Asianet Suvarna News Asianet Suvarna News

ಮಳೆ ಬಂದರೆ ಹೊರಸಂಪರ್ಕವೇ ಕಡಿತ: ವರ್ಷದಲ್ಲಿ 5 ತಿಂಗಳು ವಾಹನ ಸಂಚಾರ ವಂಚಿತ ಗ್ರಾಮಸ್ಥರು..!

*   ಮಳೆ ಆರಂಭದ ಮೊದಲೇ ಆಹಾರ ಸಾಮಗ್ರಿ ಸಂಗ್ರಹ
*  ಅನಾರೋಗ್ಯ ಸಮಸ್ಯೆ ಇದ್ದರೆ ಕಂಬಳಿಯೇ ಇವರಿಗೆ ಆ್ಯಂಬುಲೆನ್ಸ್‌
*  ಗ್ರಾಮದ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು 

Villagers Faces Problems During Rainy Season at Sirsi in Uttara Kananda grg
Author
Bengaluru, First Published Jun 12, 2022, 10:34 AM IST

ಮಂಜುನಾಥ ಸಾಯಿಮನೆ

ಶಿರಸಿ(ಜೂ.12):  ತಾಲೂಕಿನ ವಾನಳ್ಳಿ ಗ್ರಾಪಂನ ಹಗುರಮನೆ ಮತ್ತು ಮೇಲಿನ ಗದ್ದೆಯ ಜನತೆ ಮಳೆಗಾಲ ಬಂತೆಂದರೆ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಾರೆ. ಗ್ರಾಮಕ್ಕೆ ಅಡ್ಡಲಾಗಿ ಹರಿಯುವ ನದಿಯು ಇಲ್ಲಿಯ ಜನತೆಯ ಹೊರ ಸಂಪರ್ಕವನ್ನೇ ತಪ್ಪಿಸುತ್ತಿದೆ.

ಈ ಹಳ್ಳಿಗಳಲ್ಲಿ 31 ಕುಟುಂಬಗಳಿದ್ದು, 100 ಜನಸಂಖ್ಯೆ ಇದೆ. ಸ್ವಾತಂತ್ರ್ಯ ದೊರಕಿ 75 ವಸಂತಗಳಾದರೂ ಸೇತುವೆ ಸೌಲಭ್ಯ ಇಲ್ಲದ ಕಾರಣ ಹಾಗೂ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವ ಕಾರಣ ವರ್ಷದ 5 ತಿಂಗಳು ಗ್ರಾಮವು ವಾಹನ ಸಂಪರ್ಕದಿಂದ ವಂಚಿತವಾಗುತ್ತದೆ.

UTTARA KANNADA: ಭೂ ಕುಸಿತದಂತಹ ಸಮಸ್ಯೆಗಳನ್ನು ನಿಭಾಯಿಸಲು ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಪ್ಲ್ಯಾನ್!

ಈ ಗ್ರಾಮವು ಶಿರಸಿಯಿಂದ ಹುಲೆಕಲ, ವಾನಳ್ಳಿ, ಕಕ್ಕಳ್ಳಿ ಮಾರ್ಗವಾಗಿ ಶಿರಸಗಾಂವದಿಂದ ಹಗುರಮನೆ ಮತ್ತು ಮೇಲಿನಗದ್ದೆಗೆ ಶಿರಸಿಯಿಂದ ಸುಮಾರು 35 ಕಿ.ಮೀ. ದೂರದಲ್ಲಿದೆ. ಚಳಹೊಳೆಗೆ ಸೇತುವೆ ಇಲ್ಲ. ಇಂತಹ ಹಲವು ಕೊರತೆಗಳ ನಡುವೆಯೇ ಇಲ್ಲಿನ ಜನತೆ ಬದುಕುತ್ತಿದ್ದಾರೆ.

ಅಂಗವಿಕಲರು ಮತ್ತು ವೃದ್ಧರು ಇಲ್ಲಿ ತೀರಾ ಕಷ್ಟಪಡುತಿದ್ದಾರೆ. ಮಳೆಗಾಲದ ಪೂರ್ವದಲ್ಲಿ ಮುಂದಿನ 6 ತಿಂಗಳಿಗೆ ಅವಶ್ಯವಾದ ಆಹಾರ ಸಾಮಗ್ರಿ, ಕೃಷಿ ಚಟುವಟಿಕೆ ಪೂರಕವಾದ ರಸಗೊಬ್ಬರ, ಆಹಾರ ಧಾನ್ಯ ಸಾಮಗ್ರಿಗಳನ್ನು ಶೇಖರಿಸಿ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ.

