ಸಿಎಂ ಆಯ್ತು ಧಾರವಾಡ ಜಿಲ್ಲೆಯ ಯಾರಿಗೆ ಮಂತ್ರಿಗಿರಿ ಪಟ್ಟ?
* ಸಿಎಂ ಸ್ಥಾನಕ್ಕಾಗಿ ಕೊನೆ ವರೆಗೂ ಹೋರಾಟ ನಡೆಸಿದ ಅರವಿಂದ ಬೆಲ್ಲದ
* ಶಂಕರ ಪಾಟೀಲ ಮುನೇನಕೊಪ್ಪ ಅವರ ರಾಜಕೀಯ ಗುರು ಬಸವರಾಜ ಬೊಮ್ಮಾಯಿ
* ಸುಮ್ಮನೆ ಕೂತಿಲ್ಲ ಬೆಲ್ಲದ
ಹುಬ್ಬಳ್ಳಿ(ಜು.29): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಬೊಮ್ಮಾಯಿ ಸಂಪುಟದಲ್ಲಿ ಯಾರಾರಯರು ಇರಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಬೊಮ್ಮಾಯಿ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರದು.
ಶಂಕರ ಪಾಟೀಲ ಮುನೇನಕೊಪ್ಪ ಅವರ ರಾಜಕೀಯ ಗುರು ಬಸವರಾಜ ಬೊಮ್ಮಾಯಿ. ಇಬ್ಬೂ ಮೊದಲು ಜನತಾದಳದಲ್ಲಿದ್ದವರು. ಬೊಮ್ಮಾಯಿ ಅವರೊಂದಿಗೆ ಬಿಜೆಪಿ ಸೇರಿ ನವಲಗುಂದ ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದಾರೆ. 2008ರಲ್ಲಿ ಪಕ್ಷಕ್ಕೆ ಬಂದರೂ ಪಕ್ಷ ನಿಷ್ಠೆಗೆ ಹೆಸರಾದವರು. ಕಳಸಾ-ಬಂಡೂರಿ, ಕುಡಿಯುವ ನೀರಿಗಾಗಿ ನಡೆದ ಹಲವು ಹೋರಾಟಗಳಲ್ಲಿ ಬೊಮ್ಮಾಯಿ ಅವರೊಂದಿಗೆ ಹೆಜ್ಜೆ ಹಾಕಿದವರು ಇವರು. ಶಾಸಕರಾದ ಮೇಲೂ ತಮ್ಮ ಹೋರಾಟವನ್ನು ಮಾತ್ರ ಬಿಟ್ಟಿರಲಿಲ್ಲ. ಹಿಂದೆ ತಾವು ಯಾವ ಬೇಡಿಕೆ ಇಟ್ಟು ಹೋರಾಟ ಮಾಡಿದ್ದರೂ ಅವುಗಳನ್ನು ಶಾಸಕರಾಗಿ ಈಡೇರಿಸಲು ಶ್ರಮಿಸುತ್ತಿದ್ದಾರೆ. ನವಲಗುಂದ ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಪಕ್ಷದ ಹಿರಿಯ ಮುಖಂಡರಾದ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಅವರ ಆಪ್ತರಾಗಿದ್ದಾರೆ.
ಇದೀಗ ತಮ್ಮ ರಾಜಕೀಯ ಗುರುವೇ ಮುಖ್ಯಮಂತ್ರಿಯಾಗಿರುವ ಕಾರಣ ಸಹಜವಾಗಿ ಶಂಕರ ಪಾಟೀಲ ಮುನೇನಕೊಪ್ಪ ಕೂಡ ಸಂಪುಟ ಸೇರುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ, ನಗರ ಮೂಲಸೌಲಭ್ಯ ಹಾಗೂ ಒಳಚರಂಡಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಮುನೇನಕೊಪ್ಪ ಅವರಿಗೆ ಈ ಸಲ ಸಂಪುಟದಲ್ಲಿ ಸ್ಥಾನ ದೊರೆಯಬೇಕೆಂಬ ಒತ್ತಾಸೆ ಅವರ ಬೆಂಬಲಿಗರದು.
ಸಿಎಂ ರೇಸ್ನಲ್ಲಿದ್ದ ಅರವಿಂದ್ ಬೆಲ್ಲದ್ ದಿಢೀರ್ ಬಸವರಾಜ ಬೊಮ್ಮಾಯಿ ಭೇಟಿ
ಬೆಲ್ಲದಗೆ ಸಿಗುವುದೇ ಮಂತ್ರಿ ಸ್ಥಾನ!
