ಐಸಿಯುವಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು
ತಮ್ಮ ಪ್ರೀತಿಯನ್ನು ಮನೆಯವರು ಒಪ್ಪಿಲ್ಲವೆಂದು ಯುವ ಜೋಡಿಯೊಂದು ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು (ಜು. 30): ತಮ್ಮ ಪ್ರೀತಿಯನ್ನು ಮನೆಯವರು ಒಪ್ಪಿಲ್ಲವೆಂದು ಯುವ ಜೋಡಿಯೊಂದು ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ.
ಹರ್ಯಾಣದ ಹಿಸಾರ್ ಜಿಲ್ಲೆಯ ಗುರ್ ಮುಖ್ ಸಿಂಗ್ ಹಾಗೂ ಕುಸುಮ್ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಯನ್ನು ಮನೆಯವರು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಮನನೊಂದ ಪ್ರೇಮಿಗಳು ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಐಸಿಯುವಿನಲ್ಲಿರುವ ತಮ್ಮ ಮಕ್ಕಳ ಕಷ್ಟ ನೋಡಲಾಗದೇ ಪೋಷಕರ ಮನ ಕರಗಿ ಮದುವೆಗೆ ಸಮ್ಮತಿ ಸೂಚಿಸಿದ್ದಾರೆ. ಐಸಿಯುವಿನಲ್ಲೇ ಮಕ್ಕಳ ಮದುವೆ ದಿರಿಸು ತೊಡಿಸಿ ಮದುವೆ ಮಾಡಿಸಿದ್ದಾರೆ. ಎರಡೂ ಕಡೆ ಕುಟುಂಬದವರು. ಆಸ್ಪತ್ರೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಐಸಿಯು ಸಾಕ್ಷಿಯಾಗಿ ಪ್ರೇಮಿಗಳು ಸತಿ-ಪತಿಗಳಾದರು.
ಗುರ್ ಮುಖ್ ಸಿಂಗ್ ಹಾಗೂ ಕುಸುಮ್ ಸಹಪಾಠಿಗಳು ಜೊತೆಗೆ ಸ್ನೇಹಿತರು. ಸ್ನೇಹ ಪ್ರೀತಿಗೆ ತಿರುಗಿತು. ಆದರೆ ಇದಕ್ಕೆ ಪೋಷಕರು ಸಮ್ಮತಿ ನೀಡಲಿಲ್ಲ. ಹಾಗಾಗಿ ಇವರು ಆತ್ಯಹತ್ಯೆಗೆ ಯತ್ನಿಸಿದರು ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.