93 ಭಾರತೀಯರನ್ನು ನೇಣಿಂದ ಪಾರು ಮಾಡಿದ ಯುಎಇ ಸಿಂಗ್
ಸಂಯುಕ್ತ ಆರಬ್ ಸಂಸ್ಥಾನದಲ್ಲಿ (ಯುಎಇ) ಭಾರತದ 15 ಮಂದಿಯನ್ನು ನೇಣಿನ ಕುಣಿಕೆಯಿಂದ ಪಾರು ಮಾಡಲಾಗಿದೆ. ಸಮಾಜಸೇವಕರೂ ಆದ ದುಬೈ ಮೂಲದ ಹೋಟೆಲ್ ಉದ್ಯಮಿಯೊಬ್ಬರು ಇವರನ್ನು ನೇಣಿನಿಂದ ಪಾರು ಮಾಡಿದ್ದಾರೆ.
ಜಲಂಧರ್: ಸಂಯುಕ್ತ ಆರಬ್ ಸಂಸ್ಥಾನದಲ್ಲಿ (ಯುಎಇ) ಭಾರತದ 15 ಮಂದಿಯನ್ನು ನೇಣಿನ ಕುಣಿಕೆಯಿಂದ ಪಾರು ಮಾಡಲಾಗಿದೆ. ಸಮಾಜಸೇವಕರೂ ಆದ ದುಬೈ ಮೂಲದ ಹೋಟೆಲ್ ಉದ್ಯಮಿಯೊಬ್ಬರು ಇವರನ್ನು ನೇಣಿನಿಂದ ಪಾರು ಮಾಡಿದ್ದಾರೆ.
ಇವರಲ್ಲಿ 14 ಜನ ಪಂಜಾಬಿಗಳು ಹಾಗೂ ಓರ್ವ ಬಿಹಾರಿ ಇದ್ದಾರೆ. ಎಸ್.ಪಿ. ಸಿಂಗ್ ಒಬೆರಾಯ್ ಎಂಬ ದುಬೈ ಉದ್ಯಮಿಯು ಇವರ ರಕ್ಷಣೆಗೆ ಕಾರಣೀಕರ್ತರಾಗಿದ್ದಾರೆ. ಈ 15 ಮಂದಿ ಕಳ್ಳಬಟ್ಟಿತಯಾರಿಕೆಯ ಗ್ಯಾಂಗ್ನ ಜಾಲದಲ್ಲಿ ಸಿಲುಕಿದ್ದರು. ಇದು ಗುಂಪು ಘರ್ಷಣೆಗೆ ಕಾರಣವಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಇವರಿಗೆ 2011ರಲ್ಲೇ ಗಲ್ಲು ಶಿಕ್ಷೆಯಾಗಿತ್ತು.
ಆದರೆ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬವನ್ನು ಸಂಪರ್ಕಿಸಿದ ಸಮಾಜಸೇವಕ ಒಬೆರಾಯ್ ಅವರು, ಈ ಭಾರತೀಯರ ರಕ್ಷಣೆಗಾಗಿ ಮುಂದಾದರು. ಸಾವನ್ನಪ್ಪಿದವನ ಕುಟುಂಬಕ್ಕೆ ಜೀವಧನ (ಇದಕ್ಕೆ ಯುಎಇನಲ್ಲಿ ಬ್ಲಡ್ ಮನಿ ಎನ್ನುತ್ತಾರೆ- ಒಂದರ್ಥದಲ್ಲಿ ಪರಿಹಾರ) ನೀಡುವುದಾಗಿ ಮನವೊಲಿಸಿದರು.
ಈ ರೀತಿ ಪರಿಹಾರದ ಹಣ ಸ್ವೀಕರಿಸಿ ಅಪರಾಧಿಗಳಿಗೆ ಕ್ಷಮೆ ನೀಡಲು ಕುಟುಂಬಕ್ಕೆ ಅವಕಾಶವಿದೆ. ಅದರಂತೆ ಸಂತ್ರಸ್ತನ ಕುಟುಂಬವು ಪರಿಹಾರ ಸ್ವೀಕರಿಸಿ ಅಪರಾಧಿಗಳಿಗೆ ಕ್ಷಮಾದಾನ ನೀಡಿದೆ. ಒಬೆರಾಯ್ ಅವರು ಇಂತಹ ಅನೇಕ ಮಾನವೀಯ ಕಾರ್ಯ ಮಾಡಿದ್ದು, 93 ಭಾರತೀಯರನ್ನು ಈವರೆಗೆ ರಕ್ಷಿಸಿದ್ದಾರೆ.