ದಾವೂದ್ ಮತ್ತು ಹಲವು ದೇಶಗಳಲ್ಲಿ ಹರಡಿರುವ ಅವನ ವ್ಯವಹಾರದ ಬೇರು ಹಿಡಿಯಲು 50 ಅಧಿಕಾರಿಗಳನ್ನೊಳಗೊಂಡ 5 ವಿಶೇಷ ತಂಡಗಳನ್ನ ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ

ನವದೆಹಲಿ(ಸೆ.02): ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜನ್ಮ ಜಾಲಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕಳೆದ ಎರಡು ದಶಕಗಳಿಂದ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎನ್ನಲಾಗುತ್ತಿರುವ ದಾವೂದ್ ಮತ್ತು ಹಲವು ದೇಶಗಳಲ್ಲಿ ಹರಡಿರುವ ಅವನ ವ್ಯವಹಾರದ ಬೇರು ಹಿಡಿಯಲು 50 ಅಧಿಕಾರಿಗಳನ್ನೊಳಗೊಂಡ 5 ವಿಶೇಷ ತಂಡಗಳನ್ನ ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐನ ರಾ ಮತ್ತು ಇಂಟರ್ ಪೋಲ್ ವಿಂಗ್`ನಿಂದ ಅಧಿಕಾರಿಗಳನ್ನ ವಿಶೇಷ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ತಂಡ ಪಾಕಿಸ್ತಾನ, ದುಬೈ ಸೇರಿದಂತೆ ವಿವಿಧೆಡೆ ದಾವೂದ್ ಗ್ಯಾಂಗ್ ಚಲನವಲನಗಳನ್ನ ಮಾನಿಟರ್ ಮಾಡಲಿದೆ.

ವಿಶ್ವಾದ್ಯಂತ ದಾವೂದ್ ಇಬ್ರಾಹಿಂನ ವ್ಯವಹಾರಗಳನ್ನ ನೋಡಿಕೊಳ್ಳುವ ಆಪ್ತ ವಲಯದ 11 ಜನರನ್ನ ತನಿಖಾ ಸಂಸ್ಥೆಗಳು ಗುರುತಿಸಿವೆ. ವೈಮಾನಿಕ, ಇಂಧನ, ಪೆಟ್ರೋಲಿಯಂ, ರಿಯಲ್ ಎಸ್ಟೇಟ್ ಸೇರಿದಂತೆ ದಾವೂದ್ ನಡೆಸುತ್ತಿರುವ 7 ಉದ್ಯಮಗಳ ಮೇಲೆ ತನಿಖೆ ನಡೆಯಲಿದೆ.