‘ಘನ ತ್ಯಾಜ್ಯ ವಿಲೇವಾರಿಗಾಗಿ ಸೇವಾ ತೆರಿಗೆ ಪಾವತಿ’ ಸುವಂತೆ ಮತ್ತೆ ತೆರಿಗೆ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾರಂಭಿಸಿದ್ದು, ಕೂಡಲೇ ಬಿಬಿಎಂಪಿ ಈ ವಿವಾದ ಬಗೆಹರಿಸಿದ್ದರೆ ಜ.11ರಿಂದ ಮತ್ತೆ ಕಸ ವಿಲೇವಾರಿಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಹಾಗೂ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಬೆಂಗಳೂರು (ಜ.07): ‘ಘನ ತ್ಯಾಜ್ಯ ವಿಲೇವಾರಿಗಾಗಿ ಸೇವಾ ತೆರಿಗೆ ಪಾವತಿ’ ಸುವಂತೆ ಮತ್ತೆ ತೆರಿಗೆ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾರಂಭಿಸಿದ್ದು, ಕೂಡಲೇ ಬಿಬಿಎಂಪಿ ಈ ವಿವಾದ ಬಗೆಹರಿಸಿದ್ದರೆ ಜ.11ರಿಂದ ಮತ್ತೆ ಕಸ ವಿಲೇವಾರಿಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಹಾಗೂ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಈ ಸಂಬಂಧ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರಿಗೆ ಪತ್ರ ಬರೆದಿರುವ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಬಾಲಸುಬ್ರಮಣಿಯಂ, ಸೇವಾ ತೆರಿಗೆ ವಿವಾದ ಬಗೆಹರಿಸುವುದಾಗಿ ಈ ಹಿಂದೆ ಗುತ್ತಿಗೆದಾರರು ಮುಷ್ಕರ ನಡೆಸಿದ್ದಾಗ ಮೇಯರ್ ಹಾಗೂ ಆಯುಕ್ತರು ಭರವಸೆ ನೀಡಿದ್ದರು. ಆದರೆ, ಈ ವರೆಗೆ ಬಗೆಹರಿದಿಲ್ಲ. ಮತ್ತೆ ತೆರಿಗೆ ಇಲಾಖೆಯಿಂದ ಗುತ್ತಿಗೆದಾರರಿಗೆ ಸೇವಾ ತೆರಿಗೆ ಪಾವತಿಸುವಂತೆ ನೋಟಿಸ್ ಬರಲಾರಂಭಿಸಿವೆ.

ಹಾಗಾಗಿ ಜ.9 ಮತ್ತು 10ರಂದು ನಡೆಯಲಿರುವ ಪಾಲಿಕೆಯ ಸಭೆಯಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಜ.11ರಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡುಗಳಲ್ಲೂ ಕಸ ವಿಲೇವಾರಿ ಸ್ಥಗಿತಗೊಳಿಸಿ ಮತ್ತೆ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಘನ ತ್ಯಾಜ್ಯ ವಿಲೇವಾರಿಗಾಗಿ ಕಟ್ಟುವ ಸೇವಾ ತೆರಿಗೆಯಿಂದ ಬಿಬಿಎಂಪಿಗೆ ಕಾನೂನಾತ್ಮಕವಾಗಿ ವಿನಾಯಿತಿ ಇದೆ. ಹಾಗಾಗಿ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಸೇವೆಯ ಭಾಗವಾಗಿರುವ ಗುತ್ತಿಗೆದಾರರು ಇದಕ್ಕೆ ಒಳಪಡುತ್ತಾರೆ. ಈ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಮೇಯರ್ ಮತ್ತು ಆಯುಕ್ತರು ಈ ಹಿಂದೆ ಆಗಸ್ಟ್ ತಿಂಗಳಲ್ಲಿ ಗುತ್ತಿಗೆದಾರರು ಮುಷ್ಕರ ನಡೆಸಿದ ವೇಳೆ ಭರವಸೆ ನೀಡಿದ್ದರು.

ಅಲ್ಲದೆ, ಒಂದು ವೇಳೆ ಸೇವಾ ತೆರಿಗೆ ಪಾವತಿ ಮಾಡಲೇಕಾದ ಸಂದರ್ಭ ಬಂದರೆ ಅದನ್ನು ಬಿಬಿಎಂಪಿಯೇ ಸಂಪೂರ್ಣ ನಿಭಾಯಿಸಲಿದೆ ಎಂದು ಅಂದು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿದ್ದ ಮೇಯರ್ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಲ್ಲ, ವಿವಾದ ಬಗೆಹರಿದಿಲ್ಲ ಎಂದು ಅವರು ಆರೋಪಿಸಿದ್ದಾರೆ.

667 ಕೋಟಿ ಪಾವತಿಗೆ ನೋಟಿಸ್: ತೆರಿಗೆ ಅಧಿಕಾರಿಗಳು ಸೇವಾ ತೆರಿಗೆ ಪಾವತಿಸುವಂತೆ ಮತ್ತೆ ಗುತ್ತಿಗೆದಾರರಿಗೆ ನೋಟಿಸ್ ನೀಡುತ್ತಿದ್ದಾರೆ. 2014 -15ರಿಂದ 2016-17ರವರೆಗೆ ಸಂಬಂಧಿಸಿದಂತೆ ಬರೋಬ್ಬರಿ 667 ಕೋಟಿ ಸೇವಾ ತೆರಿಗೆ ಮತ್ತು ಸೇವಾ ತೆರಿಗೆ ಮೊತ್ತಕ್ಕೇ ಶೇಕಡ 100ರಷ್ಟು ದಂಡ ಹಾಗೂ ಸುಸ್ತಿ ಬಡ್ಡಿ ಪಾವತಿಸುವಂತೆ ಸೂಚಿಸುತ್ತಿದ್ದಾರೆ. ಒಂದು ವೇಳೆ ಪಾವತಿ ಮಾಡಿದ್ದರೆ ತಮ್ಮ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ತೆರಿಗೆ ಹಣಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಿದ್ದಾರೆ. ಹಾಗಾಗಿ ಮುಂದಿನ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳನ್ನು ಕರೆಸಿ ಸೇವಾ ತೆರಿಗೆಗೆ ವಿನಾಯಿತಿ ನೀಡುತ್ತಾರೋ? ಅಥವಾ ಇಲ್ಲವೋ? ಒಂದು ವೇಳೆ ಪಾವತಿಸಬೇಕಾದಲ್ಲಿ ಬಿಬಿಎಂಪಿಯ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.