ಈ ಗ್ರಾಮದಿಂದ ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜುಗಳಿಗೆ ಹೋಗುವ ಸುಮಾರು 18 ಮಕ್ಕಳು ರಸ್ತೆ ಸಂಪರ್ಕ, ಕಾಲುಸಂಕವಿಲ್ಲದೇ ಅರಣ್ಯ ಮತ್ತು ಗಿಡ -ಗಂಟೆಗಳ ಮಧ್ಯದಿಂದಲೇ ಓಡಾಡುವ ದುಃಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ಸರ್ವಋುತು ರಸ್ತೆ ಇಲ್ಲದಿರುವುದರಿಂದ ಅನಾರೋಗ್ಯ ಪೀಡಿತರನ್ನು ಆರೋಗ್ಯ ಕೇಂದ್ರಕ್ಕೆ ಕಂಬಳಿಯಲ್ಲಿ ಸುತ್ತಿ ಸಾಗಿಸುವ ಸಾಹಸವನ್ನು ಗ್ರಾಮಸ್ಥರು ಆಗಾಗ ಮಾಡುವ ಪ್ರಸಂಗಗಳು ಜರುಗಿವೆ.

Uttara Kannada: ನೆರೆಯಿಂದ ಜನರನ್ನು ರಕ್ಷಿಸಲು ಜಿಲ್ಲಾಡಳಿತದಿಂದ ಡ್ಯಾಂ ಮ್ಯಾನೇಜ್‌ಮೆಂಟ್ ಪ್ಲ್ಯಾನ್!

ಸೇತುವೆ ನಿರ್ಮಾಣಕ್ಕೆ ಆಗ್ರಹ

ಹಿಂದೆ ಮಂಜೂರಾದ ಸೇತುವೆಯನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಿರುವುದರಿಂದ ನಮ್ಮ ಗ್ರಾಮಕ್ಕೆ ಸೇತುವೆ ಇಲ್ಲದೇ ಮಳೆಗಾಲದಲ್ಲಿ ನಗರ ಪ್ರದೇಶದ ಸಂಪರ್ಕದಿಂದ ವಂಚಿತರಾಗುತ್ತೇವೆ. ಆಹಾರ ಮತ್ತು ಕೃಷಿ ಸಾಮಗ್ರಿ ಸಾಗಾಟಕ್ಕೆ ತೊಂದರೆಯಾಗುತ್ತಿದೆ. ಶಾಲಾ ಮಕ್ಕಳು ಮತ್ತು ಹೆಂಗಸರಿಗೆ ಮಳೆಗಾಲದ ನಂತರ ಓಡಾಟಕ್ಕೆ ಸಾಧ್ಯವಾಗದೇ ಇರುವುದರಿಂದ ಸರ್ಕಾರ ಅತೀ ಶೀಘ್ರದಲ್ಲಿ ಸೇತುವೆ ಮಂಜೂರು ಮಾಡಬೇಕೆಂದು ಗ್ರಾಮಸ್ಥರಾದ ನಾರಾಯಣ ಯಂಕು ಗೌಡ, ಗೌರಿ ಬೊಮ್ಮ ಗೌಡ ಮತ್ತು ಸವಿತಾ ಗಣಪತಿ ಗೌಡ ಸಾರ್ವತ್ರಿಕವಾಗಿ ಅಳಲು ತೊಡಿಕೊಂಡಿದ್ದಾರೆ.

ಸ್ವಾತಂತ್ರ್ಯ ದೊರಕಿ 75 ವರ್ಷಗಳಾದರೂ ಅತ್ಯಂತ ಹಿಂದುಳಿದ ಪ್ರದೇಶದ ಮೂಲಭೂತ ಸೌಕರ್ಯದಿಂದ ಗ್ರಾಮವು ವಂಚಿತವಾಗಿರುವುದು ಖೇದಕರ. ಈ ಗ್ರಾಮದ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಅಂತ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.  

Follow Us:
Download App:
  • android
  • ios