Asianet Suvarna News Asianet Suvarna News

ಗೃಹಲಕ್ಷ್ಮಿ ಯೋಜನೆ: ಇ-ಕೆವೈಸಿ ಯಜಮಾನಿಯರಿಗೆ ತಲೆಬಿಸಿ..!

ಪ್ರತಿ ತಿಂಗಳು ಕುಟುಂಬದ ಯಜಮಾನಿಯ ಬ್ಯಾಂಕ್‌ ಖಾತೆಗೆ 2 ಸಾವಿರ ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ವೃದ್ಧೆಯರು, ಮಹಿಳೆಯರು, ಅಂಗವಿಕಲ ಮಹಿಳೆಯರು ಹರಸಾಹಸ ಪಡುವಂತಾಗಿದೆ. 

Women Faces E-KYC Problem in Belagavi grg
Author
First Published Aug 10, 2023, 8:34 PM IST

ಜಗದೀಶ ವಿರಕ್ತಮಠ

ಬೆಳಗಾವಿ(ಆ.10): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರ, ಇ-ಕೆವೈಸಿ ಮತ್ತು ಅದರಲ್ಲಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಯಜಮಾನಿಯರು ಮಳೆ, ಬಿಸಿಲು ಲೆಕ್ಕಿಸದೇ ಪ್ರತಿನಿತ್ಯ ಆಹಾರ ಇಲಾಖೆಯ ಕಚೇರಿ ಎದುರು ಗಂಟೆಗಟ್ಟಲೇ ಸರತಿಸಾಲಿನಲ್ಲಿ ನಿಂತು ಕಾಯುವಂತಾಗಿದೆ.

ಪ್ರತಿ ತಿಂಗಳು ಕುಟುಂಬದ ಯಜಮಾನಿಯ ಬ್ಯಾಂಕ್‌ ಖಾತೆಗೆ 2 ಸಾವಿರ ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ವೃದ್ಧೆಯರು, ಮಹಿಳೆಯರು, ಅಂಗವಿಕಲ ಮಹಿಳೆಯರು ಹರಸಾಹಸ ಪಡುವಂತಾಗಿದೆ. ಹಳೆಯ ಪಡಿತರಚೀಟಿ ವಿತರಣೆ ಸಮಯದಲ್ಲಿ ಇ-ಕೆವೈಸಿ ಕಡ್ಡಾಯವಾಗದ ಹಿನ್ನೆಲೆಯಲ್ಲಿ ಆಹಾರ ಇಲಾಖೆಯಲ್ಲಿ ಪಡಿತರಚೀಟಿ ವಿತರಿಸಲಾಗುತ್ತಿತ್ತು. ಆದರೆ, ಈಚೆಗೆ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಮೊದಲಿಗೆ ಪಡಿತರಚೀಟಿ ಪಡೆದುಕೊಂಡವರಲ್ಲಿ ಲಕ್ಷಾಂತರ ಪಡಿತರಚೀಟಿಗಳ ಇ-ಕೆವೈಸಿ ಆಗಿಲ್ಲ. ಇದರಿಂದಾಗಿ ಅಂಥ ಗೃಹಲಕ್ಷ್ಮಿ ಯೋಜನೆಯಿಂದ ಸದ್ಯ ವಂಚಿತರಾಗುವ ಆತಂಕ ಎದುರಾಗಿದೆ.

ಬೆಳಗಾವಿ ಸಚಿವರೇ... ಚಿಕ್ಕೋಡಿ ತಾಯಿ, ಮಕ್ಕಳ ಆಸ್ಪತ್ರೆಗೆ ಉದ್ಘಾಟನೆ ಯಾವಾಗ?

ಇನ್ನೂ ಕುಟುಂಬದ ಹಿರಿಯ ಮಹಿಳೆಯರೇ ಪಡಿತರಚೀಟಿಯಲ್ಲಿ ಯಜಮಾನಿ ಆಗಿದ್ದಾರೆ. ಆದ್ದರಿಂದ ಅಂಥ ಹಿರಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಇಲಾಖೆ ಕಚೇರಿ ಎದುರು ಪಡಿತರಚೀಟಿಯಲ್ಲಿನ ಸಮಸ್ಯೆ ಸರಿಪಡಿಸಿಕೊಳ್ಳಲು ಮತ್ತು ಇ-ಕೆವೈಸಿ ಮಾಡಿಸಿಕೊಳ್ಳಲು ಗಂಟೆಗಟ್ಟಲೇ ಕಾಯುತ್ತಾ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಕೆಲಸ ಒತ್ತಡದಿಂದ ಸಿಬ್ಬಂದಿ ಇಂದು ಬಾ, ನಾಳೆ ಬಾ ಎಂದು ಹೇಳುತ್ತಿರುವುದರಿಂದ ಯಜಮಾನಿಯರ ತತ್ವಾರ ಮತ್ತಷ್ಟು ಹೆಚ್ಚಿದೆ.

