ನವದೆಹಲಿ(ಸೆ.30): ಪಾಕಿಸ್ತಾನದ ಗಡಿ ದಾಟಿ ಒಳನುಗ್ಗಿ ಉಗ್ರರನ್ನು ಬೇಟೆಯಾಡುವುದು ಎಂದರೆ ಸುಲಭದ ಮಾತಲ್ಲ. ಸ್ವತಃ ಸೇನೆ ಮತ್ತು ಪಾಕ್ ಸರ್ಕಾರವೇ ಭಯೋತ್ಪಾದಕರ ಬೆಂಬಲಕ್ಕೆ ನಿಂತಿರುವುದರಿಂದ ಉಗ್ರರಿಗದು ಸ್ವರ್ಗ. ಆದರೆ, ಇಂತಹ ರಿಸ್ಕ್ ಅರಿತಿದ್ದ ಭಾರತೀಯ ಸೇನೆ ಮಾಸ್ಟರ್ ಪ್ಲಾನ್ ರೆಡಿ ಮಾಡಿತ್ತು. ಸರ್ಜಿಕಲ್ ಸ್ಟ್ರೈಕ್ ಎನ್ನುವ ಚಕ್ರವ್ಯೂಹ ರಚಿಸಿ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ದಾಟಿ ಹೊರಟಿತ್ತು. ಆ ದಾಳಿ ಹೇಗೆ ನಡೆಯಿತು. ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred

ಕಳೆದ ಒಂದು ವರ್ಷದಿಂದ ಗಡಿಯಲ್ಲಿ ಹಲವಾರು ಯೋಧರನ್ನು ಬಲಿ ಪಡೆದಿದ್ದ ಪಾಕ್ ವಿರುದ್ಧ ಕಾರ್ಯಾಚರಣೆಗೆ ಒತ್ತಡ ಹೆಚ್ಚಾಗಿತ್ತು. ಹೀಗಾಗಿ, ರಾತ್ರೋರಾತ್ರಿ ಭಾರತೀಯ ಸೇನೆ ಸರ್ಜಿಕಲ್ ಅಟ್ಯಾಕ್ ಎನ್ನುವ ವ್ಯವಸ್ಥಿತ ಕಾರ್ಯಾಚರಣೆ ನಡೆಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದಲ್ಲಿ ಸಿದ್ಧವಾದ ಸರ್ಜಿಕಲ್ ಅಟ್ಯಾಕ್ ಪ್ಲಾನ್, ಚಕ್ರವ್ಯೂಹದಷ್ಟೇ ವ್ಯವಸ್ಥಿತವಾಗಿತ್ತು..

ಸರ್ಜಿಕಲ್ ಸ್ಟ್ರೈಕ್ ಅಂದ್ರೆ ಚಕ್ರವ್ಯೂಹದಷ್ಟೇ ವ್ಯವಸ್ಥಿತ ದಾಳಿಯ ಪ್ಲಾನ್. ಈ ದಾಳಿ ನಿಯೋಜಿಸಲು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಪ್ರತ್ಯೇಕ ತಂಡವೇ ಇರುತ್ತದೆ. ಎಲ್ಲಿ ದಾಳಿ ಮಾಡಬೇಕು.. ದಾಳಿಗೆ ನಿಯೋಜಿಸಿದ ಸ್ಥಳದಲ್ಲಿ ಎಲ್ಲೆಲ್ಲಿ ಏನೇನಿರುತ್ತೆ.. ಎಷ್ಟು ಜನ ದಾಳಿ ಮಾಡಬೇಕು ಎಂದು ಎಲ್ಲವನ್ನೂ ನಿರ್ಧರಿಸಲಾಗುತ್ತೆ. ಎಷ್ಟು ಹೊತ್ತಿನಲ್ಲಿ ದಾಳಿ ಮುಗಿಸಬೇಕು ಎನ್ನುವುದು ಪೂರ್ವ ನಿರ್ಧರಿತವಾಗಿರುತ್ತೆ.. 30 ನಿಮಿಷದಲ್ಲಿ ದಾಳಿ ಮುಗಿಸಬೇಕು ಎಂದರೆ, 30 ನಿಮಿಷ ಅಷ್ಟೆ. 31ನೇ ನಿಮಿಷಕ್ಕೆ ದಾಳಿ ವಿಸ್ತರಣೆ ಆಗಲ್ಲ. ಈ ತಂಡಕ್ಕೆ, ಐಬಿ, ರಾ ಸೇರಿದಂತೆ ಗುಪ್ತಚರ ಇಲಾಖೆ ಮಾಹಿತಿಗಳು ರವಾನೆಯಾಗುತ್ತಲೇ ಇರುತ್ತವೆ. ಮೂರೂ ಪಡೆಗಳು ಒಟ್ಟಾಗಿ ದಾಳಿ ಮಾಡಬೇಕೆಂದರೆ, ಮೊದಲೇ ಪ್ಲಾನ್ ಮಾಡ್ತಾರೆ. ದಾಳಿ ಮಾಡಬೇಕಾದ ಸ್ಥಳಕ್ಕೆ ಹೆಲಿಕಾಪ್ಟರ್​ನಲ್ಲಿ ಶಸ್ತ್ರಸಜ್ಜಿತ ಕಮಾಂಡೋಗಳನ್ನು ಬಿಡಲಾಗುತ್ತದೆ. ಯೋಜನೆ ಸರಿಯಾಗಿದ್ದರೆ, ದಾಳಿ ಮಾಡಿದ ತಂಡದಲ್ಲಿ ಪ್ರಾಣಹಾನಿಯಾಗುವುದಿಲ್ಲ.

