ವರ್ಷವಿಡೀ ಖುಷಿ, ಕಹಿ ನೆನಪುಗಳ ಹಂಚಿದ 2022ಹಿಂದೆ ಸರಿದಿದ್ದು, 2023 ಪ್ರವೇಶವಾಗಿದೆ. ಕೆಲ ಅಭಿವೃದ್ಧಿ ಕನಸುಗಳು ಸಾಕಾರಗೊಳ್ಳದೆ ನೆನೆಗುದಿಗೆ ಬಿದ್ದಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಈ ಬಾರಿಯಾದರೂ ಕನಸು ನನಸಾದೀತೆ ಎಂಬ ಭರವಸೆಗಳಿಗೆ ರೆಕ್ಕೆ ಪುಕ್ಕ ಬಂದಿವೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

Add Asianetnews Kannada as a Preferred SourcegooglePreferred

ಚಿತ್ರದುರ್ಗ (ಜ.1) : ವರ್ಷವಿಡೀ ಖುಷಿ, ಕಹಿ ನೆನಪುಗಳ ಹಂಚಿದ 2022ಹಿಂದೆ ಸರಿದಿದ್ದು, 2023 ಪ್ರವೇಶವಾಗಿದೆ. ಕೆಲ ಅಭಿವೃದ್ಧಿ ಕನಸುಗಳು ಸಾಕಾರಗೊಳ್ಳದೆ ನೆನೆಗುದಿಗೆ ಬಿದ್ದಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಈ ಬಾರಿಯಾದರೂ ಕನಸು ನನಸಾದೀತೆ ಎಂಬ ಭರವಸೆಗಳಿಗೆ ರೆಕ್ಕೆ ಪುಕ್ಕ ಬಂದಿವೆ.

ಚಿತ್ರದುರ್ಗ(Chitradurga)ಕ್ಕೆ ಸರ್ಕಾರಿ ಮೆಡಿಕಲ್‌ ಕಾಲೇಜು(Govt medical collage) ಮಂಜೂರಾಗಿ ಹತ್ತು ವರ್ಷಗಳು ದಾಟಿ ಹೋಗಿದೆ. ಚಿತ್ರದುರ್ಗ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌(ಸಿಐಎಂಎಸ್‌) (Chitradurga Institute of Medical Science (CIMS)) ಹೆಸರಲ್ಲಿ ನೋಂದಣಿಯಾಗಿದ್ದು, ಆಸ್ಪತ್ರೆಗೆ ಬೇಕಾಗಿರುವ ಭೂಮಿ ವರ್ಗಾವಣೆ ಆಗಿದೆ. ಸೂಕ್ತ ಅನುದಾನ ಬಿಡುಗಡೆ ಮಾಡಿ, ಡೀನ್‌ ನೇಮಕ ಮಾಡಿ ಅಗತ್ಯ ಕಾಮಗಾರಿ, ಸಿಬ್ಬಂದಿ ನೇಮಕಾತಿ ಮುಂತಾದ ಪ್ರಕ್ರಿಯೆ ಕೈಗೆತ್ತಿಕೊಳ್ಳಬೇಕಾಗಿದೆ. ಚಿತ್ರದುರ್ಗದ ಸಂಗಡ ಮಂಜೂರಾದ ಕೊಪ್ಪಳ ಮೆಡಿಕಲ್‌ ಕಾಲೇಜು ಈಗಾಗಲೇ ಕಾರ್ಯಾರಂಭ ಮಾಡಿದ್ದು, ಚಿತ್ರದುರ್ಗ ಮಾತ್ರ ನೆನೆಗುದಿಗೆ ಬಿದ್ದಿದೆ.

ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮತ್ತೆ ವಿಘ್ನ: ಕಾಮಗಾರಿಗೆ ವಿರೋಧ

ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಮೆಡಿಕಲ್‌ ಕಾಲೇಜು ಆರಂಭಕ್ಕೆ ಹಿನ್ನಡೆಯಾಗಿದೆ. ಬೇರೆ ಜಿಲ್ಲೆಗಳ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗುವುದು, ಇಲ್ಲಿ ಇರುವವರು ಆಸಕ್ತಿ ಕಳೆದುಕೊಂಡಿರುವುದು, ಅಭಿವೃದ್ಧಿ ರಾಜಕಾರಣ ಅಂದ್ರೆ ರಸ್ತೆ, ಚರಂಡಿ ಮಾಡುವುದು ಎಂಬಲ್ಲಿಗೆ ಬಂದು ನಿಂತಿರುವುದೇ ಮೆಡಿಕಲ್‌ ಕಾಲೇಜು ಆರಂಭಕ್ಕೆ ತೊಡರುಗಾಲಾಗಿದೆ.

