ಹಿಂದೂಪರ ಸಂಘಟನೆಗಳ ಮುಖಂಡರಿಂದ ತೀವ್ರ ಆಕ್ರೋಶ| ಮುಂದೆ ನಿಂತು ಬರಹ ಅಳಿಸಿ ಹಾಕಿಸಿದರು ಪೊಲೀಸರು| ನಗರದಲ್ಲಿ ಬಿಗುವಿನ ವಾತಾವರಣ| ಯುವಕರನ್ನು ಸಮಾಧಾನ ಪಡಿಸಿದನ ಪೊಲೀಸರು|

ನರಗುಂದ(ಜ.17): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಬುಧವಾರ ರಾತ್ರಿ ಇಲ್ಲಿನ ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹ ಬರೆದಿದ್ದು, ಗುರುವಾರ ನಗರದಲ್ಲಿ ಬಿಗುವಿನ ವಾತಾವರಣ ಕಂಡು ಬಂತು.

Add Asianetnews Kannada as a Preferred SourcegooglePreferred

ಪಟ್ಟಣದ ವೆಂಕಟೇಶ್ವರ ದೇವಸ್ಥಾನ, ವಾಸವಿ ಕಲ್ಯಾಣ ಮಂಟಪ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಗೋಡೆ ಬರಹ ಬರೆಯಲಾಗಿತ್ತು. ಡಿವೈಎಸ್‌ಪಿ ಶಿವಾನಂದ ಕಟಿಗಿ ಹಾಗೂ ಸಿಪಿಐ ಡಿ.ಬಿ. ಪಾಟೀಲ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಯುವಕರನ್ನು ಸಮಾಧಾನ ಪಡಿಸಿದರು. ಆರೋಪಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳುತ್ತೇವೆ. ಆ ಗೋಡೆ ಬರಹ ಅಳಿಸಿ ಹಾಕುವುದಾಗಿ ಭರವಸೆ ನೀಡಿದಾಗ ಯುವಕರು ಸಮಾಧಾನವಾದರು.

ಪಟ್ಟಣದಲ್ಲಿ ಬುಧವಾರ ರಾತ್ರಿ ದೇವಸ್ಥಾನ, ಶಾಲಾ, ಕಾಲೇಜು, ಹಾಗೂ ಖಾಸಗಿಯವರ ಗೋಡೆಗಳ ಮೇಲೆ ಬರೆದ ಎಲ್ಲ ಬರಹವನ್ನು ಪೊಲೀಸರೇ ಮುಂದೆ ನಿಂತು ಅಳಿಸಿ ಹಾಕಿಸಿದಲ್ಲದೇ, ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶವಾಗದಂತೆ ಅಗತ್ಯ ಕ್ರಮ ಕೈಗೊಂಡರು.

ವಿಶ್ವ ಹಿಂದು ಪರಿಷತ್‌ ಮುಖಂಡ ರವಿ ಹೊಂಗಲ ಮಾತನಾಡಿ, ಪಟ್ಟಣದಲ್ಲಿ ನಡೆಯಬಾರದ ಘಟನೆ ಬುಧವಾರ ರಾತ್ರಿ ನಡೆದಿದೆ, ನಮಗೆ ನೋವು ತಂದಿದೆ. ನಾವು ದೇಶ ವಿರೋಧಿಗಳನ್ನು ಸಹಿಸಿಕೊಳ್ಳುವುದಿಲ್ಲ. ಪೌರತ್ವ ಕಾಯ್ದೆ ವಿರೋಧಿಸಿ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹ ಬರೆದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹ ಮಾಡಿದರು.

ಡಿವೈಎಸ್‌ಪಿ ಶಿವಾನಂದ ಕಟಿಗಿ ಮಾತನಾಡಿ, ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ವಿವಿಧೆಡೆ ನಡೆದಿವೆ. ಪಟ್ಟಣದಲ್ಲಿ ಗೋಡೆ ಬರಹ ಮಾಡಿ ಘರ್ಷಣೆಗೆ ಪ್ರಚೋದನೆ ಕೊಡುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದರು.(ಚಿತ್ರ:ಸಾಂದರ್ಭಿಕ ಚಿತ್ರ)