ಇಂದಿನ ದಾಳಿ ಎಷ್ಟು ಯೋಜಿತವಾಗಿತ್ತು ಎಂದರೆ, ನಮ್ಮ ಒಬ್ಬ ಸೈನಿಕರೂ ಕೂಡಾ ಗಾಯಾಳುವಾಗಿಲ್ಲ. ಈ ತಂಡದ ಕಾರ್ಯಾಚರಣೆ, ಎಷ್ಟು ನಿಗೂಢವಾಗಿರುತ್ತೆ ಎಂದರೆ, ಬೇರೆಯವರಿಗೆ ಮುಗಿಯುವವರೆಗೂ ಗೊತ್ತಾಗುವುದಿಲ್ಲ. ಹೀಗಾಗಿಯೇ ದಾಳಿಯ ವಿವರ ಅಧಿಕಾರಿಗಳು ಪ್ರೆಸ್​ಮೀಟ್ ಮಾಡುವವರೆಗೆ ಗೊತ್ತಾಗಲಿಲ್ಲ. ಅದರಂತೆ ಸರ್ಜಿಕಲ್ ಸ್ಟ್ರೈಕ್ ಪ್ಲಾನ್ ಮಾಡಿದ್ದ ಭಾರತೀಯ ಸೇನೆ ಎಲ್ಓಸಿ ದಾಟಿ ಉಗ್ರರನ್ನ ಹೊಡೆದುರುಳಿಸಿತ್ತು..

ಮಧ್ಯರಾತ್ರಿ 12.30ರಿಂದ ಬೆಳಗ್ಗೆ 4.30ರ ಮಧ್ಯೆ ನಮ್ಮ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿದರು. ಪಾಕ್ ಆಕ್ರಮಿತ ಕಾಶ್ಮೀರದ ಸುಮಾರು 2 ಕಿ.ಮೀ. ಒಳಗೆ ನುಗ್ಗಿದ ಭಾರತೀಯ ಸೇನೆ, 500 ಮೀ. ವ್ಯಾಪ್ತಿಯಲ್ಲಿದ್ದ ಉಗ್ರರನ್ನು ಟಾರ್ಗೆಟ್ ಮಾಡಿದರು. ಈ ವ್ಯಾಪ್ತಿಯಲ್ಲಿದ್ದ ಒಟ್ಟು 8 ಕ್ಯಾಂಪ್​ಗಳ ಸಂಪೂರ್ಣ ಡೀಟೈಲ್ಸ್, ಮ್ಯಾಪ್ ಮಿಲಿಟರಿ ಬಳಿ ಇತ್ತು. ಆಯಕಟ್ಟಿನ ಸ್ಥಳಗಳಲ್ಲಿ ಶಸ್ತ್ರಸಜ್ಜಿತ ಯೋಧರು ಒಮ್ಮಿಂದೊಮ್ಮೆಗೆ ದಾಳಿ ನಡೆಸಿದರು. ನಮ್ಮ ಒಬ್ಬ ಯೋಧರಿಗೂ ಗಾಯವಾಗಲಿಲ್ಲ.

ನಸುಕಿನಲ್ಲಿ ದಾಳಿ ಮಾಡಿದ್ರೂ ಭಾರತವೇನೂ ಪಾಕಿಸ್ತಾನದವರಂತೆ ಹೇಡಿತನದ ದಾಳಿ ನಡೆಸಿಲ್ಲ.. ಬದಲಾಗಿ, ಸೇನಾ ಕಾರ್ಯಾಚರಣೆ ನಡೆಸುತ್ತೇವೆಂದು ಪಾಕ್ ಸೇನೆಗೆ ಮೊದಲೇ ಮಾಹಿತಿ ನೀಡಿತ್ತು.. ಸೀಮಿತ ದಾಳಿ ನಡೆಸುತ್ತೇವೆಂದು ಹೇಳಿದ್ದ ಭಾರತ ಶತ್ರುವಿಗೆ ನೇರ ಆಹ್ವಾನ ನೀಡಿಯೇ ದಾಳಿ ನಡೆಸಿತ್ತು. ಆದರೆ, ಮೊದಲಿಗೆ ಭಾರತದ ದಾಳಿಯೇ ಸುಳ್ಳು ಎನ್ನುತ್ತಿದ್ದ ಪಾಕಿಸ್ತಾನ ಈಗ, ಪ್ರತಿದಾಳಿಗೆ ಸಿದ್ಧವಾಗ್ತಿದೆ ಎನ್ನಲಾಗ್ತಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಕಾಶ್ಮೀರ, ಪಂಜಾಬ್, ಗುಜರಾತ್​ ಗಡಿಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್​ನ ಪಾಕ್ ಗಡಿಯಿಂದ 10 ಕಿ.ಮೀ. ದೂರದ ಜನರ ಸ್ಥಳಾಂತರ ಮಾಡ್ಲಾಗ್ತಿದೆ. ತಾನೇ ಪಾಲಿಸಿ ಪೋಷಿಸಿದ 38 ಉಗ್ರರು ಮತ್ತು ಒಂಭತ್ತು ಮಂದಿ ಸೈನಿಕರು ಭಾರತೀಯ ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ. ಪಾಕಿಸ್ತಾನಕ್ಕೆ ಇದು ಬೇಕಿತ್ತಾ..?