ಇನ್ನೇನು ಅರವಿಂದ ಬೆಲ್ಲದ ಅವರಿಗೆ ಮುಖ್ಯಮಂತ್ರಿ ಪಟ್ಟದೊರಕಿತು ಎನ್ನುವಷ್ಟರಲ್ಲಿ ಕೊನೆ ಕ್ಷಣದಲ್ಲಿ ಅವರ ಅದೃಷ್ಟ ಕೈಹಿಡಿಯಲಿಲ್ಲ. ಈಗ ಮಂತ್ರಿ ಸ್ಥಾನವನ್ನಾದರೂ ಪಡೆಯುವ ಹಂಬದಲ್ಲಿದ್ದಾರೆ ಬೆಲ್ಲದ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಅರವಿಂದ ಬೆಲ್ಲದ, ಎರಡು ಬಾರಿ ಶಾಸಕರಾಗಿದ್ದಾರೆ. ಸದ್ಯ ಧಾರವಾಡ ಜಿಲ್ಲೆಯ ಬಿಜೆಪಿ ಜಿಲಾಧ್ಯಕ್ಷರೂ ಹೌದು. ಆರ್ಎಸ್ಸೆಸ್ ಹಿನ್ನೆಲೆ ಹಾಗೂ ಬಿಜೆಪಿ ವರಿಷ್ಠರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವುದರಿಂದ ಒಂದೂ ಬಾರಿ ಮಂತ್ರಿ ಆಗದೇ ಇದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ಶತಾಯ-ಗತಾಯ ಪ್ರಯತ್ನ ನಡೆಸುವ ಮೂಲಕ ರಾಜ್ಯಾದ್ಯಂತ ಪರಿಚಿತರಾದರು.
ಸುಮ್ಮನೆ ಕೂತಿಲ್ಲ ಬೆಲ್ಲದ:
ನಾಲ್ಕು ಬಾರಿ ಶಾಸಕರಾದ ಚಂದ್ರಕಾಂತ ಬೆಲ್ಲದ ಅವರ ಪುತ್ರ ಅರವಿಂದ ಬೆಲ್ಲದ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿ ಹೋಯಿತು ಎಂದು ಸುಮ್ಮನೆ ಕೂತಿಲ್ಲ. ಮತ್ತೆ ಬಿಜೆಪಿ ವರಿಷ್ಠರ ಬೆನ್ನು ಬಿದ್ದಿದ್ದಾರೆ. ಸದ್ಯ ಬೆಂಗಳೂರಿನಲ್ಲಿಯೇ ಇರುವ ಬೆಲ್ಲದ ದೂರವಾಣಿ ಮೂಲಕ ಮಂತ್ರಿ ಸ್ಥಾನಕ್ಕಾಗಿ ಮೊರೆ ಇಡುತ್ತಿದ್ದಾರೆ. ದೆಹಲಿಯಿಂದ ಕರೆ ಬಂದರೆ ಮತ್ತೊಮ್ಮೆ ದೆಹಲಿಗೆ ಹೋಗಿ ವರಿಷ್ಠರ ಮೂಲಕ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ತೆರೆ ಮರೆಯಲ್ಲಿ ಬೆಲ್ಲದ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಯಾವುದೇ ತರಹದ ಕಪ್ಪು ಚುಕ್ಕೆ ಹೊಂದಿರದ ಬೆಲ್ಲದ ಸಮಯ, ಸಂದರ್ಭ ಬಂದಾಗ ಕೇಂದ್ರ ಸರ್ಕಾರದ ನಾಯಕರೊಂದಿಗೆ ಧಾರವಾಡ ಅಭಿವೃದ್ಧಿ ಪರವಾಗಿ ಅನೇಕ ಬಾರಿ ಮಾತುಕತೆ ನಡೆಸಿ ಕ್ಷೇತ್ರಕ್ಕೆ ಬೇಕಾದ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಈಗ ಮಂತ್ರಿ ಸ್ಥಾನವನ್ನಾದರೂ ಕೊಡಬೇಕು ಎಂದು ಬೆಲ್ಲದ ಅಭಿಮಾನಿ ಬಸವರಾಜ ಗರಗ ಆಗ್ರಹಿಸಿದ್ದಾರೆ.
ಸುಮಾರು ಕಳೆದ ಒಂದು ತಿಂಗಳಿಂದ ರಾಜಕೀಯ ಬೆಳವಣಿಗೆಯಿಂದಾಗಿ ಬೆಂಗಳೂರು ನಿವಾಸಿಯಾಗಿರುವ ಅರವಿಂದ ಬೆಲ್ಲದ ಅವರ ಸತತ ಪ್ರಯತ್ನದ ಫಲವಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆಯುವರೇ ಎಂಬುದನ್ನು ಕಾದು ನೋಡಬೇಕಿದೆ.