ಅಕ್ಷಯ ತದಿಗೆಗೆ ರಾಜ್ಯದಲ್ಲಿ ಬಂಪರ್ ವಹಿವಾಟು: ಅಪಶಕುನ ಭ್ರಮೆ ಬಿಟ್ಟು ಭರ್ಜರಿ ಚಿನ್ನಕೊಂಡ ಗ್ರಾಹಕರು
ಕಳೆದ ಬಾರಿಗಿಂತ ಶೇ.20ರಷ್ಟು ವಹಿವಾಟು ನಡೆಯುತ್ತದೆ ಎಂದು ಆಭರಣ ವ್ಯಾಪಾರಿಗಳು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಮೀರಿ ಶೇ.25ರಷ್ಟುವಹಿವಾಟು ನಡೆದಿದೆ.
ಬೆಂಗಳೂರು(ಏ.30): ಅಕ್ಷಯ ತೃತೀಯ ಹಬ್ಬದ ಅಂಗವಾಗಿ ಶುಕ್ರವಾರ ಹಾಗೂ ಶನಿವಾರ ರಾಜ್ಯಾದ್ಯಂತ ಒಟ್ಟಾರೆ 2,795 ಕೆ.ಜಿ.ಗೂ ಅಧಿಕ ಚಿನ್ನ ಬಿಕರಿಯಾದರೆ, 1,860 ಕೆ.ಜಿ.ಗೂ ಅಧಿಕ ಬೆಳ್ಳಿ ಮಾರಾಟವಾಗಿದೆ. ಈ ಮೂಲಕ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಸುಮಾರು 796.25 ಕೋಟಿ ರು. ವಹಿವಾಟು ನಡೆದಿದೆ.
ಕಳೆದ ವರ್ಷ 2,236 ಕೆ.ಜಿ. ಚಿನ್ನ ಹಾಗೂ 1,488 ಕೆ.ಜಿ. ಬೆಳ್ಳಿ ಮಾರಾಟವಾಗಿತ್ತು. ಒಟ್ಟಾರೆ 737.28 ಕೋಟಿ ರೂ. ವಹಿವಾಟು ನಡೆದಿತ್ತು. ಈ ಬಾರಿ ಅತಿ ಹೆಚ್ಚು ವಹಿವಾಟು ನಡೆದಿದೆ. ಕಳೆದ ಬಾರಿಗಿಂತ ಶೇ.20ರಷ್ಟು ವಹಿವಾಟು ನಡೆಯುತ್ತದೆ ಎಂದು ಆಭರಣ ವ್ಯಾಪಾರಿಗಳು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಮೀರಿ ಶೇ.25ರಷ್ಟುವಹಿವಾಟು ನಡೆದಿದೆ.
ಈ ಬಾರಿ ಎರಡು ದಿನ ಅಕ್ಷಯ ತೃತೀಯ ಬಂದಿದ್ದರಿಂದ ಜನರು ಉತ್ಸಾಹದಿಂದಲೇ ಚಿನ್ನ, ಬೆಳ್ಳಿ, ವಜ್ರಾಭರಣ ಖರೀದಿಸಿದ್ದಾರೆ. ಇನ್ನು ಕೊನೆಯ ದಿನವಾದ ಶನಿವಾರ ನಗರದ ಆಭರಣ ಮಳಿಗೆಗಳು ಜನಜಂಗುಳಿಯಿಂದ ತುಂಬಿದ್ದವು. ಕೆಲ ಮಳಿಗೆಗಳಲ್ಲಿ ಅಕ್ಷಯ ತದಿಗೆ ಹಿನ್ನೆಲೆಯಲ್ಲಿ ವಿಶೇಷ ಕೌಂಟರ್ಗಳನ್ನು ತೆರೆದು ವಹಿವಾಟು ನಡೆಸಲಾಯಿತು. ಮೊದಲ ದಿನವಾದ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗಳಿಗೆ ಮುಗಿಬಿದ್ದು ಚಿನ್ನ, ಬೆಳ್ಳಿ, ವಜ್ರ ಹೀಗೆ ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಆಭರಣಗಳನ್ನು ಖರೀದಿಸಿದರು. ಜತೆಗೆ ಮೊದಲ ದಿನ ಬುಕ್ಕಿಂಗ್ ಮಾಡಿ ಹೋಗಿದ್ದವರು ಶನಿವಾರ ಒಡವೆಗಳನ್ನು ಮನೆಗೆ ಕೊಂಡೊಯ್ದರು. ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಹಲವು ರಿಯಾಯಿತಿ, ಕೊಡುಗೆಗಳನ್ನು ಘೋಷಿಸಲಾಗಿತ್ತು. ಏ.29ರ ಶನಿವಾರ ಬೆಳಗ್ಗೆ 11 ಗಂಟೆ 50 ನಿಮಿಷಕ್ಕೆ ರೋಹಿಣಿ ನಕ್ಷತ್ರ ಪ್ರವೇಶವಾದ ನಂತರ ತದಿಗೆ ಮುಕ್ತಾಯಗೊಂಡಿತು. ಆದರೆ, ರಾತ್ರಿ 11ರವರೆಗೂ ಕೆಲವೆಡೆ ಖರೀದಿಯಾಗಿದೆ.