ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸದಂತೆ ಆಗ್ರಹಿಸಿ ಹಾಗೂ ತಮಿಳುನಾಡು ಅನುಸರಿಸುತ್ತಿರುವ ಕ್ರಮ ಖಂಡಿಸಿ ಏ.12ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಎಲ್ಲರೂ ಸಹಕರಿಸಬೇಕು.

ಬೆಂಗಳೂರು : ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸದಂತೆ ಆಗ್ರಹಿಸಿ ಹಾಗೂ ತಮಿಳುನಾಡು ಅನುಸರಿಸುತ್ತಿರುವ ಕ್ರಮ ಖಂಡಿಸಿ ಏ.12ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಎಲ್ಲರೂ ಸಹಕರಿಸಬೇಕು. ಇಲ್ಲದಿದ್ದರೆ ಕಲ್ಲು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಂದ್‌ಗೆ ಈಗಾಗಲೇ ರಾಜ್ಯದ ಎರಡು ಸಾವಿರ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.

Add Asianetnews Kannada as a Preferred SourcegooglePreferred

ಅದೇ ರೀತಿ ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ರೈತ ಸಂಘ, ಹೋಟೆಲ್ ಮಾಲೀಕರು, ಲಾರಿ ಮಾಲೀಕರು, ಪೆಟ್ರೋಲ್ ಬಂಕ್‌ಗಳು, ಸರ್ಕಾರಿ ನೌಕರರು, ಶಾಲಾ-ಕಾಲೇಜುಗಳು, ರಾಜ್ಯ ಸಾರಿಗೆ ನಿಗಮಗಳು, ಚಿತ್ರೋದ್ಯಮ ಸಹಕರಿಸಬೇಕು ಎಂದರು.

ಕಾವೇರಿ ಕುರಿತು ಏ.9ರಂದು ಸುಪ್ರೀಂ ತೀರ್ಪು ಬರಲಿದೆ. ಈ ತೀರ್ಪು ಕರ್ನಾಟಕದ ಪರ ಇದ್ದರೆ ಏ.12ರ ಬಂದ್ ಹಿಂಪಡೆಯಲಾಗುವುದು. ಒಂದು ವೇಳೆ ತೀರ್ಪು ವಿರುದ್ಧ ಬಂದರೆ ಬಂದ್ ಕಡ್ಡಾಯ ಎಂದು ಹೇಳಿದರು.

ರಜನಿ-ಕಮಲ್ ರಾಜ್ಯ ಪ್ರವೇಶಿಸಿದರೆ ಹುಷಾರ್: ತಮಿಳುನಾಡಿನ ನಟರಾದ ರಜನಿಕಾಂತ್ ಮತ್ತು ಕಮಲ ಹಾಸನ್ ರಾಜಕೀಯ ನೆಲೆ ಕಂಡುಕೊಳ್ಳಲು ಹವಣಿಸುತ್ತಾರೆ. ಅದಕ್ಕಾಗಿ ಕಾವೇರಿ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಈ ಇಬ್ಬರು ನಟರು ರಾಜಕೀಯ ಪ್ರವೇಶ ಮಾಡಬಾರದು, ಗಂಭೀರವಾಗಿರಬೇಕು ಎಂದು ತೀವ್ರ ವಾಗ್ದಾಳಿ ನಡೆಸಿದರು.