ಬಾಲಕಿ ಜೊತೆ ಅನುಚಿತ ವರ್ತನೆ ಆರೋಪದಡಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮಹಲ್‌ ರೋಜಾದ ಚಾಂಗ್‌ದೇವ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮುತ್ಯಾ, ಕೊನೆಗೂ ಶಹಾಪುರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

 ಯಾದಗಿರಿ (ಮಾ.6): ಬಾಲಕಿ ಜೊತೆ ಅನುಚಿತ ವರ್ತನೆ ಆರೋಪದಡಿ, ಪೋಕ್ಸೋ ಪ್ರಕರಣದಲ್ಲಿ ಆರೋಪಿ ಆಗಿರುವ ಮಹಲ್‌ ರೋಜಾದ ಚಾಂಗ್‌ದೇವ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ‘ಮುತ್ಯಾ’ ಕೊನೆಗೂ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಬುಧವಾರ (ಮಾ.4) ರಾತ್ರಿ ಶಹಾಪುರ ಪೊಲೀಸ್‌ ಠಾಣೆಗೆ ಬಂದ ಅವರನ್ನು, ಗುರುವಾರ (ಮಾ.5) ಮತ್ತೆ ಹಾಜರಾಗುವಂತೆ ನೋಟಿಸ್‌ ಮೂಲಕ ಸೂಚಿಸಲಾಗಿತ್ತು. ಗುರುವಾರ ಠಾಣೆಗೆ ಬಂದ ಅವರನ್ನು ತನಿಖಾಧಿಕಾರಿ ಶರಣಗೌಡ ನ್ಯಾಮನವರ್‌ 4 ತಾಸು ವಿಚಾರಣೆ ನಡೆಸಿದ್ದಾರೆ.

ಇದಕ್ಕೂ ಮುನ್ನ, ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಮುತ್ಯಾ ಬಳಸುತ್ತಿರುವ ಮೊಬೈಲ್‌ ಹಾಗೂ ಮಠದ ಆವರಣದಲ್ಲಿನ ಮೂರು ಸಿಸಿಟಿವಿಗಳು- ಹಾರ್ಡ್‌ಡಿಸ್ಕ್‌ಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಪೋಕ್ಸೋ ಕೇಸ್‌ ದಾಖಲಾದ ದಿನದಿಂದ ಅಜ್ಞಾತಸ್ಥಳದಲ್ಲಿದ್ದ ಮಲ್ಲಿಕಾರ್ಜುನ ಮುತ್ಯಾ, ವಿಚಾರಣೆಗೆ ಹಾಜರಾಗುವುದಾಗಿ ಹೇಳಿ, ವಿಡಿಯೋ ರಿಲೀಸ್‌ ಮಾಡಿದ್ದಾದರೂ, ಪ್ರಕರಣ ರದ್ದು ಕೋರಿ ಹೈಕೋರ್ಟಿ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದರಿಂದ, ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್‌ ಪಡೆದಿದ್ದರು. ಮಾ.6ರಂದು ಈ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಯಲಿದೆ.

ಮುತ್ಯಾ ಪೊಲೀಸರೆದುರು ವಿಚಾರಣೆಗೆ ಹಾಜರಾದ ಸುದ್ದಿ ಹಬ್ಬಿದ ಬೆನ್ನಲ್ಲೇ, ಗುರವಾರ ಮಧ್ಯಾಹ್ನದಿಂದಲೇ ಭಕ್ತರು- ಬೆಂಬಲಿಗರು, ರಾಜಕೀಯ ಪ್ರಮುಖರು ಠಾಣೆಯೆದುರು ತಂಡೋಪತಂಡವಾಗಿ ಜಮಾಯಿಸತೊಡಗಿದ್ದರು.

ಯಾವುದೇ ತಪ್ಪು ಮಾಡಿಲ್ಲ

ಪೊಲೀಸರ ವಿಚಾರಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಮುತ್ಯ, ‘ನಾನ್ಯಾವುದೇ ತಪ್ಪು ಮಾಡಿಲ್ಲ. ನಾನು ಕಾನೂನನ್ನು ಗೌರವಿಸುತ್ತೇನೆ. ಪೊಲೀಸರ ವಿಚಾರಣೆಗೆ ಸಹಕರಿಸುತ್ತೇನೆ’ ಎಂದರು.