Asianet Suvarna News Asianet Suvarna News

Mysuru : ತ್ರಿವೇಣಿ ನಿವಾಸ ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ

ಕನ್ನಡದ ಖ್ಯಾತ ಕಾದಂಬರಿಗಾರ್ತಿ ದಿವಂಗತ ತ್ರಿವೇಣಿ ಅವರ ಮನೆಯು ಇನ್ನು ಮುಂದೆ ಗತಕಾಲದ ವೈಭವದೊಡನೆ ಹೊಸ ತಲೆಮಾರಿನವರಿಗೆ ವಸ್ತು ಸಂಗ್ರಹಾಲಯವಾಗಿ ದೊರಕಲಿದೆ

writer Triveni  House developed as a museum snr
Author
First Published Dec 15, 2022, 5:02 AM IST

  ಮೈಸೂರು (ಡಿ.15):  ಕನ್ನಡದ ಖ್ಯಾತ ಕಾದಂಬರಿಗಾರ್ತಿ ದಿವಂಗತ ತ್ರಿವೇಣಿ ಅವರ ಮನೆಯು ಇನ್ನು ಮುಂದೆ ಗತಕಾಲದ ವೈಭವದೊಡನೆ ಹೊಸ ತಲೆಮಾರಿನವರಿಗೆ ವಸ್ತು ಸಂಗ್ರಹಾಲಯವಾಗಿ ದೊರಕಲಿದೆ. ಕನ್ನಡದ ಪ್ರಖ್ಯಾತ ಸಿನಿಮಾಗಳಾದ ಬೆಳ್ಳಿಮೋಡ, ಶರಪಂಜರ, ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು ಮತ್ತು ಕಂಕಣ ಮುಂತಾದ ಸಿನಿಮಾಗಳಿಗೆ ತಮ್ಮ ಕಾದಂಬರಿ ಮೂಲಕ ಕಥೆ ಒದಗಿಸಿದ ತ್ರಿವೇಣಿ ಅವರ ಮನೆಯನ್ನು ಜೀರ್ಣೋದ್ಧಾರಗೊಳಿಸಿ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗುತ್ತಿದೆ.

ತ್ರಿವೇಣಿ ಅವರ ಪುತ್ರಿ ಮೀರಾ ಶಂಕರ್‌ (Meera Shankar)  ಅವರು ಈಗ ಮನೆಯನ್ನು ಪುನರುಜ್ಜೀವನಗೊಳಿಸಲು ಮುಂದಾಗಿದ್ದಾರೆ. ಅವರು ಬುಧವಾರ ಗುದ್ದಲಿಪೂಜೆ ನೆರವೇರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಾಮರಾಜಪುರಂ ರೈಲ್ವೆ ನಿಲ್ದಾಣ (Railway Station)  ಬಳಿಯ 120 ವರ್ಷ ಹಳೆಯದಾದ ತ್ರಿವೇಣಿ ಅವರ ಮನೆ ಇನ್ನು ಒಂದು ವರ್ಷದಲ್ಲಿ ವಸ್ತು ಸಂಗ್ರಹಾಲಯವಾಗಲಿದೆ. ಕಟ್ಟಡ ಈಗ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. 1950 ರಿಂದ 1963 ಅವ​ಧಿ​ಯಲ್ಲಿ ತ್ರಿವೇಣಿ ಅವರು ರಚಿ​ಸಿದ 24 ಕತೆ, ಕಾದಂಬ​ರಿ​ಗಳು ಇದೇ ಮನೆ​ಯಲ್ಲಿಯೇ ಎಂಬುದು ವಿಶೇ​ಷ​. ಅವರು ಬದು​ಕಿ​ದಷ್ಟೂದಿನ ಇದೇ ಮನೆ​ಯ​ಲ್ಲಿ​ದ್ದರು. ಆ ಮನೆ​ಯನ್ನು ಮುಂದಿನ ಪೀಳಿ​ಗೆಗೂ ಉಳಿ​ಸಿ​ಕೊ​ಳ್ಳುವ ನಿಟ್ಟಿ​ನಲ್ಲಿ ಮನೆಗೆ ‘ಬೆಳ್ಳಿ​ಮೋಡ’ ಎಂಬ ಹೆಸ​ರಿಟ್ಟು, ಪಾರಂಪ​ರಿಕ ಶೈಲಿ​ಯ​ಲ್ಲಿಯೇ ಕಟ್ಟ​ಡ​ ಉಳಿ​ಸಿ​ಕೊಂಡು ಜೀರ್ಣೋ​ದ್ಧಾರಗೊಳಿಸಲಾಗುವುದು ಎಂದು ಅವರು ಹೇಳಿದರು.

