ವಿನಯ್ ಗುರೂಜಿ ಗೋ ಪೂಜೆ ಬಳಿಕ ನಡೆಯಿತೊಂದು ಅಚ್ಚರಿ ಪ್ರಸಂಗ
ವಿನಯ್ ಗುರೂಜಿ ವಿಧಾನಸೌಧದ ಬಳಿ ಗೋವಿನ ಪೂಜೆ ಮಾಡಿದ ಬಳಿಕ ಅಚ್ಚರಿಯ ಘಟನೆಯೊಂದು ಜರುಗಿದೆ. ಏನದು ಘಟನೆ..?
ಬೆಂಗಳೂರು (ಡಿ.13): ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೋವೊಂದು ವಿಧಾನಸೌಧದ ಬಳಿ ತಲೆತೂಗಿ ಆಶೀರ್ವದಿಸಿದ ಪ್ರಸಂಗ ನಡೆದಿದೆ ಎಂದು ಹೇಳಲಾಗಿದೆ.
ಈ ಘಟನೆಯು ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಸಂಸ್ಥಾಪಕ ವಿನಯ್ ಗುರೂಜಿ ಅವರು ಇತ್ತೀಚೆಗೆ ವಿಧಾನಸೌಧ ಬಳಿ ಗೋವಿನ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ನಡೆಯಿತು ಎನ್ನಲಾಗಿದೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ವಿನಯ್ ಗುರೂಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಡಾ. ಬೇಲೂರು ರಾಘವೇಂದ್ರ ಶೆಟ್ಟಿ, ಮಹಾತ್ಮಗಾಂಧಿ ಸೇವಾ ಟ್ರಸ್ಟ್ನ ಶಿವಕುಮಾರ್ ಹಾಗೂ ಅರುಣ್ ಸೇರಿದಂತೆ ಮೊದಲಾದವರು ಕಳೆದ ಗುರುವಾರ ಗೋವಿನ ಪೂಜೆ ನೆರವೇರಿಸಿ ರಾಜ್ಯ ಸರ್ಕಾರ ಮತ್ತು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು.
'ವಿಧೇಯಕ ಅಂಗೀಕಾರಕ್ಕೆ ಅಡ್ಡಿ, ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ' ...
ಈ ವೇಳೆ ಪೂಜೆಗೊಳಪಟ್ಟಹಸುಗಳನ್ನು ಬಸವಗುಡಿ ಮತ್ತು ಉತ್ತರಹಳ್ಳಿಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು. ಈ ಪೈಕಿ ಒಂದು ಗೋವು, ಎಷ್ಟೇ ಪ್ರಯತ್ನ ಪಟ್ಟರು ವಾಹನವೇರದೆ ಸಿಬ್ಬಂದಿಯಿಂದ ತಪ್ಪಿಸಿಕೊಂಡು ವಿಧಾನಸೌಧದ ದ್ವಾರದ ಮುಂದೆ ಹೋಗಿ ನಿಂತು ತಲೆ ತೂಗಿತು ಎಂದು ಹೇಳಲಾಗಿದೆ. ಸುಮಾರು ಸಮಯದವರೆಗೂ ವಿಧಾನಸೌಧದ ಮುಂಭಾಗದಲ್ಲಿ ಗೋವು ನಿಂತಿತ್ತು. ಗೋವನ್ನು ಅಲ್ಲಿಂದ ಕರೆದೊಯ್ಯಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು ಎಂದು ಹೇಳಲಾಗಿದೆ.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ಬೆನ್ನಲೆ ಗೋವು ವಿಧಾನಸೌಧ ಮುಂದೆ ಹೋಗಿ ನಿಂತ್ತಿದ್ದನ್ನು ಕಂಡು ಸಾರ್ವಜನಿಕರು ಮತ್ತು ವಿಧಾನಸೌಧ ಭದ್ರತಾ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸಿದರೆ, ಗೋವಿನ ಈ ವರ್ತನೆಯು ಗೋ-ಹತ್ಯೆನಿಷೇಧ ಕಾಯ್ದೆ ಜಾರಿಗೊಳಿಸಿ ಗೋ ಸಂರಕ್ಷಣೆಗೆ ಕ್ರಮಗೊಂಡ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ನೀಡಿದ ಆಶೀರ್ವಾದ ಎಂದೇ ಗೋಪೂಜೆ ಆಯೋಜಕರು ಬಣ್ಣಿಸಿದ್ದಾರೆ.