ಏರ್ ಶೋ : ನೆಲಕ್ಕೆ ಬಿದ್ದ ಪೈಲಟ್ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು
ಸೂರ್ಯ ಕಿರಣ್ ವಿಮಾನ ದುರಂತಕ್ಕೆ ಸಿಲುಕಿ ಪ್ಯಾರಾಚೂಟ್ನಿಂದ ವಿಮಾನದಿಂದ ಹೊರ ಚಿಮ್ಮಿ ಯಲಹಂಕದ ಇಸ್ರೋ ಲೇಔಟ್ನ ಹೊಲವೊಂದರಲ್ಲಿ ಗಾಯಗೊಂಡು ಬಿದ್ದಿದ್ದ ವಿಂಗ್ ಕಮಾಂಡರ್ ವಿ.ಟಿ.ಶೆಲ್ಕೆ ಅವರನ್ನು ಕನ್ನಡದ ಐವರು ಹುಡುಗರು ಸಂತೈಸಿದ ರೀತಿ ಕನ್ನಡಿಗರ ನಿಜ ಮನೋಗುಣವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ಬೆಂಗಳೂರು: ಸೂರ್ಯ ಕಿರಣ್ ವಿಮಾನ ಡಿಕ್ಕಿಯಂತಹ ಮಹಾ ದುರಂತದ ವೇಳೆ ಕನ್ನಡಿಗರ ಸಮಯ ಪ್ರಜ್ಞೆ ಹಾಗೂ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಮಾನವೀಯ ಗುಣ ಬೆಳಕಿಗೆ ಬಂದಿದೆ.
ಹೌದು, ಈ ದುರಂತಕ್ಕೆ ಸಿಲುಕಿ ಪ್ಯಾರಾಚೂಟ್ನಿಂದ ವಿಮಾನದಿಂದ ಹೊರ ಚಿಮ್ಮಿ ಯಲಹಂಕದ ಇಸ್ರೋ ಲೇಔಟ್ನ ಹೊಲವೊಂದರಲ್ಲಿ ಗಾಯಗೊಂಡು ಬಿದ್ದಿದ್ದ ವಿಂಗ್ ಕಮಾಂಡರ್ ವಿ.ಟಿ.ಶೆಲ್ಕೆ ಅವರನ್ನು ಕನ್ನಡದ ಐವರು ಹುಡುಗರು ಸಂತೈಸಿದ ರೀತಿ ಕನ್ನಡಿಗರ ನಿಜ ಮನೋಗುಣವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ನಿಟ್ಟೆಮೀನಾಕ್ಷಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚೇತನ್ ಕುಮಾರ್, ಪ್ರಜ್ವಲ್, ಆಕಾಶ್ ಕೊಡ್ಲೆ ಮತ್ತು ಓಂಕಾರ್ ರೆಡ್ಡಿ ಅವರು ಪೈಲಟ್ ಶೆಲ್ಕೆ ಅವರನ್ನು ಸಂತೈಸಿದ ರೀತಿ ಹಾಗೂ ಅವರಿಗೆ ನೆರವಾಗಿದ್ದಾರೆ. ಈ ಸಂದರ್ಭದಲ್ಲಿ ಹುಡುಗರು ನಡೆದುಕೊಂಡ ರೀತಿಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದ್ದು, ಆ ದೃಶ್ಯಗಳು ವೈರಲ್ ಆಗಿವೆ.
ಇಸ್ರೋ ಲೇಔಟ್ನ ಅಪಾರ್ಟ್ಮೆಂಟ್ನ ಟೆರೇಸ್ ಮೇಲೆ ನಿಂತು ವಿಮಾನಗಳ ತಾಲೀಮು ವೀಕ್ಷಿಸುತ್ತಿದ್ದ ವಿದ್ಯಾರ್ಥಿಗಳು ವಿಮಾನಗಳು ಅಪಘಾತಕ್ಕೀಡಾಗಿ ಧರೆಗುರುಳುತ್ತಿದ್ದ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟೊತ್ತಿಗೆ ಯಲಹಂಕದ ಇಸ್ರೋ ಲೇಔಟ್ ವ್ಯಾಪ್ತಿಯಲ್ಲಿ ಬಿದ್ದು ವಿಮಾನಗಳು ಹೊತ್ತಿ ಧಗಧಗಿಸಿ ಉರಿಯುತ್ತಿದ್ದುದು ಕಂಡ ಯುವಕರು ಎದೆಗುಂದದೆ ಸಮೀಪವೇ ನಿತ್ರಾಣಗೊಂಡು ಬಿದ್ದಿದ್ದ ಪೈಲಟ್ ಶೆಲ್ಕೆ ಬಳಿ ತೆರಳಿ ಅವರನ್ನು ಉಪಚರಿಸಲು ಆರಂಭಿಸುತ್ತಾರೆ. ‘ಏನೂ ಆಗಿಲ್ಲ, ಗಾಬರಿ ಪಡಬೇಡಿ’ ಎಂದು ಸಂತೈಸುವ ಈ ಹುಡುಗರು, ಪೈಲಟ್ನ ಕೈಯನ್ನು ಹಿಡಿದು ಸಮಾಧಾನ ಹೇಳಿದ್ದಾರೆ.
ಜತೆಗೆ, ಶೆಲ್ಕೈ ಅವರಿಂದಲೇ ಮಾಹಿತಿ ಪಡೆದು ಅವರಿದ್ದ ವಿಮಾನದ ಆಸನ ಮತ್ತು ಪ್ಯಾರಾಚೂಟ್ನಿಂದ ಬೇರ್ಪಡಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಸಹ ಪೈಲಟ್ ಎಲ್ಲಿದ್ದಾರೆ ನೋಡುವಂತೆ ಶೆಲ್ಕೆ ಹೇಳಿದಾಗ ಕೂಡಲೇ ಅವರನ್ನು ಹುಡುಕಾಡುವ ಹುಡುಗರು, ಸ್ವಲ್ಪ ದೂರಗಲ್ಲಿ ಬಿದ್ದಿದ್ದ ಮತ್ತೊಬ್ಬ ಪೈಲಟ್ಅನ್ನು ಉಪಚರಿಸಿದರು. ಇದೇ ವೇಳೆ ಅಗ್ನಿಶಾಮಕ ದಳ ಹಾಗ ಪೊಲೀಸರಿಗೂ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಪೈಲಟ್ಗಳಿಗೆ ನಾವು ಉಪಚರಿಸಿ, ಸಂತೈಸುವ ವೇಳೆಗೆ ರಕ್ಷಣಾ ಇಲಾಖೆಯ ತುರ್ತು ದಳದವರು ಬಂದು ಅವರನ್ನು ಕರೆದೊಯ್ದರು ಎಂದು ವಿದ್ಯಾರ್ಥಿ ಚೇತನ್ ಕುಮಾರ್ ‘ಕನ್ನಡಪ್ರಭ’ಗೆ ತಿಳಿಸಿದರು.
ಫೆ.20ರಿಂದ ಆರಂಭವಾಗುವ ಏರ್ ಶೋ 24ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.