ಮನೆಯಲ್ಲಿ ತ್ರಿವೇಣಿ ಅವರು ಬಳಸಿದ್ದ ಎಲ್ಲಾ ವಸ್ತು​ಗ​ಳನ್ನು ಸಂರಕ್ಷಿಸಲಾಗಿದೆ. ನಾನು ಲಂಡ​ನ್‌ ಪ್ರವಾ​ಸ​ದ​ಲ್ಲಿ​ದ್ದಾಗ ಖ್ಯಾತ ನಾಟ​ಕ​ಗಾರ ವಿಲಿಯಂ ಷೇಕ್ಸ್‌ಪಿಯರ್‌ ಅವರು ಜೀವಿ​ಸಿದ್ದ ಮನೆಗೆ ಭೇಟಿ ನೀಡಿ​ದಾಗ, ಅಲ್ಲಿ ಷೇಕ್ಸ್‌ಪಿಯರ್‌ ಅವರು ಬಳಸಿದ್ದ ವಸ್ತುಗಳು, ಬರೆದ ಪತ್ರಗಳು, ಪಡೆದ ಪ್ರಶಸ್ತಿಯನ್ನು ಸಂಗ್ರಹಿಸಿರುವುದನ್ನು ನೋಡಿ, ಅದ​ರಂತೆಯೇ ನಮ್ಮ ತಾಯಿ ತ್ರಿವೇಣಿ ಅವರ ಮನೆಯನ್ನೂ ಸ್ಮಾರಕ ಮಾಡ​ಬೇ​ಕು ಎಂಬ ಬಯಕೆ ಮೂಡಿತು ಎಂದು ಮೀರಾ ಶಂಕರ್‌ ತಿಳಿಸಿದರು.

ಮನೆ ದುರ​ಸ್ತಿಗೆ ಅಗ​ತ್ಯ​ವಿ​ರುವ ಅನು​ದಾ​ನದ ಕೊರ​ತೆ​ ಇತ್ತು. ಸದ್ಯಕ್ಕೆ ತ್ರಿವೇಣಿ ಅವರ ಅಭಿಮಾ​ನಿ​ಯೊ​ಬ್ಬರು ಮನೆ​ ಜೀರ್ಣೋ​ದ್ಧಾರ ಮಾಡಿ​ಕೊ​ಡಲು ಮುಂದಾಗಿದ್ದಾರೆ. 75/100 ಅಡಿ ಅಳ​ತೆಯ ನಿವೇ​ಶ​ನ​ದಲ್ಲಿ ಎರಡು ಮನೆ​ಗಳಿದ್ದು, ಒಂದ​ಕ್ಕೊಂದು ಹೊಂದಿ​ಕೊಂಡಂತಿವೆ. ಒಂದು ಮನೆ 120 ವರ್ಷ ಹಳೆ​ಯ​ದಾ​ದರೇ, ಮತ್ತೊಂದು 90 ವರ್ಷ​ ಹಳೆ​ಯದು. 2ನೇ ಮನೆ​ಯನ್ನು ಅಮ್ಮ​ನೇ ತಂದೆಗೆ ಹೇಳಿ ಕಟ್ಟಿ​ಸಿ​ಕೊಂಡಿ​ದ್ದರು. ಈಗ ಎರಡೂ ಶಿಥಿ​ಲ​ವಾ​ಗಿ​ರು​ವು​ದ​ರಿಂದ ಹಳೆಯ ಕಟ್ಟಡವನ್ನು ಶಿಲ್ಪ​ಶಾ​ಸ್ತ್ರ​ಜ್ಞ​ರಾದ ಪಂಕಜ್‌ ಮೋದಿ ಮತ್ತು ರಘು​ನಾಥ್‌ ತಂಡ ಪರಿ​ಶೀ​ಲಿಸಿ ದುರ​ಸ್ತಿ​ಕಾರ್ಯ ಆರಂಭಿ​ಸುತ್ತಿದೆ ಎಂದು ಅವರು ವಿವರಿಸಿದರು.

ನಮ್ಮ ತಾಯಿ ಬಳಸುತ್ತಿದ್ದ ಸೀರೆ, ಮೇಕಪ್‌ ಬಾಕ್ಸ್‌, ಪೆನ್ನು, ಡೈರಿ, ಬರೆದ ಪತ್ರ, ಪಡೆದ ಪ್ರಶಸ್ತಿ, ಅಪರೂಪದ ಛಾಯಾಚಿತ್ರ, ಪೀಠೋಪಕರಣ ಇರುತ್ತದೆ. ಜತೆಗೆ ಆಪ್ತ ಸಲಹಾಕೇಂದ್ರ ತೆರೆದು ಅಗತ್ಯ ಸಲಹೆ ನೀಡಲಾಗುವುದು ಎಂದರು.

