ಕೈ ಕೊಟ್ಟು ಬಿಜೆಪಿ ಸೇರಲು ರೆಡಿಯಾದ ಇಬ್ಬರು ಕಾಂಗ್ರೆಸ್ ಮುಖಂಡರು ?
- ಹಾಸನದಿಂದ ಎ. ಮಂಜು, ತುಮಕೂರಿನಿಂದ ಕೆ.ಎನ್ ರಾಜಣ್ಣ ಬಿಜೆಪಿ ಗೆ ಸೇರ್ಪಡೆ ಸಾಧ್ಯತೆ
- ಲೋಕಸಭೆಯಲ್ಲಿ ಎರಡೂ ಕ್ಷೇತ್ರಗಳು ಜೆಡಿಎಸ್ ಪಾಲಾದರೆ ಬಿಜೆಪಿಯಿಂದ ಸ್ಪರ್ಧಿಸುವ ಸುಳಿವು !
ಬೆಂಗಳೂರು[ಜು.24]: ಲೋಕಸಭೆ ಚುನಾವಣಾ ಮೈತ್ರಿಗೆ ಕಾಂಗ್ರೆಸ್ ಮಾಜಿ ಶಾಸಕರ ಅಪಸ್ವರ ಹಿನ್ನಲೆಯಲ್ಲಿ ಹಾಸನ, ತುಮಕೂರು ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ನಾಯಕರು ತಿರುಗಿ ಬಿದ್ದಿದ್ದಾರೆ.
ಮೈತ್ರಿ ಬಗ್ಗೆ ಮಾತನಾಡಬೇಡಿ ಅಂದರೂ ಹಿರಿಯ ನಾಯಕರು ತಲೆಕೆಡಿಸಿಸಿಕೊಳ್ಳದ ಕಾರಣ ಎರಡೂ ಜಿಲ್ಲೆಯ ಪ್ರಮುಖ ನಾಯಕರು ಬಿಜೆಪಿ ಹೋಗಲಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ.
ಹಾಸನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಜಿಲ್ಲೆಯ ಪ್ರಮುಖ ನಾಯಕ ಹಾಗೂ ಮಾಜಿ ಸಚಿವ ಎ.ಮಂಜು ಅವರು ಬಿಜೆಪಿಗೆ ಸೇರಿಕೊಳ್ಳಲಿದ್ದಾರೆ. ಕಳೆದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಮಂಜು ತಮ್ಮ ಸ್ವಕ್ಷೇತ್ರ ಅರಕಲಗೂಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ವಿರುದ್ಧ ಸೋಲು ಅನುಭವಿಸಿದ್ದರು. ಅದಲ್ಲದೆ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆಲ್ಲುವುದರೊಂದಿಗೆ ಖಾತೆ ತೆರೆದಿದ್ದು ಮಂಜುರನ್ನು ಬಿಜೆಪಿಗೆ ಸೆಳೆದುಕೊಂಡು ಲೋಕಸಭೆ ಚುನಾವಣೆಯಲ್ಲಿ ಅಧಿಪತ್ಯ ಸ್ಥಾಪಿಸಲು ಹೊರಟಿದೆ.
ಅದೇ ರೀತಿ ತುಮಕೂರಲ್ಲೂ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಪಕ್ಷ ತ್ಯಜಿಸುತ್ತೇನೆ ಎಂದಿರುವ ಹಿರಿಯ ಮುಖಂಡ ಕೆ.ಎನ್. ರಾಜಣ್ಣ ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾದರೆ ಬಿಜೆಪಿಯಿಂದ ಸ್ಪರ್ಧಿಸುತ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.