ಅನ್ಯಕೋಮಿನ ಯುವತಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದ ಹಿಂದೂ ಯುವಕ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್‌ ಗೂಂಡಾಗಿರಿ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 

ನಾಗಮಂಗಲ [ಅ.13]: ಅನ್ಯಕೋಮಿನ ಯುವತಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದ ಹಿಂದೂ ಯುವಕ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್‌ ಗೂಂಡಾಗಿರಿ ನಡೆಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಅ.9 ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಾಲೇಜು ವಿದ್ಯಾರ್ಥಿಯಾಗಿದ್ದ ಹಿಂದೂ ಯುವಕನೊಬ್ಬ ಇಬ್ಬರು ಅನ್ಯಕೋಮಿನ ಯುವತಿಯರು ಮತ್ತು ಯುವತಿಯರಿಬ್ಬರ ಕೋಮಿಗೆ ಸೇರಿದ ಒಬ್ಬ ಯುವಕನ ಜೊತೆ ಕಾರಿನಲ್ಲಿ ಹೋಗುತ್ತಿದ್ದ. ನಾಲ್ವರು ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ನಾಲ್ವರು ಕಾರಿನಲ್ಲಿ ಹೋಗುತ್ತಿರುವುದನ್ನು ತಿಳಿದ ಅನ್ಯಕೋಮಿನ ಸುಮಾರು 20 ಮಂದಿ ಕಾರನ್ನು ಅಡ್ಡಗಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ಹಿಂದೂ ಯುವಕ ಮತ್ತು ಅನ್ಯಕೋಮಿನ ಯುವತಿಯೊಬ್ಬಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. 

ಹಲ್ಲೆಗೊಳಗಾಗಿರುವ ಯುವತಿ ಹಾಗೂ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿರುವುದನ್ನು ನೋಡಿ ಹಲ್ಲೆ ನಡೆಸಿದ್ದ 20 ಮಂದಿಯ ವಿರುದ್ಧ ನಾಗಮಂಗಲ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಲ್ಲೆ ನಡೆಸಿದವರು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.