Asianet Suvarna News Asianet Suvarna News

ಚಿಕ್ಕಮಗಳೂರಿನಲ್ಲಿ 'ಸಿಕ್ಸರ್‌'ನೊಂದಿಗೆ ಶತಕ ಬಾರಿಸಿದ ಕೊರೋನಾ..!

6 ಪ್ರಕರಣಗಳ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 5, ಮೂಡಿಗೆರೆ ತಾಲೂಕಿನ ಒಂದು ಪ್ರಕರಣ ಸೇರಿದ್ದು, ಇವುಗಳಲ್ಲಿ 4 ಪ್ರಕರಣಗಳು ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಅವರ ಸಂಪರ್ಕದಿಂದ ಸೋಂಕು ಹರಡಿದ ಪ್ರಕರಣಗಳಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

With 6 New Coronavirus Cases Chikkamagaluru touch 100 mark on July 7th
Author
Chikkamagaluru, First Published Jul 8, 2020, 9:01 AM IST

ಚಿಕ್ಕಮಗಳೂರು(ಜು.08): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಮಂಗಳವಾರ ಒಂದೇ ದಿನ 6 ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 100ರ ಗಡಿ ತಲುಪಿದ್ದು, ಈ ಪೈಕಿ 52 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಮಂಗಳವಾರ ಪತ್ತೆಯಾಗಿರುವ 6 ಪ್ರಕರಣಗಳ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 5, ಮೂಡಿಗೆರೆ ತಾಲೂಕಿನ ಒಂದು ಪ್ರಕರಣ ಸೇರಿದ್ದು, ಇವುಗಳಲ್ಲಿ 4 ಪ್ರಕರಣಗಳು ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಅವರ ಸಂಪರ್ಕದಿಂದ ಸೋಂಕು ಹರಡಿದ ಪ್ರಕರಣಗಳಾಗಿವೆ. ಇವರಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಚಿಕ್ಕಮಗಳೂರು ನಗರಸಭೆಯ ಮಾಜಿ ಅಧ್ಯಕ್ಷರು, ಅವರ ಪತ್ನಿ ಮತ್ತು ಪ್ರಾಣೇಶ್‌ ಅವರ ವಾಹನ ಚಾಲಕನಿಗೂ ಸೋಂಕು ತಗಲಿದೆ.

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ವ್ಯಕ್ತಿಗೆ ಸೋಂಕು ಹರಡಿದ್ದರೆ, ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನಿಂದ ಗೌರಿಕಾಲುವೆ ಪ್ರದೇಶಕ್ಕೆ ಬಂದಿದ್ದ ವ್ಯಕ್ತಿಯಿಂದ ಅವರ ಕುಟುಂಬದವರೊಬ್ಬರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.

ಪ್ರಾಧಿಕಾರದ ಕಚೇರಿ ಸೀಲ್‌ಡೌನ್‌:

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರು ಓಡಾಡಿದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯನ್ನು ಮಂಗಳವಾರ ಸೀಲ್‌ಡೌನ್‌ ಮಾಡಲಾಗಿದ್ದು, ಇನ್ನೊಂದು ವಾರಗಳ ಕಾಲ ಸಾರ್ವಜನಿಕರು ಹಾಗೂ ಸಿಬ್ಬಂದಿ ಪ್ರವೇಶ ನಿಷೇಧಿಸಲಾಗಿದೆ.

ಶಿವಮೊಗ್ಗದಲ್ಲಿ ಅಜ್ಜ ಮೊಮ್ಮಕ್ಕಳಲ್ಲಿ ಕೊರೋನಾ ಪಾಸಿಟಿವ್‌..!

ಎಂ.ಕೆ. ಪ್ರಾಣೇಶ್‌ ಅವರೊಂದಿಗೆ ಕೆಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರಲ್ಲಿ ಸೋಂಕು ಪತ್ತೆಯಾಗಿರುವುದು, ಬಿಜೆಪಿಯ ಇತರೆ ಮುಖಂಡರಲ್ಲೂ ಆತಂಕ ಮೂಡಿಸಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಈಗಾಗಲೇ ಕೆಲವು ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್‌ ಬಂದವರು ನಿರಾಳವಾಗಿದ್ದಾರೆ.

ಭದ್ರಾ ನಿವಾಸ್‌ ಬಂದ್‌

ಜಿಲ್ಲೆಗೆ ಪ್ರವಾಸಿ ತಾಣಗಳಿಗೆ ಹೊರಗಿನ ಪ್ರವಾಸಿಗರು ಭೇಟಿ ನೀಡುವುದನ್ನು ಹಾಗೂ ಹೋಂ ಸ್ಟೇ, ರೆಸಾರ್ಟ್‌ ಹಾಗೂ ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದ ಭದ್ರಾ ನಿವಾಸವನ್ನು ಬಂದ್‌ ಮಾಡಲಾಗಿದೆ. ದೇವಾಲಯಕ್ಕೆ ಬರುವ ಭಕ್ತರು ಇಲ್ಲಿನ ಭದ್ರಾ ನಿವಾಸದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಡಿಸಿ ಆದೇಶದ ಹಿನ್ನೆಲೆಯಲ್ಲಿ ಭದ್ರಾ ನಿವಾಸದಲ್ಲಿ ಉಳಿದುಕೊಳ್ಳಲು ಯಾರಿಗೂ ಅವಕಾಶ ನೀಡದಿರಲು ದೇವಾಲಯದ ಮುಖ್ಯಸ್ಥರು ತೀರ್ಮಾನ ತೆಗೆದುಕೊಂಡಿದ್ದಾರೆ. ಇಲ್ಲಿಗೆ ಬರುವವರು ನೇರವಾಗಿ ದೇವರ ದರ್ಶನ ಪಡೆದು ವಾಪಸ್‌ ಹೋಗಬೇಕೆಂದು ದೇವಸ್ಥಾನ ಸಮಿತಿ ವಿನಂತಿಸಿದೆ.
 

Follow Us:
Download App:
  • android
  • ios