ವೈದ್ಯ ನಾರಾಯಣೋಹರಿ ಅಂತಾರೆ, ಪೊಲೀಸರನ್ನು ರಕ್ಷಕ ಅಂತಾರೆ. ಆದರೆ ಇಲ್ಲಿ ಇಬ್ಬರೂ ಸೇರಿ ನಡೆಸಿದ್ದೇ ಬೇರೆ, ಪ್ರಕರಣ ದಾಖಲಿಸಿ ನ್ಯಾಯ ಕೊಡಿಸುವುದು ಬಿಟ್ಟು, ಮಹಿಳೆಯನ್ನು ಮುಂದಿಟ್ಟುಕೊಂಡು ಡೀಲ್ ನಡೆಸಿದ್ದಾರೆ.
ಮಡಿಕೇರಿ(ಎ.29): ವೈದ್ಯ ನಾರಾಯಣೋಹರಿ ಅಂತಾರೆ, ಪೊಲೀಸರನ್ನು ರಕ್ಷಕ ಅಂತಾರೆ. ಆದರೆ ಇಲ್ಲಿ ಇಬ್ಬರೂ ಸೇರಿ ನಡೆಸಿದ್ದೇ ಬೇರೆ, ಪ್ರಕರಣ ದಾಖಲಿಸಿ ನ್ಯಾಯ ಕೊಡಿಸುವುದು ಬಿಟ್ಟು, ಮಹಿಳೆಯನ್ನು ಮುಂದಿಟ್ಟುಕೊಂಡು ಡೀಲ್ ನಡೆಸಿದ್ದಾರೆ.
ಮಡಿಕೇರಿಯ ನಾಪೋಕ್ಲುವಿನ ವೈದ್ಯ ಹಾಗೂ ಪೊಲೀಸ್ ಈಗ ವಿವಾದಕ್ಕೆ ಸಿಲುಕಿದ್ದಾರೆ. ಪರ ಪುರುಷನ ಸಂಗ ಮಾಡಿದ್ದ ನರ್ಸ್ ಒಬ್ಬಳು ಗರ್ಭಿಣಿಯಾಗಿದ್ದಳು. ಹಣ ಕೊಡು ಇಲ್ಲ ಮದುವೆ ಆಗು ಅಂದಳು, ಆದರೆ ಆತ ಎರಡಕ್ಕೂ ಒಪ್ಪದಿದ್ದಾಗ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿ ಆಸ್ಪತ್ರೆ ಸೇರಿದಳು. ಆದರೆ ಈಗ ಮಡಿಕೇರಿ ಜಿಲ್ಲಾಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ ದೇವದಾಸ್ ಬಳಿ ಡೀಲ್ಗೆ ಮುಂದಾಗಿದ್ದಾರೆ. ಕೊನೆಗೆ ಮಡಿಕೇರಿಯ ನಾಪೋಕ್ಲು ಠಾಣೆಯಲ್ಲೇ ಎಸ್'ಐ ಮುಂದೆಯೇ ಈ ಮೆಗಾ ಡೀಲ್ ನಡೆದಿದೆ.
ಎಸ್ಐ ಮುಂದೆ ಮಹಿಳೆ ಹಾಗೂ ಅವರ ಪರ ಸೆಟಲ್ ಮೆಂಟ್'ಗೆ ನಿಂತಿದ್ದ ವೈದ್ಯ ದೇವದಾಸ್'ರನ್ನು ಕರೆಸಿದ್ದಾರೆ. ಆ ವ್ಯಕ್ತಿಯ ಪರವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ 2 ಸಾವಿರ ಮತ್ತು 500 ರೂ ನೋಟುಗಳ ಕಂತೆಯನ್ನು ನೀಡಿದ್ದಾರೆ. ಅಲ್ಲದೆ ಆ ಮಹಿಳೆಯಿಂದ ಪಡೆದು ಅಡವಿಟ್ಟಿದ್ದ ಆಭರಣವನ್ನೂ ನೀಡಿದ್ದಾರೆ. ಈ ವೀಡಿಯೋ ಕೂಡಾ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ.
ಎಸ್ಐ ಮುಂದೆಯೇ, ಅವರ ಕಚೇರಿಯಲ್ಲೇ ಡೀಲ್ ಮಾಡಿ, ಪ್ರಕರಣಕ್ಕೆ ಇತಿಶ್ರೀ ಹಾಡಿದ್ದು ಸರೀನಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಎಲ್ಲವೂ ಕಣ್ಮುಂದೆ ನಡೆಯುತ್ತಿದ್ದರೂ ಪ್ರಕರಣದಲ್ಲಿ ತನ್ನದೇನೂ ಪಾತ್ರ ಇಲ್ಲವೆಂಬಂತೆ ಕುಳಿತಿರುವ ವೃತ್ತ ನಿರೀಕ್ಷಕರ ಮೌನ ತಪ್ಪಲ್ಲವೇ? ಈ ಬಗ್ಗೆ ದೂರು ದಾಖಲಾದರೂ ಎಸ್ಪಿ ರಾಜೇಂದ್ರ ಪ್ರಸಾದ್ ಮೌನ ವಹಿಸಿದ್ದೇಕೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನು ಪ್ರಕರಣದ ಕಿಂಗ್ 'ಪಿನ್ ಗಳಲ್ಲೊಬ್ಬರಾದ ನಾಪೋಕ್ಲು ಎಸ್ ಐ ವೆಂಕಟೇಶ್ ಈ ಹಿಂದೆ ಮಂಡ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಮರಳು ದಂಧೆ ಆರೋಪ ಕೇಳಿಬಂದಿತ್ತು. ಆ ಅಲ್ಲಿ ಸಸ್ಪೆಂಡ್ ಮಾಡಲಾಗಿತ್ತು. ಆದ್ರೂ ಬುದ್ದಿ ಕಲಿಯದ ವೆಂಕಟೇಶ್ ನಾಪೋಕ್ಲು ವ್ಯಾಪ್ತಿಯಲ್ಲಿ ನಡೆಸುತ್ತಿರುವ ಮರಳು ದಂಧೆಗೆ ಬೆನ್ನೆಲುಬಾಗಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿದೆ.
ಅಲ್ಲದೇ ವೈದ್ಯಾಧಿಕಾರಿ ದೇವದಾಸ್ ವಿರುದ್ಧವೂ ಹಲವು ಆರೋಪಗಳು ಕೇಳಿಬಂದಿವೆ. ನಾಪೋಕ್ಲುವಿನಲ್ಲಿರುವ ಕ್ಲಿನಿಕ್ ಬೇನಾಮಿಯಾಗಿದೆ. ಅದ್ರಲ್ಲಿ ಹೆಚ್ಚಾಗಿ ಅಬಾರ್ಷನ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಲೆಕ್ಕವಿಲ್ಲದಷ್ಟು ಭ್ರೂಣ ಹತ್ಯೆ ನಡೆಯುತ್ತಿದೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಇದೆ. ಅಬಾರ್ಷನ್'ಗೆ ಒಳಗಾದ ಮಹಿಳೆಯರೇ ವೈದ್ಯರ ಬೇನಾಮಿ ಕ್ಲಿನಿಕ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