ಒನ್‌ ನೇಷನ್‌, ಒನ್‌ ರೇಶನ್‌ ಕಾರ್ಯಕ್ರಮ ಜಾರಿಯಾಗಿರುವುದರಿಂದ ಆಧಾರಕಾರ್ಡ್‌ ಮಾದರಿಯಲ್ಲಿ ಪಡಿತರಚೀಟಿಯನ್ನು ಇತ್ತೀಚಿನ ಕೆಲ ವರ್ಷಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ಇಂಥ ಪಡಿತರಚೀಟಿದಾರರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ. ಆದರೆ, ಇದಕ್ಕೂ ಮೊದಲು ಪಡೆದುಕೊಂಡ ಪಡಿತರಚೀಟಿಗಳು ಈಗಿನ ಕಾರ್ಡ್‌ಗಳಂತೆ ಇಲ್ಲ. ಹೊಸ ಕಾರ್ಡ್‌ಗಳಲ್ಲಿ ಸದಸ್ಯರ ಆಧಾರ ಅಪ್‌ಡೇಟ್‌, ಇಕೆವೈಸಿ, ಹೊಸ ಸಂಖ್ಯೆ, ಮನೆ ಮತ್ತು ಯಜಮಾನಿ ಗುರುತು ಸೇರಿದಂತೆ ಹಲವು ಬದಲಾವಣೆ ಆಗಿವæ. ಇದರಲ್ಲಿ ಒಂದೇ ಒಂದು ಮಾಹಿತಿ ಅಪ್‌ಡೇಟ್‌ ಇಲ್ಲದಿದ್ದರೂ ಗೃಹಲಕ್ಷ್ಮಿ ಯೋಜನೆಗೆ ಪಡಿತರಚೀಟಿ ದಾಖಲೆ ಸ್ವೀಕಾರ ಆಗುತ್ತಿಲ್ಲ. ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಚೀಟಿಗಳಿಗಿಂತ ಬಡತನ ರೇಖೆಗಿಂತ ಮೇಲಿನ (ಎಪಿಎಲ್‌) ಕಾರ್ಡ್‌ದಾರರ ಸಮಸ್ಯೆ ಹೆಚ್ಚಾಗಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಅಕ್ಕಿ ವಿತರಣೆ ಮಾಡದ ಹಿನ್ನೆಲೆಯಲ್ಲಿ ಎಪಿಎಲ್‌ ಚೀಟಿದಾರರು ಕಾಲಕಾಲಕ್ಕೆ ಮಾಹಿತಿಯನ್ನು ಅಪ್‌ಡೇಟ್‌ ಮಾಡಿಲ್ಲ. ಸದ್ಯ ಎಲ್ಲ ವರ್ಗದ ಜನರಿಗೆ ಪ್ರತಿ ತಿಂಗಳು .2 ಸಾವಿರ ಜಮಾ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಗಾಗಿ ಪಡಿತರಚೀಟಿ ಅಪ್‌ಡೇಟ್‌ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಪಡಿತರಚೀಟಿ ಅಪ್‌ಡೇಟ್‌ಗಾಗಿ ಆಹಾರ ಇಲಾಖೆ ಕಚೇರಿ ಬಳಿ ಹೋಗಿ ಮಳೆ, ಬಿಸಿಲು ಎನ್ನದೇ ಗಂಟೆಗಟ್ಟಲೇ ಸಾಲಿನಲ್ಲಿ ಕಾಯುತ್ತಾ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಥವಾ ಆಹಾರ ಇಲಾಖೆಯರು ಅಪ್‌ಡೇಟ್‌ ಮಾಡುವ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆದು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಡಿತರಚೀಟಿ ಅಪ್‌ಡೇಟ್‌ಗಾಗಿ ಕಾಯುತ್ತಿರುವವರು ಶಾರದಾ ಪಾಟೀಲ ಮತ್ತು ಅಶ್ವಿನಿ ತಿಳಿಸಿದ್ದಾರೆ. 

Follow Us:
Download App:
  • android
  • ios