ಏಪ್ರಿಲ್ 4 ರಿಂದ 14 ರವರೆಗೆ ನಡೆಯಲಿರುವ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ದುರಸ್ತಿ, ಬೀದಿ ದೀಪಗಳ ಅಳವಡಿಕೆ, ವಾಹನ ನಿಲುಗಡೆಗೆ ಸ್ಥಳ ನಿಗದಿ, ಪೊಲೀಸ್ ಬಂದೋಬಸ್ತ್, ಸಿಸಿ ಕ್ಯಾಮೆರಾ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಹಾಗೂ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ರಥೋತ್ಸವ, ವಿಶೇಷ ಪೂಜೆ, ಹಸಿ ಕರಗ, ಮತ್ತು ವಸಂತೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಬೆಂಗಳೂರು (ಮಾ.18): ವಿಶ್ವ ವಿಖ್ಯಾತ ಬೆಂಗಳೂರು 'ಕರಗ ಶಕ್ತ್ಯೋತ್ಸವ' ಆಚರಣೆ ಏ.4ರಿಂದ ಏ.14ರವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕರಗ ನಡೆಯುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಹತ್ತಿರದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಬಾಕಿ ಇರುವ ಕಾಮಗಾರಿಯನ್ನು ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸಬೇಕು. ಸಂಚಾರ ಪೊಲೀಸ್ ವಿಭಾಗವು ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟಣೆಯಾಗದಂತೆ ಮಾರ್ಗ ಬದಲಾವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸಬೇಕು. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಅವಕಾಶ ನೀಡದಂತೆ ಹಾಗೂ ಭಕ್ತಾದಿಗಳು ಹಾಗೂ ಸಾರ್ವಜನಿಕರ ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಜೊತೆಗೆ, ಕರಗ ಮಹೋತ್ಸವ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಬಗ್ಗೆ ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಜಗದೀಶ್ ಮಾತನಾಡಿ, ಕರಗ ಶಕ್ತ್ಯೋತ್ಸವ ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಕರಗ ಉತ್ಸವ ನಡೆಯುವ ರಸ್ತೆಗಳಲ್ಲಿನ ಬೀದಿ ದೀಪಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ, ಎಲ್ಲಾ ಕಡೆ ವಿದ್ಯುತ್ ದೀಪಗಳ ಅಳವಡಿಕೆ ವ್ಯವಸ್ಥೆ ಮಾಡಬೇಕು. ವಿದ್ಯುತ್ ಸಂಪರ್ಕ ಕಡಿತಾಗೊಳ್ಳದಂತೆ ಬೆಸ್ಕಾಂ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕರಗ ಮಹೋತ್ಸವವು 4ನೇ ಏಪ್ರಿಲ್ 2025 ರಿಂದ 14ನೇ ಏಪ್ರಿಲ್ 2025 ರವರೆಗೆ ನಡೆಯಲಿದ್ದು, ಈ ವೇಳೆ ಸ್ವಚ್ಛತಾ ನಿರ್ವಹಣೆ ದೃಷ್ಟಿಯಿಂದ ಘನತ್ಯಾಜ್ಯ ವಿಭಾಗದ ಅಧಿಕಾರಿ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಸೂಚಿಸಿದರು.
ಇದನ್ನೂ ಓದಿ: ಬೆಂಗಳೂರಿನ ಪಾರ್ಕ್ಗಳಲ್ಲಿ ಜಾಗಿಂಗ್ ನಿಷೇಧ; ಕಾರಣ ಕೇಳಿ ನೀವು ಶಾಕ್ ಆಗೋದಂತೂ ಗ್ಯಾರಂಟಿ..!
ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಅಗತ್ಯ ಕ್ರಮ ವಹಿಸಬೇಕು. ಕರಗ ನಡೆಯುವ ದಿನಗಳಲ್ಲಿ ಕರಗ ವೀಕ್ಷಿಸಲು ಬರುವವರಿಗೆ ಆರೋಗ್ಯದಲ್ಲಿ ಏರುಪೇರಾದಲ್ಲಿ ಅವರಿಗೆ ಕೂಡಲೆ ಚಿಕಿತ್ಸೆ ನೀಡುವ ಸಲುವಾಗಿ ಪಾಲಿಕೆ ಆರೋಗ್ಯ ವಿಭಾಗದಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡಬೇಕು. ಜೊತೆಗೆ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಕೂಡಾ ಮಾಡಿಕೊಂಡಿರಲು ಸೂಚಿಸಿದರು.
ಕರಗ ಮಹೋತ್ವವದ ವಿವರ:
- 4ನೇ ಏಪ್ರಿಲ್ 2025 ರಂದು ಶುಕ್ರವಾರ ರಾತ್ರಿ 10.00 ಗಂಟೆ ಹಾಗೂ ರಾತ್ರಿ 3.00 ಗಂಟೆಗೆ ‘ರಥೋತ್ಸವ ಧ್ವಜಾರೋಹಣ’ ನಡೆಯಲಿದೆ.
- 5 ರಿಂದ 8ನೇ ಏಪ್ರಿಲ್ 2025 ರವೆಗೆ ಶನಿವಾರದಿಂದ ಮಂಗಳವಾರದವರೆಗೆ ರಾತ್ರಿ 7.30ಕ್ಕೆ ‘ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ’ ನಡೆಯಲಿದೆ.
- 9ನೇ ಏಪ್ರಿಲ್ 2025 ರಂದು ಬುಧವಾರ ರಾತ್ರಿ 3.00 ಗಂಟೆಗೆ ‘ಆರತಿ ದೀಪಗಳು’ ನಡೆಯಲಿದೆ.
- 10ನೇ ಏಪ್ರಿಲ್ 2025 ರಂದು ಗುರುವಾರ ರಾತ್ರಿ 3.00 ಗಂಟೆಗೆ ಸಂಪಂಗಿಕೆರೆ ಅಂಗಳದ ಶಕ್ತಿ ಪೀಠದಲ್ಲಿ “ಹಸಿ ಕರಗ” ನಡೆಯಲಿದೆ.
- 12ನೇ ಏಪ್ರಿಲ್ 2025 ರಂದು ಶನಿವಾರ ರಾತ್ರಿ 12.30ಕ್ಕೆ “ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ಮಹೋತ್ಸವ” ನಡೆಯಲಿದೆ.
- 13ನೇ ಏಪ್ರಿಲ್ 2025 ರಂದು ಭಾನುವಾರ ರಾತ್ರಿ 2.00 ಹಾಗೂ ರಾತ್ರಿ 4.00 ಗಂಟೆಗೆ ‘ಪುರಾಣ ಪ್ರವಚನ ಹಾಗೂ ದೇವಸ್ಥಾನದಲ್ಲಿ ಗಾವು ಶಾಂತಿ’ ನಡೆಯಲಿದೆ.
- 14ನೇ ಏಪ್ರಿಲ್ 2025 ರಂದು ಸೋಮವಾರ ಸಂಜೆ 4.00 ಹಾಗೂ ರಾತ್ರಿ 12.00 ಗಂಟೆಗೆ ‘ವಸಂತೋತ್ಸವ ಧ್ವಜಾರೋಹಣ’ ದ ಮೂಲಕ ಕರಗವು ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: ನನ್ನ ದಾರಿಗೆ ಅಡ್ಡ ಬಂದಿದ್ದರಿಂದ ಶಂಕರ್ ಬಿದರಿಯನ್ನು ತಳ್ಳಿದೆ: ಸಿದ್ದರಾಮಯ್ಯ
ಈ ವೇಳೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಉದಯ್ ಬಿ. ಗರುಡಾ ಚಾರ್, ವಲಯ ಆಯುಕ್ತರಾದ ಅರ್ಚನಾ, ದಿಗ್ವಿಜಯ್ ಬೋಡ್ಕೆ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಬಿಬಿಎಂಪಿ, ಮುಜರಾಯಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
