ಅಂಬ್ಯುಲೆನ್ಸ್ ಸಿಗದ ಕಾರಣ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಕೊಂಡೊಯ್ದ ಸಂಬಂಧಿಕರು
ಕತಿಹಾರ್/ಬಿಹಾರ (ಸೆ.28): ಅಂಬುಲೆನ್ಸ್ ಸಿಗದ ಕಾರಣ ಸಂಬಂಧಿಕರೊಬ್ಬರ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹೊತ್ತೊಯ್ದ ಮನಕಲಕಿಸುವ ಘಟನೆ ಬಿಹಾರದ ಕತಿಹಾರ್ ನಲ್ಲಿ ನಡೆದಿದೆ.
ಕುರ್ಸೈಲಾ ನಿವಾಸಿಯಾದ ಶೈಂತು ಶಾ 14 ದಿನಗಳ ಹಿಂದೆ ಗಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. ಅವರ ಸಂಬಂಧಿಕರು ಪೋಸ್ಟ್ ಮಾರ್ಟಮ್ ಗಾಗಿ ಶವವನ್ನು ಕತಿಹಾರ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತೇವೆ ಎಂದು ವೈದ್ಯರು ಹೇಳಿದ್ದರು.
ಆದರೆ ದೇಹ ಕೊಳೆತದ್ದರಿಂದ ಮರಣೋತ್ತರ ಪರೀಕ್ಷೆಯನ್ನು ನಿರಾಕರಿಸಿದ ವೈದ್ಯರು ಬಗಲ್ ಪುರದಲ್ಲಿರುವ ಜವಹರ್ ಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲು ಸೂಚಿಸಿದರು. ಆದರೆ ತಕ್ಷಣಕ್ಕೆ ಅಂಬ್ಯುಲೆನ್ಸ್ ಸಿಗದ ಕಾರಣ ಮೂವರು ಸಂಬಂಧಿಕರು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಸುತ್ತಿ ಕೊಂಡೊಯ್ದಿದ್ದಾರೆ. ಈ ದೃಶ್ಯ ನೋಡುಗರ ಮನಕಲಕಿಸುವಂತಿದೆ.