ಮೋದಿಗೆ ಬರೆದ ಒಂದು ಪತ್ರದಿಂದ 3 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ!
ವಿದ್ಯುತ್ ಸಂಪರ್ಕ ಇಲ್ಲದ ತನ್ನೂರಿನ ಸಮೀಪ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವಂತೆ ರಾಯಚೂರಿನ ಯುವಕನಿಂದ ಮೋದಿಗೆ ಪತ್ರ | ಮೋದಿ ಕಾರ್ಯಾಲಯದಿಂದ ಸ್ಪಂದನೆ
ರಾಯಚೂರು (ಜೂ. 2): ವಿದ್ಯುತ್ ಸಂಪರ್ಕ ಇಲ್ಲದ ತನ್ನೂರಿನ ಸಮೀಪ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವಂತೆ ರಾಯಚೂರಿನ ಯುವಕನೊಬ್ಬ ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಿಂದ ಸರಿ ಸುಮಾರು ವರ್ಷದ ಬಳಿಕ ಸ್ಪಂದನೆ ದೊರೆತಿದ್ದು, ಹಳ್ಳಿಗಳಿಗೆ ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಭಾಗ್ಯ ಲಭಿಸಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ದೇವರಭೂಪೂರು ಗ್ರಾಮದ ಅಮರೇಶ ಗುರುಗುಂಟಾ 2018 ರ ಜೂ.28 ರಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ದೇವರಭೂಪೂರು ಗ್ರಾ.ಪಂ. ವ್ಯಾಪ್ತಿಯ ಗಲಗಿನ ದೊಡ್ಡಿ, ಕಾಳಪ್ಪನ ದೊಡ್ಡಿ ಹಾಗೂ ಗುಳೆದರ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು.
ಬಳಿಕ 2018 ರ ಸೆ.15 ರಂದು ಟ್ವೀಟ್ ಸಹ ಮಾಡಿದ್ದರು. ಯುವಕನ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದ್ದು, ಮೂರು ದೊಡ್ಡಿಗಳಿಗೆ ಭೇಟಿ ನೀಡಿ ಸರ್ವೆ ನಡೆಸಿದ ಜೆಸ್ಕಾಂ ಸಿಬ್ಬಂದಿ, ಸೌಭಾಗ್ಯ ಯೋಜನೆಯಡಿ 3 ದೊಡ್ಡಿಗಳಲ್ಲಿ ಇರುವ 45 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.