ಸದ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗುವ ಪ್ರಶ್ನೆ ಉದ್ಭವಿಸಲ್ಲ. ಆದರೆ, ಹೈಕಮಾಂಡ್‌ ಯಾವ ತೀರ್ಮಾನವನ್ನು ತೆಗೆದುಕೊಂಡರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ರಾಯಚೂರು (ಏ.30): ಸದ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗುವ ಪ್ರಶ್ನೆ ಉದ್ಭವಿಸಲ್ಲ. ಆದರೆ, ಹೈಕಮಾಂಡ್‌ ಯಾವ ತೀರ್ಮಾನವನ್ನು ತೆಗೆದುಕೊಂಡರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾದರೆ ಸ್ವಾಗತ ಎಂಬ ಗೃಹ ಸಚಿವ ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್‌ ಇಳಿಸಿದರೇ ತಾನೆ ಆ ಪ್ರಶ್ನೆ ಬರುತ್ತದೆ. ಆ ರೀತಿಯಾಗಿ ನಡೆದಾಗ ಮಾತನಾಡುತ್ತೇನೆ ಎಂದರು. ರಾಜ್ಯ ರಾಜಕಾರಣದಲ್ಲಿ ಮೇ15 ಕ್ರಾಂತಿ ವಿಚಾರವಾಗಿ ಪ್ರಕ್ರಿಯಿಸಿದ ಅವರು, ಕಳೆದ ನವೆಂಬರ್‌ನಿಂದಲೂ ಹೇಳುತ್ತಲೇ ಇದ್ದಾರೆ, ಇದೇ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ನಾನು ಸಹ ಉತ್ತರ ಕೊಡುತ್ತಾ ಬಂದಿದ್ದೀನಿ.

ಎಲ್ಲರೂ ಬದ್ಧ

ಈಗಾಗಲೇ ಹೇಳೋದನ್ನೆಲ್ಲಾ ಹೇಳಿಯಾಗಿದ್ದು, ಹೆಚ್ಚಾಗಿ ಮಾತನಾಡುವುದಿಲ್ಲ, ಈ ಕುರಿತು ಪಕ್ಷದ ಹೈ ಕಮಾಂಡ್‌ ಇಲ್ಲವೇ ಸಿಎಂ ಅವರನ್ನೇ ಕೇಳಿ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ ಜನ್ಮದಿನಕ್ಕೆ ಹೈಕಮಾಂಡ್‌ ಗುಡ್ ನ್ಯೂಸ್‌ ಕೊಡುತ್ತದೆ ಎನ್ನುವ ವಿಚಾರವಾಗಿ ಮಾತನಾಡಿ, ಸಂತೋಷ, ಹೈಕಮಾಂಡ್‌ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ದೆಹಲಿಯಲ್ಲಿ ಸಚಿವರು ಹಾಗೂ ಶಾಸಕರ ಡಿನ್ನರ್‌ ಮೀಟಿಂಗ್‌ ಕುರಿತು ಯಾವುದೇ ಮಾಹಿತಿಯಿಲ್ಲ. ಯಾತಕ್ಕಾಗಿ ಮೀಟಿಂಗ್‌ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಸರ್ಕಾರ ಮೂರು ವರ್ಷ ಮುಗಿಸಿದ್ದು, ಸಚಿವ ಸಂಪುಟ ಪುನರಾಚನೆಯಾದರೆ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿರುವವರು, ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ಸರಣಿ ಭೇಟಿ ನೀಡಿದರೇ ತಪ್ಪೇನಿಲ್ಲ ಎಂದರು.