗಿದೆ. ಇದಲ್ಲದೆ ಎರಡೂ ಕಾಲಿನ ಹಿಮ್ಮಡಿ, ಬೆನ್ನು, ಕುತ್ತಿಗೆ, ಎದೆ, ಸೊಂಟದ ಭಾಗಗಳಿಗೂ ತೀವ್ರ ಪೆಟ್ಟುಬಿದ್ದಿದೆ.