ಸಾಲಬಾಧೆ : ವಾರದಲ್ಲಿ 20 ರೈತರ ಆತ್ಮಹತ್ಯೆ
ಸಾಲದ ಶೂಲಕ್ಕೆ ಸಿಲುಕಿ ರಾಜ್ಯದಲ್ಲಿ ಭಾನುವಾರ ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಮೂಲಕ ಕಳೆದ ಭಾನುವಾರದಿಂದ ಒಂದೇ ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 20ಕ್ಕೇರಿದೆ.
ಬೆಂಗಳೂರು : ಸಾಲದ ಶೂಲಕ್ಕೆ ಸಿಲುಕಿ ರಾಜ್ಯದಲ್ಲಿ ಭಾನುವಾರ ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಮೂಲಕ ಕಳೆದ ಭಾನುವಾರದಿಂದ ಒಂದೇ ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 20ಕ್ಕೇರಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪಿ. ಎನ್. ರವೀಂದ್ರ(33) ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೆಂಗಟ್ಟೆ ಗ್ರಾಮದ ನಾಗರಾಜನಾಯ್ಕ(45) ಮೃತ ರೈತರು. ರವೀಂದ್ರ ಅವರು ಸಹಕಾರ ಸಂಘ ಸೇರಿ ವಿವಿಧೆಡೆ 7.4 ಲಕ್ಷ ಸಾಲ ಹೊಂದಿದ್ದರೆ, ನಾಗರಾಜನಾಯ್ಕ ಅವರು 6.2ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು.
ತೀವ್ರ ಸಾಲಬಾಧೆಯಿಂದ ನೊಂದು ಭಾನುವಾರ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಸಾಲದ ಶೂಲಕ್ಕೆ ಸಿಲುಕಿ ಕಳೆದ ಭಾನುವಾರದಿಂದ ಮಂಗಳವಾರದವರೆಗೆ 10 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಬುಧವಾರ ಪಿರಿಯಾಪಟ್ಟಣದ ಒಬ್ಬ ರೈತ, ಗುರುವಾರ, ಶುಕ್ರವಾರ ತಲಾ ಇಬ್ಬರು ರೈತರು ಹಾಗೂ ಶನಿವಾರ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಭಾನುವಾರವೂ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಒಂದೇ ವಾರದಲ್ಲಿ 20 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.