ವಾಯುಪಡೆ ಯೋಧರೇ ಸಿದ್ಧರಾಗಿರಿ; 12000 ಸಿಬ್ಬಂದಿಗೆ ಏರ್'ಚೀಫ್ ಪತ್ರ
ಈಗಿನ ಪರಿಸ್ಥಿತಿಯಲ್ಲಿ ಪರೋಕ್ಷ ಯುದ್ಧದ ಬೆದರಿಕೆ ಇದೆ. ಹೀಗಾಗಿ ನಾವು ನಮ್ಮಲ್ಲಿರುವ ಸಂಪನ್ಮೂಲ ವನ್ನಿಟ್ಟುಕೊಂಡು ತುರ್ತಾಗಿ ಎಲ್ಲದಕ್ಕೂ ಸಿದ್ಧವಿರಬೇಕು. ಈ ನಿಟ್ಟಿನಲ್ಲಿ ತರಬೇತಿಗೂ ಹೆಚ್ಚು ಗಮನ ಕೊಡಬೇಕು ಎಂದು 12000 ವಾಯುಪಡೆ ಅಧಿಕಾರಿಗಳಿಗೆ ಮಾ.30ರಂದು ಧನೋವಾ ಪತ್ರ ಬರೆದಿದ್ದಾರೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿನ ಸೇನಾ ಶಿಬಿರಗಳ ಮೇಲೆ ಸತತವಾಗಿ ಭಯೋತ್ಪಾದಕರ ದಾಳಿ ಹಾಗೂ ಕಣಿವೆ ರಾಜ್ಯದಲ್ಲಿ ಅಶಾಂತಿ ತಾರಕಕ್ಕೇರಿರುವ ಹೊತ್ತಿನಲ್ಲೇ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಧನೋವಾ ಅವರು, ಯಾವುದೇ ತುರ್ತು ಕಾರ್ಯಾಚರಣೆಗೆ ಸಜ್ಜಾಗಿರುವಂತೆ ವಾಯುಪಡೆಯ 12000 ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ಸಂಚಲನಕ್ಕೆ ಕಾರಣವಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ಪರೋಕ್ಷ ಯುದ್ಧದ ಬೆದರಿಕೆ ಇದೆ. ಹೀಗಾಗಿ ನಾವು ನಮ್ಮಲ್ಲಿರುವ ಸಂಪನ್ಮೂಲ ವನ್ನಿಟ್ಟುಕೊಂಡು ತುರ್ತಾಗಿ ಎಲ್ಲದಕ್ಕೂ ಸಿದ್ಧವಿರಬೇಕು. ಈ ನಿಟ್ಟಿನಲ್ಲಿ ತರಬೇತಿಗೂ ಹೆಚ್ಚು ಗಮನ ಕೊಡಬೇಕು ಎಂದು 12000 ವಾಯುಪಡೆ ಅಧಿಕಾರಿಗಳಿಗೆ ಮಾ.30ರಂದು ಧನೋವಾ ಪತ್ರ ಬರೆದಿದ್ದಾರೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ಸೇನಾಪಡೆಗಳ ಇತಿಹಾಸದಲ್ಲಿ ಕೆಳಹಂತದ ಅಧಿಕಾರಿಗಳಿಗೆ ಮುಖ್ಯಸ್ಥರು ಪತ್ರ ಬರೆಯುವುದು ತೀರಾ ಅಪರೂಪದ ಬೆಳವಣಿಗೆ. ಧನೋವಾ ಬರೆದಿರುವುದು ಅಂತಹ ಮೂರನೇ ಪತ್ರ ಮಾತ್ರ. 1950ರ ಮೇ 1ರಂದು ಅಂದಿನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಗೂ 1986ರ ಫೆ.1ರಂದು ಜನರಲ್ ಕೆ. ಸುಂದರ್ಜೀ ಅವರು ಈ ರೀತಿ ಕೆಳ ಹಂತದ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
ಧನೋವಾ ಬರೆದಿರುವ ಪತ್ರದಲ್ಲಿ ಪಾಕಿಸ್ತಾನದ ನೇರ ಉಲ್ಲೇಖ ಇಲ್ಲ. ಆದರೆ ಪರೋಕ್ಷ ಯುದ್ಧ ಎಂದು ಅವರು ಪ್ರಸ್ತಾಪಿಸಿರುವುದನ್ನು ನೋಡಿದರೆ, ಪಾಕಿಸ್ತಾನವನ್ನು ಗಮನದಲ್ಲಿಟ್ಟುಕೊಂಡೇ ಪತ್ರ ಬರೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ವಾಯುಪಡೆಯಲ್ಲಿರುವ ಮಾನವಸಂಪನ್ಮೂಲ ಹಾಗೂ ಸಲಕರಣೆಗಳ ಕೊರತೆ ಬಗ್ಗೆಯೂ ಪ್ರಸ್ತಾಪಿಸಿರುವ ಅವರು ಹೊಸ ತಾಂತ್ರಿಕ ಸಾಧನೆಗಳು ಹಾಗೂ ನಮ್ಮ ಪ್ರತಿಕೂಲಗಳ ಜತೆ ನಾವು ಮುನ್ನಡೆಯಬೇಕಿದೆ. ಹಾಗಾದಲ್ಲಿ ಮಾತ್ರ ಸಮರ ಗೆಲ್ಲುತ್ತೇವೆ ಎಂದು ಹುರಿದುಂಬಿಸಿದ್ದರು.