ಸಂಸದೆ ಸುಮಲತಾಗೆ ‘ಅಂಬರೀಶ್’ ಐಡಿಯಾ ಕೊಟ್ಟ ಅನರ್ಹ ಶಾಸಕ ನಾರಾಯಣಗೌಡ
ಮಂಡ್ಯ ಸಂಸದೆ ಸುಮಲತಾಗೆ ಕೆ.ಆರ್ ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣ ಗೌಡ ಸಲಹೆ ನೀಡಿದ್ದಾರೆ. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ.
ಮಂಡ್ಯ (ನ.09) : ಮಂಡ್ಯದ ಕೆ.ಆರ್ ಪೇಟೆಯಲ್ಲಿ ರಾಜ್ಯ ಸರ್ಕಾರದಿಂದ ಬೃಹತ್ ಆರೋಗ್ಯ ಮೇಳೆ ನಡೆಸಲಾಗಿದೆ.
ಆರೋಗ್ಯ ಮೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಇಷ್ಟು ದೊಡ್ಡ ಮಟ್ಟದ ಆರೋಗ್ಯ ಮೇಳ ಆಯೋಜಿಸಲು ಸರ್ಕಾರ ಸಹಕರಿಸಿದೆ ಎಂದು ರಾಜ್ಯ ಸರ್ಕಾರವನ್ನು ಹೊಗಳಿದ್ದಾರೆ.
ಮಂಡ್ಯದ ಮಣ್ಣಲ್ಲಿ ಹುಟ್ಟಿದ ನನ್ನ ಪೂಜ್ಯರಾದ ಯಡಿಯೂರಪ್ಪ ಶಿವಮೊಗ್ಗದಲ್ಲಿ ಬೆಳೆದು ರಾಜ್ಯದ ಸಿಎಂ ಆಗಿದ್ದಾರೆ. ಅವರ ಸಹಕಾರದಿಂದ ಎಲ್ಲವೂ ನಡೆಯುತ್ತಿದೆ ಎಂದರು.
ರಾಜಿನಾಮೆ ಬಳಿಕ ಯಡಿಯೂರಪ್ಪ ಮನೆಗೆ ಹೋಗಿದ್ದೆ. 700ಕೋಟಿ ಅನುದಾನವನ್ನ ಎಚ್ಡಿಕೆ ಸರ್ಕಾರದಲ್ಲಿ ಕೇಳಿದ್ದೆ. ಆದರೆ ಅವರು ಕೊಡಲಿಲ್ಲ ಸರ್ ಎಂದು ಯಡಿಯೂರಪ್ಪ ಬಳಿ ಹೇಳಿದೆ. ಇದಕ್ಕೆ ಸಮ್ಮತಿಸಿದ ಅವರು ಈಗಾಗಲೇ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ನೀಡಿ ಆಶೀರ್ವಾದ ಮಾಡಿದ್ದಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಇದೇ ವೇಳೆ ಕೆ.ಆರ್ ಪೇಟೆ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ನೀಡುವಂತೆಯೂ ಬೇಡಿಕೆ ಇಟ್ಟಿದ್ದು, ನಿಮ್ಮ ತಂದೆ ಹೆಸರಲ್ಲಿ ಕ್ಷೇತ್ರದಲ್ಲಿ ಒಂದು ಮೆಡಿಕಲ್ ಕಾಲೇಜು ಕೊಡಿ ಎಂದರು.
ಯಡಿಯೂರಪ್ಪ ನಮ್ಮ ತಾಲೂಕಿನ ಮುಖ್ಯಮಂತ್ರಿ ಎಂದು ಹೇಳಿದ ನಾರಾಯಣಗೌಡ, ಮೂರುವರೆ ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಭರವಸೆಯ ಮಾತುಗಳನ್ನಾಡಿದರು. ನಮಗೆ ಯಾವದೇ ಭಯ ಇಲ್ಲವೆಂದ ಅವರು ನಾವೆಲ್ಲರೂ ಅವರಿಂದ ತಾಲೂಕಿನ ಅಭಿವೃದ್ಧಿ ಪಡೆಯೋಣ ಎಂದು ಯಡಿಯೂರಪ್ಪ ಅವರನ್ನು ಹಾಡಿಹೊಗಳಿದರು.
ಇನ್ನು ಇದೇ ವೇಳೆ ಸಂಸದೆ ಸುಮಲತಾಗೂ ಸಲಹೆ ನೀಡಿದ್ದು, ಅಂಬರೀಶ್ ಅಣ್ಣನ ರೀತಿಯ ಮಾತಿನ ಶೈಲಿಯನ್ನ ನೀವು ರೂಢಿಸಿಕೊಳ್ಳಿ ಎಂದೂ ಹೇಳಿದರು.