ತೀರ್ಥಸ್ನಾನ ಮಾಡಲೆಂದು ನದಿಗೆ ಇಳಿದಿದ್ದ ಯೋಗಪಟು ಸಾವು: ಕಾರಣ ಮಾತ್ರ ನಿಗೂಢ?
ಇತ್ತೀಚಿನ ದಿನಗಳಲ್ಲಿ ಸಾವು ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ನೃತ್ಯ ಮಾಡುತ್ತಾ ಹಾಡು ಹೇಳುತ್ತಾ ಅಥವಾ ನಿಂತಲ್ಲಿ ಕುಂತಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದವರನ್ನು ನೋಡಿದ್ದೇವೆ.

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಫೆ.16): ಇತ್ತೀಚಿನ ದಿನಗಳಲ್ಲಿ ಸಾವು ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ನೃತ್ಯ ಮಾಡುತ್ತಾ ಹಾಡು ಹೇಳುತ್ತಾ ಅಥವಾ ನಿಂತಲ್ಲಿ ಕುಂತಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬರು ಯೋಗಪಟು ನೀರಿನಲ್ಲಿ ಯೋಗ ಮಾಡುತ್ತಲೆ ಮೃತಪಟ್ಟಿದ್ದಾರೆ.
ಕೊಳ್ಳೆಗಾಲ ಪಟ್ಟಣದ ಲಕ್ಷ್ಮಿನಾರಾಯಣಸ್ವಾಮಿ ದೇವಸ್ಥಾನ ಬೀದಿಯ ನಾಗರಾಜು ಒಬ್ಬ ಯೋಗಪಟು. 78 ವರ್ಷ ವಯಸ್ಸಿನ ಅವರು ನಿತ್ಯವೂ ಯೋಗಾಭ್ಯಾಸ ಮಾಡುವುದನ್ನು ರೂಢಿ ಮಾಡಿಕೊಂಡು ಆರೋಗ್ಯವಾಗಿದ್ದರು. ಮೊನ್ನೆ ಕೊಳ್ಳೇಗಾಲದಲ್ಲಿ ಲಕ್ಷ್ಮೀನಾರಾಯಣ ಸ್ವಾಮಿ ರಥೋತ್ಸವ ಜರುಗಿತ್ತು. ರಥೋತ್ಸವ ಆದ ಎರಡನೇ ದಿನಕ್ಕೆ ಭಕ್ತರು ಕೊಳ್ಳೇಗಾಲದ ದಾಸನಪುರ ಬಳಿ ಹರಿಯುವ ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ಮಾಡುವ ಸಂಪ್ರದಾಯ ಇದೆ.
ಅದರಂತೆ ದಾಸನಪುರ ಬಳಿ ಹರಿಯುವ ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ಮಾಡಲೆಂದು ನಾಗರಾಜು ಹಾಗು ಸ್ನೇಹಿತರು, ಸಂಬಂಧಿಕರು ತೆರಳಿದ್ದರು. ನದಿಗೆ ಇಳಿದ ನಾಗರಾಜು ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಆದರೆ ಎಷ್ಟು ಹೊತ್ತಾದರೂ ಹಾಗೇ ತೇಲುವ ಸ್ಥಿತಿಯಲ್ಲೇ ಇದ್ದ ನಾಗರಾಜ್ ಅವರನ್ನು ನದಿ ದಡದಿಂದ ನೋಡಿದ ಜೊತೆಗಿದ್ದ ಸ್ನೇಹಿತರಿಗೆ ಎಷ್ಟು ಹೊತ್ತಾದರು ಅದೇ ಸ್ಥಿತಿಯಲ್ಲಿರುವುದನ್ನು ನೋಡಿ ಅನುಮಾನ ಬಂದಿದೆ.
ಸಂಪೂರ್ಣ ಹದಗೆಟ್ಟ ಹನೂರು-ಬಂಡಳ್ಳಿ ಮಾರ್ಗದ ರಸ್ತೆ: ಗುಂಡಿಮಯ ರಸ್ತೆಯಲ್ಲಿ ಒಂದಲ್ಲ ಒಂದು ಆಕ್ಸಿಡೆಂಟ್!
ನಾಗರಾಜು ಅವರು ತೇಲುತ್ತಿದ್ದ ಸ್ಥಳಕ್ಕೆ ತೆಪ್ಪದಲ್ಲಿ ಹೋಗಿ ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಅವರ ದೇಹವನ್ನು ತೆಪ್ಪದಲ್ಲೇ ನದಿ ದಡಕ್ಕೆ ತರಲಾಯಿತು. ನಾಗರಾಜು ಅವರಿಗೆ ಯಾವುದೇ ಕಾಯಿಲೆಗಳು ಇರಲಿಲ್ಲ. ಹೃದಯಾಘಾತವಾಯ್ತಾ ಅಥವಾ ಉಸಿರುಗಟ್ಟಿ ಸತ್ತರಾ ಎಂಬುದರ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಏನೆಂಬುದು ಗೊತ್ತಾಗಲಿದೆ. ಒಟ್ನಲ್ಲಿ ಸಾವು ಯಾರಿಗೆ ಹೇಗೆ ಬರುತ್ತೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.