ಹಾಸ್ಯಧಾರೆ ವೇಳೆಯೇ ಕಲಾವಿದ ಸಾವು, ನಟನೆ ಎಂದು ಸುಮ್ಮನಿದ್ದ ಪ್ರೇಕ್ಷಕರು!
ದುಬೈನಲ್ಲಿ ವೇದಿಕೆ ಮೇಲೆ ಹಾಸ್ಯ ಮತ್ತು ನಟನೆ ಮಾಡುತ್ತಿದ್ದಾಗ ಹೃದಯಾಘಾತ| ಹಾಸ್ಯಧಾರೆ ವೇಳೆಯೇ ಕಲಾವಿದ ಸಾವು, ನಟನೆ ಎಂದು ಸುಮ್ಮನಿದ್ದ ಪ್ರೇಕ್ಷಕರು|
ದುಬೈ[ಜು.22]: ಭಾರತ ಮೂಲದ ಹಾಸ್ಯನಟ ಮಂಜುನಾಥ್ ನಾಯ್ಡು (36) ದುಬೈನಲ್ಲಿ ವೇದಿಕೆ ಮೇಲೆ ಹಾಸ್ಯ ಮತ್ತು ನಟನೆ ಮಾಡುತ್ತಲೇ ಹೃದಯ ಸ್ತಂಭನದಿಂದ ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ. ಆದರೆ ಇದನ್ನು ವೀಕ್ಷಿಸುತ್ತಿದ್ದ ಸಭಿಕರು ಇದೂ ಕೂಡ ನಟನೆಯ ಭಾಗ ಎಂದು ಅದನ್ನು ನೋಡುತ್ತಲೇ ಕುಳಿತಿದ್ದರು.
ಕೆಲ ಹೊತ್ತಿನ ನಂತರ ನಾಯ್ಡು ಜತೆಗಾರರು ಹೋಗಿ ನೋಡಿದಾಗ ಆಗಲೇ ಮಂಜುನಾಥ ಪ್ರಾಣಪಕ್ಷಿ ಹಾರಿಹೋಗಿದ್ದು ಬೆಳಕಿಗೆ ಬಂದಿದೆ. ವೇದಿಕೆ ಮೇಲೆ ಬೆಂಚ್ ಮೇಲೆ ಕುಳಿತು ಹಾಸ್ಯಧಾರೆ ಹರಿಸುತ್ತಿದ್ದ ಮಂಜುನಾಥ್, ಮಾತಿನ ಮಧ್ಯೆ ತಮ್ಮ ಆರೋಗ್ಯದ ಸ್ಥಿತಿ ಗಂಭೀರವಾಗಿದೆ, ಅದರ ಬಗ್ಗೆ ತಮಗೆ ಭಯಂಕರ ಆತಂಕವಿದೆ ಎಂದು ಹೇಳಿಕೊಳ್ಳುತ್ತಿದ್ದರು.
ಹೀಗೆ ಹೇಳಿಕೊಳ್ಳುತ್ತಲೇ ಬೆಂಚ್ನಿಂದ ನೆಲಕ್ಕೆ ಮಂಜುನಾಥ್ ಉರುಳಿದ್ದು, ಅದು ಹಾಸ್ಯದ ಭಾಗ ಎಂದೇ ತಿಳಿದಿದ್ದ ಸಭಿಕರಿಗೆ ನಂತರದಲ್ಲಿ ನೈಜತೆಯ ಅರಿವಾಗಿದೆ.