ತಾಲೂಕಿನ ಹಲವೆಡೆ ಗುರುವಾರ ಮಧ್ಯಾಹ್ನ ಬಿದ್ದ ಬಿರುಗಾಳಿ ಸಹಿತ ಮಳೆಗೆ ಓರ್ವ ಮಹಿಳೆ ಮೃತಪಟ್ಟು, ಹಲವೆಡೆ ವಿದ್ಯುತ್‌ ಕಂಬ ಹಾಗೂ ಮರಗಳು ರಸ್ತೆ ಮೇಲೆ ಬಿದ್ದು, ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ.

ಪಿರಿಯಾಪಟ್ಟಣ (ಮೇ.19) : ತಾಲೂಕಿನ ಹಲವೆಡೆ ಗುರುವಾರ ಮಧ್ಯಾಹ್ನ ಬಿದ್ದ ಬಿರುಗಾಳಿ ಸಹಿತ ಮಳೆಗೆ ಓರ್ವ ಮಹಿಳೆ ಮೃತಪಟ್ಟು, ಹಲವೆಡೆ ವಿದ್ಯುತ್‌ ಕಂಬ ಹಾಗೂ ಮರಗಳು ರಸ್ತೆ ಮೇಲೆ ಬಿದ್ದು, ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ.

Add Asianetnews Kannada as a Preferred SourcegooglePreferred

ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ಶೋಭಾ(42) ಎಂಬವರು ಮಳೆ ಬೀಳುತ್ತಿದ್ದಾಗ ಆಸರೆ ಪಡೆಯಲು ನಿಂತಿದ್ದ ಟ್ರ್ಯಾಕ್ಟರ್‌ ಶೆಡ್‌ ಮೇಲ್ಛಾವಣಿ ಶೀಟ್‌ ಬಿರುಗಾಳಿ ಆರ್ಭಟಕ್ಕೆ ಹಾರಿ ಛಾವಣಿ ಕುಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದ ಮಿಕ್ಕವರು ಪ್ರಾಣಪಾಯದಿಂದ ಪಾರಾಗಿದ್ದಾರೆ, ವಿಷಯ ತಿಳಿದು ಘಟನಾ ಸ್ಥಳಕ್ಕೆ ಆರಕ್ಷಕ ಇಲಾಖೆ ಸಿಬ್ಬಂದಿಯೊಂದಿಗೆ ಕಂದಾಯ ಇಲಾಖೆ ಶಿರಸ್ತೆದಾರ್‌ ನಂದಕುಮಾರ್‌, ಕಂದಾಯಾಧಿಕಾರಿ ಶ್ರೀಧರ್‌ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಪರಿಹಾರಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕರ್ನಾಟಕದ 3 ಜಿಲ್ಲೆಗಳಲ್ಲಿ ಭಾರೀ ಮಳೆ: ಮಹಿಳೆ ಸಾವು

ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮ ಬಳಿ ಮೈಸೂರು, ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರಿ ಗಾತ್ರದ ಮರ ರಸ್ತೆಗುರುಳಿದ ಪರಿಣಾಮ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ತೊಂದರೆಯಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್‌ ಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು, ರಸ್ತೆಯಲ್ಲಿ ಬಿದ್ದ ಮರ ತೆರವು ಮಾಡಿ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಗುರುವಾರ ಮಧ್ಯಾಹ್ನ ಬಿರುಗಾಳಿ ಆರ್ಭಟ ಹೆಚ್ಚಾಗಿ ಮಳೆ ಬಿದ್ದ ಸಂದರ್ಭ ಕಂದೇಗಾಲ, ತೆಲಗಿನಕುಪ್ಪೆ, ಕೋಮಲಾಪುರ, ಬೆಕ್ಕರೆ, ಬೆಟ್ಟೆಗೌಡನಕೊಪ್ಪಲು, ಕೊಣಸೂರು, ತಿಮಕಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್‌ ಕಂಬ ಹಾಗೂ ಭಾರಿ ಗಾತ್ರದ ಮರಗಳು ರಸ್ತೆ ಮೇಲೆ ಬಿದ್ದ ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಗಿ ಸಾರಿಗೆ ಸೇರಿದಂತೆ ಇತರೆ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಿದವು.

ಹಲವು ಗ್ರಾಮಗಳಲ್ಲಿ ದನದ ಕೊಟ್ಟಿಗೆ ಹಾಗೂ ರೇಷ್ಮೆ ಶೆಡ್‌ ಛಾವಣಿ ಹಾರಿ ಅಪಾರ ಪ್ರಮಾಣದ ಹಾನಿ ಉಂಟಾಗಿ ರೈತರಿಗೆ ನಷ್ಟಉಂಟಾಗಿದೆ. ಕಟಾವಿಗೆ ಬಂದಿದ್ದ ಮಾವು ಬೆಳೆ ಬಿರುಗಾಳಿ ಆರ್ಭಟಕ್ಕೆ ನಾಶವಾದ ವರದಿಯಾಗಿದೆ, ವಿದ್ಯುತ್‌ ಕಂಬ ಧರೆಗುರುಳಿದ ಪರಿಣಾಮ ತಕ್ಷಣ ಎಚ್ಚೆತ್ತ ಸೆಸ್‌್ಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಸೆಸ್‌್ಕ ಬೆಟ್ಟದಪುರ ಉಪ ವಿಭಾಗದ ಎಇಇ ಪ್ರಶಾಂತ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ, ಹವಾಮಾನ ಇಲಾಖೆ ಸೂಚನೆ!

ಒಟ್ಟಾರೆ ಮಳೆಯಿಂದ ಒಂದೆಡೆ ರೈತರು ಹರ್ಷವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ, ಮತ್ತೊಂದೆಡೆ ಅಪಾರ ಪ್ರಮಾಣದ ಹಾನಿಯಾದ ವರದಿಯಾಗಿದೆ.