ಮಕ್ಕಳ ಕಳ್ಳರೆಂದು ಭಾವಿಸಿ ಕಾಂಗ್ರೆಸ್ ನಾಯಕರ ಥಳಿಸಿದ ಗ್ರಾಮಸ್ಥರು!
ಮಕ್ಕಳ ಕಳ್ಳರೆಂದು ಭಾವಿಸಿ ಕಾಂಗ್ರೆಸ್ ನಾಯಕರ ಥಳಿಸಿದ ಗ್ರಾಮಸ್ಥರು!| ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಘಟನೆ
ಭೋಪಾಲ್[ಜು.28]: ಕಾಂಗ್ರೆಸ್ನ ಮೂವರು ಮುಖಂಡರನ್ನು ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರ ಗುಂಪೊಂದು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಧರ್ಮೇಂದ್ರ ಶುಕ್ಲಾ, ಧರ್ಮುಸಿಂಗ್ ಲಾಂಜೀವರ್ ಮತ್ತು ಲಲಿತ್ ಬರಾಸ್ಕರ್ ಹಲ್ಲೆಗೊಳಗಾದವರು.
ಶನಿವಾರ ರಾತ್ರಿ ನೇವಲ್ಸಿಂಗ್ ಗ್ರಾಮದತ್ತ ಮಕ್ಕಳ ಕಳ್ಳರು ಕಾರಿನಲ್ಲಿ ಆಗಮಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದನ್ನೇ ನಂಬಿದ ಗ್ರಾಮಸ್ಥರು ಗ್ರಾಮದ ಬಳಿ ರಸ್ತೆಗೆ ಅಡ್ಡವಾಗಿ ಮರ ಕಡಿದು ಹಾಕಿ ಮಕ್ಕಳ ಕಳ್ಳರಿಗಾಗಿ ಕಾಯುತ್ತಿದ್ದರು. ಆದರೆ ಅದೇ ವೇಳೆಗೆ ಅಲ್ಲಿಗೆ ಕಾಂಗ್ರೆಸ್ ನಾಯಕರು ಕಾರಿನಲ್ಲಿ ಬಂದಿದ್ದು, ಮರ ಕಡಿದು ರಸ್ತೆ ಅಡ್ಡ ಹಾಕಿದ್ದನ್ನು ಡಕಾಯಿತರ ಕೃತ್ಯ ಇರಬಹುದು ಎಂದು ಅಂದಾಜಿಸಿ ಅಲ್ಲಿಂದ ತಮ್ಮ ಕಾರು ಹಿಂದಿರುಗಿಸಿಕೊಂಡು ವಾಪಸ್ ಹೊರಟಿದ್ದರು.
ಆದರೆ ಇವರನ್ನು ಬೆನ್ನಟ್ಟಿದ ಗ್ರಾಮಸ್ಥರು ಅವರ ಕಾರನ್ನು ಜಖಂಗೊಳಿಸಿ ಮೂವರೂ ನಾಯಕರನ್ನು ಥಳಿಸಿದ್ದಾರೆ. ನಂತರ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.