ಯೋಜನೆಯ ಯಶಸ್ವಿ ಅನುಷ್ಠಾನದಿಂದಾಗಿ ‘ಅನ್ನಭಾಗ್ಯ’ ಯೋಜನೆಯನ್ನು ‘ಕನ್ನಭಾಗ್ಯ’ ಯೋಜನೆ ಎಂದು ಮೂದಲಿಸುತ್ತಿದ್ದ ಬಿಜೆಪಿಯವರು ಅನ್ನಭಾಗ್ಯ ಯೋಜನೆಗೆ ನಮ್ಮ ಫೋಟೋ ಕೂಡ ಹಾಕಿ ಎಂದು ಹಿಂದೆ ಬಿದ್ದಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು(ಜ.04): ‘ಅನ್ನಭಾಗ್ಯ’ದಡಿ ಹೊಸ ಪಡಿತರ ಚೀಟಿ ಪಡೆಯಲು ಆನ್'ಲೈನ್ ಅರ್ಜಿ ವ್ಯವಸ್ಥೆ ಹಾಗೂ ಪ್ರತಿ ತಿಂಗಳು ಪಡಿತರ ಪಡೆಯಲು ಬಯೋ ಮೆಟ್ರಿಕ್ ಕಡ್ಡಾಯಗೊಳಿಸುವುದರಿಂದ 7-8 ಲಕ್ಷ ನಕಲಿ ಕಾರ್ಡ್ ಪತ್ತೆ ಹಚ್ಚಲಾಗಿದೆ. ಜತೆಗೆ ನ್ಯಾಯಬೆಲೆ ಅಂಗಡಿಗಳ ಲೂಟಿಗೆ ಸಂಪೂರ್ಣ ಬ್ರೇಕ್ ಹಾಕುವ ಮೂಲಕ ನೂರಾರು ಕೋಟಿ ಸೋರಿಕೆ ತಡೆದಿದ್ದೇವೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಇದರಿಂದಾಗಿ ನ್ಯಾಯಬೆಲೆ ಅಂಗಡಿ ಮಾಲೀಕರೇ ಸಾರ್ವಜನಿಕರ ಬಳಿಗೆ ಹೋಗಿ ಪಡಿತರ ಪಡೆಯುವಂತೆ ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯೋಜನೆಯ ಯಶಸ್ವಿ ಅನುಷ್ಠಾನದಿಂದಾಗಿ ‘ಅನ್ನಭಾಗ್ಯ’ ಯೋಜನೆಯನ್ನು ‘ಕನ್ನಭಾಗ್ಯ’ ಯೋಜನೆ ಎಂದು ಮೂದಲಿಸುತ್ತಿದ್ದ ಬಿಜೆಪಿಯವರು ಅನ್ನಭಾಗ್ಯ ಯೋಜನೆಗೆ ನಮ್ಮ ಫೋಟೋ ಕೂಡ ಹಾಕಿ ಎಂದು ಹಿಂದೆ ಬಿದ್ದಿದ್ದಾರೆ ಎಂದು ಆರೋಪಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಟಿಕೆಟ್ ಬುಕ್ಕಿಂಗ್

ಬೆಂಗಳೂರು: ಪಡಿತರ ಹಂಚಿಕೆ ಕೇಂದ್ರಗಳಿಗೆ ಆನ್‌'ಲೈನ್ ಸಂಪರ್ಕ ಕಲ್ಪಿಸಿ ಮಾಹಿತಿ ಸಿಂಧು ಕೇಂದ್ರಗಳನ್ನಾಗಿ ಬದಲಿಸಲಾಗಿದೆ. ಈ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ವಿಮಾನ ಟಿಕೆಟ್, ರೈಲ್ವೆ ಟಿಕೆಟ್‌ನಂತಹ ಸೇವೆಗಳನ್ನೂ ಪಡೆಯಬಹುದು ಎಂದು ಪಡಿತರ ಸಚಿವ ಯು.ಟಿ. ಖಾದರ್ ಹೇಳಿದರು. ಇದಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನ್ಯಾಯಬೆಲೆ ವಿತರಣೆ ಹಾಗೂ ಅರ್ಜಿ ಸಲ್ಲಿಕೆ ಮಾಡುವ ಕೆಲಸ ಇಲ್ಲದಿರುವಾಗ ಪಡಿತರ ಅಂಗಡಿಗಳು ಮಾಹಿತಿ ಕೇಂದ್ರಗಳಾಗಿ ಕೆಲಸ ಮಾಡಲಿವೆ. ಟಿಕೆಟ್ ಮಾರಾಟದಿಂದ ಬರುವ ಕಮಿಷನ್ ಪಡೆಯಲಿವೆ ಎಂದರು.