ಆಡಿಯೋ ಬುಕ್‌, ಇ ಬುಕ್‌​ನಲ್ಲಿ ತ್ರಿವೇಣಿ ಸಾಹಿತ್ಯ

ತ್ರಿವೇಣಿ ಎಂಬ ಹೆಸರಿನಿಂದ ಖ್ಯಾತರಾದ ಅನಸೂಯ ಶಂಕರ್‌ ಅವರು, ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಅವ​ರ ಸಾಹಿತ್ಯವನ್ನು ಗಡಿ​ಯಾ​ಚೆಗೂ ದಾಟಿ​ಸಲು ಇ-ಬುಕ್‌ ಮತ್ತು ಆಡಿಯೋ ಬುಕ್‌ ತಯಾರಿ ಕಾರ್ಯ ನಡೆ​ಯು​ತ್ತಿದೆ ಎಂದು ಅವರು ಹೇಳಿದರು.

ತ್ರಿವೇಣಿ ಅವರು ಹಣ್ಣೆಲೆ ಚಿಗುರಿದಾಗ, ಬೆಳ್ಳಿ ಮೋಡ, ಶರಪಂಜರ, ದೂರದ ಬೆಟ್ಟ, ಬೆಕ್ಕಿನ ಕಣ್ಣು ಸೇರಿದಂತೆ 21 ಕಾದಂಬರಿ, 03 ಸಣ್ಣ ಕಥೆ​ ರಚಿಸಿದ್ದಾರೆ. ಇದರಲ್ಲಿ 5 ಸಿನಿಮಾಗಳಾಗಿದ್ದು, ಬೆಳ್ಳಿಮೋಡ ಖ್ಯಾತಿಗಳಿಸಿತು. ಆದ್ದರಿಂದ ಮನೆಗೆ ಬೆಳ್ಳಿಮೋಡ ಎಂದು ಹೆಸರಿಡಲಾಗುತ್ತಿದೆ. ಇವರ ಎಲ್ಲಾ ಕೃತಿಯನ್ನೂ ಇ-ಬುಕ್‌ ರೂಪಕ್ಕೆ ಇಳಿ​ಸ​ಲಾ​ಗಿದ್ದು, ಜನ​ವರಿ ವೇಳೆಗೆ ಲೋಕಾ​ರ್ಪ​ಣೆ​ಗೊ​ಳ್ಳುವ ಸಾಧ್ಯ​ತೆ​ ಇದೆ ಎಂದು ಅವರು ತಿಳಿಸಿದರು.

ಅಂತೆಯೇ ವಿದೇ​ಶದ ಕನ್ನ​ಡಿ​ಗ​ರಿಗೆ ಅನು​ಕೂ​ಲ​ವಾ​ಗುವ ದೃಷ್ಟಿ​ಯಿಂದ ಅಲ್ಲಾ 24 ಕೃತಿಯನ್ನೂ ಧ್ವನಿ ಮುದ್ರಿಕೆ ಮಾಡುವ ಕಾರ್ಯ ಆರಂಭಿ​ಸಿದ್ದು, ಸದ್ಯದಲ್ಲಿಯೇ ಆಡಿಯೋ ಬಿಡ​ಗ​ಡೆ​ ಆಗಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಾರ್ವತಿ ವಟ್ಟಂ, ಶಿಲ್ಪಶಾಸ್ತ್ರಜ್ಞ ಪಂಕಜ್‌ ಮೋದಿ ಮೊದಲಾದವರು ಇದ್ದರು.

ಕಟ್ಟಡ ಜೀರ್ಣೋದ್ಧಾರಕ್ಕೆ ಸುಮಾರು ಒಂದು ವರ್ಷ ಬೇಕಾಗುತ್ತದೆ. ಈ ಹಿಂದೆ ಕಟ್ಟಡ ಕಟ್ಟಲು ಬಳಸಿದ್ದ ವಸ್ತುಗಳನ್ನೇ ಬಳಸಿ ದುರಸ್ತಿಗೊಳಿಸಲಾಗುವುದು. ಕೆಲ ಭಾಗ ತೆಗೆದು ಮೊದಲಿದ್ದಂತೆಯೇ ಉಳಿಸಲಾಗುವುದು. ಅಲ್ಲದೆ ತ್ರಿವೇಣಿ ಅವರ ಬದುಕನ್ನು ಇಲ್ಲಿ ಕಟ್ಟಿಕೊಡಲಾಗುವುದು.

- ಪಂಕಜ್‌ ಮೋದಿ, ಶಿಲ್ಪ​ಶಾ​ಸ್ತ್ರಜ್ಞ.

Follow Us:
Download App:
  • android
  • ios