ಭಾರತ-ಪಾಕ್-ನಡುವೆ ಯುದ್ಧದ ಕಾರ್ಮೋಡ| ಬಿಜೆಪಿಯ ಅಭಿಯಾನಕ್ಕೆ ತಿರುಗೇಟು ನೀಡಿದ ಅಸದುದ್ದೀನ್ ಒವೈಸಿ| ಮೇರಾ ಬೂತ್ ಸಬ್ಸೆ ಮಜ್ಬೂತ್ ಅಭಿಯಾನಕ್ಕೆ ಒವೈಸಿ ಟಾಂಗ್| ಮೇರಾ ಸರಹದ್ ಮಜ್ಬೂತ್ ತೋ ದೇಶ್ ಮಜ್ಬೂತ್ ಎಂದ ಸಂಸದ| ಟಿಪ್ಪು ಹೆಸರು ಉಲ್ಲೇಖಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಕ್ಲಾಸ್| ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಮ್ರಾನ್ ಮೇಲೆ ಒತ್ತಡ|
ಹೈದರಾಬಾದ್(ಮಾ.02): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ 'ಮೇರಾ ಬೂತ್ ಸಬ್ಸೆ ಮಜ್ಬೂತ್' ಅಭಿಯಾನವನ್ನು ಹಮ್ಮಿಕೊಂಡಿದೆ. ಏತನ್ಮಧ್ಯೆ ಈ ಅಭಿಯಾನಕ್ಕೆ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಟಾಂಗ್ ನೀಡಿದ್ದಾರೆ.
ಬಿಜೆಪಿ ಮೇರಾ ಬೂತ್ ಸಬ್ಸೆ ಮಜ್ಬೂತ್ ಅಂತಿದೆ. ಆದರೆ ನಾನು ಹೇಳುತ್ತೇನೆ ಮೇರಾ ಸರಹದ್ ಮಜ್ಬೂತ್ ತೋ ದೇಶ್ ಮಜ್ಬೂತ್(ನನ್ನ ಗಡಿ ಸುರಕ್ಷಿತವಾಗಿದ್ದರೆ ದೇಶ ಸುರಕ್ಷಿತ) ಎಂದು ಒವೈಸಿ ಪ್ರತ್ಯುತ್ತರ ನೀಡಿದ್ದಾರೆ.
ನಾನು ಮುಸಲ್ಮಾನ್ ಅನ್ನೋ ಕಾರಣಕ್ಕೆ ನನ್ನ ದೇಶಭಕ್ತಿಯನ್ನು ನೀವು ಪ್ರಶ್ನಿಸುತ್ತೀರಿ. ಆದರೆ ದೇಶದಲ್ಲಿ ಯುದ್ಧದ ವಾತಾವರಣ ಇರುವಾಗ ಬಿಜೆಪಿ ಲೋಕಸಭೆ ಚುನಾವಣೆ ಜಪ ಮಾಡುತ್ತಿರುವುದು ದೇಶಭಕ್ತಿಯೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಪಾಕ್ ಸಂಸತ್ತಿನಲ್ಲಿ ಟಿಪ್ಪು ಸುಲ್ತಾನ್ ಮತ್ತು ಬಹಾದ್ದೂರ್ ಶಾ ಜಫರ್ ಹೆಸರು ಉಲ್ಲೇಖಿಸಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತರಾಟೆಗೆ ತೆಗದುಕೊಂಡ ಒವೈಸಿ, ಟಿಪ್ಪು ಮತ್ತು ಬಹದ್ದೂರ್ ಶಾ ಜಫರ್ ಹಿಂದೂ ವಿರೋಧಿಯಾಗಿರಲಿಲ್ಲ ಎಂದು ಗುಡುಗಿದರು.
ನಿಮ್ಮ ನೆಲದಲ್ಲಿರುವ ಲಷ್ಕರ್-ಎ-ಶೈತಾನ್ ಮತ್ತು ಜೈಷ್-ಎ-ಶೈತಾನ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಲಷ್ಕರ್-ಎ-ತೋಯ್ಬಾ ಮತ್ತು ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಗಳನ್ನು ಒವೈಸಿ ತರಾಟೆಗೆ ತೆಗೆದುಕೊಂಡರು.
