ಶಬರಿಮಲೆಗೆ ಸ್ತ್ರೀ ಪ್ರವೇಶ ತೀರ್ಪಿತ್ತಿದ್ದ ಸುಪ್ರೀಂ ಜಡ್ಜ್ ಚಂದ್ರಚೂಡ್ಗೆ ಬೆದರಿಕೆ!
ಶಬರಿಮಲೆಗೆ ಸ್ತ್ರೀಯರ ಪ್ರವೇಶ ತೀರ್ಪಿತ್ತಿದ್ದಕ್ಕೆ ಸುಪ್ರೀಂಕೋರ್ಟ್ ಜಡ್ಜ್ ಚಂದ್ರಚೂಡ್ಗೆ ಬೆದರಿಕೆ| ಬೆದರಿಕೆ ರೀತಿ ನೀಡಿ ಆಪ್ತ ಸಿಬ್ಬಂದಿಗಳಿಗೇ ಆತಂಕ| ಸಾಮಾಜಿಕ ಜಾಲತಾಣ ಬಳಸದಂತೆ ಜಡ್ಜ್ಗೆ ಸಲಹೆ
ಮುಂಬೈ[ಅ.03]: ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ತಮಗೆ ಬೆದರಿಕೆ ಹಾಕಲಾಗಿತ್ತು ಎಂದು ತೀರ್ಪು ನೀಡಿದ ನ್ಯಾಯಪೀಠದ ಸದಸ್ಯರ ಪೈಕಿ ಒಬ್ಬರಾದ ನ್ಯಾ. ಡಿ.ವೈ. ಚಂದ್ರಚೂಡ್ ಬಹಿರಂಗಪಡಿಸಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಾಧೀಶರೊಬ್ಬರಿಗೆ ಬೆದರಿಕೆ ಹಾಕಿದ್ದು ಮತ್ತು ಅವರು ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.
ಮುಂಬೈನಲ್ಲಿ ಕಾರ್ಯಕ್ರಮವೊಂದಲ್ಲಿ ಮಾತನಾಡಿದ 5 ಸದಸ್ಯರ ಸಾಂವಿಧಾನಿಕ ಪೀಠದ ಸದಸ್ಯರಾಗಿದ್ದ ನ್ಯಾ.ಚಂದ್ರಚೂಡ್, ಮಹಿಳೆಯರ ಪ್ರವೇಶಕ್ಕೆ ಅನುಮತಿ ಕಲ್ಪಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ನಾನಾ ರೀತಿಯ ಬೆದರಿಕೆ ಹಾಕಲಾಗಿತ್ತು. ಇವುಗಳನ್ನು ಗಮನಿಸಿದ ನನ್ನ ಆಪ್ತ ಸಿಬ್ಬಂದಿಗಳೇ ಆತಂಕಕ್ಕೆ ಒಳಗಾಗಿದ್ದರು. ಇನ್ನು ಮುಂದೆ ಸಾಮಾಜಿಕ ಜಾಲತಾಣ ಬಳಕೆ ಬಿಡಿ. ಅದು ಭೀತಿ ಹುಟ್ಟಿಸುವಂತಿದೆ ಎಂದು ಅವರು ನನಗೆ ಸಲಹೆಯನ್ನೂ ನೀಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.
2018ರ ಸೆ.28ರಂದು ಸಾಂವಿಧಾನಿಕ ಪೀಠವು ಯಾವುದೇ ವಯೋಮಾನದ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶ ಮಾಡಬಹುದು ಎಂಬ ಐತಿಹಾಸಿಕ ತೀರ್ಪು ನೀಡಿತ್ತು.