2021ರಲ್ಲಿ ದೀಪಾವಳಿ ಕೊಡುಗೆ ಎಂಬಂತೆ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೆಡಿಕಲ್‌ ಕಾಲೇಜಿಗೆ ಐವತ್ತು ಕೋಟಿ ರುಪಾಯಿ ಘೋಷಣೆ ಮಾಡಿ ಸುಮ್ಮನಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿಶೇಖರ್‌ ವಿಧಾನಸಭೆ ಅಧಿವೇಶನದಲ್ಲಿ ಕೇಳಿದ ಮೆಡಿಕಲ್‌ ಕಾಲೇಜಿಗೆ ಸಂಬಂಧಿಸಿದ ಪ್ರಶ್ನೆಗೆ ಚಿತ್ರದುರ್ಗದಲ್ಲಿ ಮೆಡಿಕಲ್‌ ಕಾಲೇಜು ಆರಂಭಿಸುವ ಪ್ರಸ್ತಾವ ಸರ್ಕಾರದ ಮಂದೆ ಇಲ್ಲವೆಂಬ ಆಘಾತಕಾರಿ ಅಂಶ ತಿಳಿಸಲಾಗಿತ್ತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಮೆಡಿಕಲ್‌ ಕಾಲೇಜು ಹೋರಾಟ ದುರ್ಗದ ಜನ ಜೀವಂತವಾಗಿ ಇಟ್ಟುಕೊಂಡು ಬಂದಿದ್ದಾರೆ.

ಚಿತ್ರದುರ್ಗ ಹೊರವಲಯದ ಕುಂಚಿಗನಹಾಳು ಬಳಿ 83 ಎಕರೆ ಸರ್ಕಾರಿ ಜಮೀನು ಇದ್ದು, ಅದನ್ನು ಮೆಡಿಕಲ್‌ ಕಾಲೇಜು ಕಟ್ಟಡಕ್ಕೆ ಮೀಸಲಿರಿಸುವಂತೆ ಎರಡು ದಿನಗಳ ಹಿಂದೆಯಷ್ಟೇ ನಡೆದ ದಿಶಾ ಮೀಟಿಂಗ್‌ನಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಈ ಬೆಳವಣಿಗೆಯಿಂದಾಗಿ ಮೆಡಿಕಲ್‌ ಕಾಲೇಜು ವಿಷಯ ಜೀವಂತವಾಗಿರುವುದು ವೇದ್ಯವಾಗಿತ್ತು. ಈ ವರ್ಷವಾದರೂ ಮೆಡಿಕಲ್‌ ಕಾಲೇಜು ಆರಂಭವಾಗುವುದೇ ಎಂಬ ದುರ್ಗದ ಜನರ ಕನಸುಗಳಿಗೆ ಇನ್ನೇನು ಹತ್ತಿರ ಬಂದ ವಿಧಾನಸಭೆ ಚುನಾವಣೆ ಸ್ಪಷ್ಟದಿಕ್ಕು ತೋರಿಸಬಹುದು.

ಅಬ್ಬಿನಹೊಳಲು ತೊಡರುಗಾಲು:

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡು ನಾಲ್ಕು ಮೋಟಾರು ಪಂಪುಗಳಲ್ಲಿ ನೀರು ಮೇಲೆತ್ತಲು ಅಜ್ಜಂಪುರ ಬಳಿಯ ಅಬ್ಬಿನಹೊಳಲು ಸಮೀಪ 1.9 ಕಿಮೀ ಭೂ ಸ್ವಾಧೀನ ಪ್ರಕ್ರಿಯೆ ಅಡ್ಡಿಯಾಗಿದೆ. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಹಾಗೆಯೇ ಉಳಿದಿದೆ. 1.9 ಕಿಮೀ ಭೂ ಸ್ವಾಧೀನದ ಹಿಂದೆ ರಾಜಕೀಯ ಮೇಲಾಟಗಳು ನಡೆದಿದ್ದು ಚಿತ್ರದುರ್ಗ ಜಿಲ್ಲೆಯ ಯಾರೊಬ್ಬ ರಾಜಕಾರಣಿಗಳು ಗಟ್ಟಿಯಾಗಿ ನಿಂತು ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ತೋರುತ್ತಿಲ್ಲ. ಈ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದಲ್ಲಿ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳು ತುಂಬುತ್ತಿದ್ದವು.

ಚಿತ್ರದುರ್ಗ ಜಿಲ್ಲೆಗೆ ಸಿಎಂ ಬಿಎಸ್‌ವೈರಿಂದ ಬಂಪರ್ ದೀಪಾವಳಿ ಕೊಡುಗೆ

ಈ ವರ್ಷ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ವಿವಿ ಸಾಗರ ಸೇರಿದಂತೆ ಅನೇಕ ಕೆರೆ, ಕಟ್ಟೆಗಳು ಭರ್ತಿಯಾಗಿದ್ದವು. ಸಹಜವಾಗಿಯೇ ಭದ್ರಾ ಮೇಲ್ದಂಡೆ ಕಾಮಗಾರಿಯತ್ತ ರೈತರು ಚಿತ್ತ ಹರಿಸುವುದನ್ನು ಮರೆತಿದ್ದಾರೆ. ಹಾಗಂರ ಸರ್ಕಾರ ಮೈ ಮರೆಯುವಂತಿಲ್ಲ. ಬೇಗ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಯೋಜನಾ ವೆಚ್ಚ ತಗ್ಗುತ್ತದೆ. ಮುಂದಿನ ಮಳೆಗಾಲದಲ್ಲಿ ನಾಲ್ಕು ಪಂಪುಗಳಲ್ಲಿ ಭದ್ರೆ ಲಿಫ್‌್ಟಮಾಡಿ ಕೆರಗಳ ತುಂಬಿಸಿಕೊಳ್ಳಬಹುದು.