ವಿಜಯಪುರ ಜಿಲ್ಲೆಯ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 2700 ಕೋಟಿ ವೆಚ್ಚದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೂ ಪ್ರಧಾನಿಯವರಿಂದಲೇ ಅಡಿಗಲ್ಲು ನೆರವೇರಿಸಲಾಗುವುದು ಎಂದ ಕಾರಜೋಳ. 

ಆಲಮಟ್ಟಿ(ಜ.20): ವಿಜಯಪುರದ ಬಸವೇಶ್ವರ ವಿಮಾನ ನಿಲ್ದಾಣ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಇದೇ ಫೆಬ್ರುವರಿಯಲ್ಲಿ ಪ್ರಧಾನ ಮಂತ್ರಿಗಳನ್ನು ಕರೆಸಿ ಉದ್ಘಾಟಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Add Asianetnews Kannada as a Preferred SourcegooglePreferred

ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಅದರ ಜತೆಗೆ ಜಿಲ್ಲೆಯ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ .2700 ಕೋಟಿ ವೆಚ್ಚದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೂ ಪ್ರಧಾನಿಯವರಿಂದಲೇ ಅಡಿಗಲ್ಲು ನೆರವೇರಿಸಲಾಗುವುದು ಎಂದರು.

ದೊಡ್ಡಗೌಡರ ಕ್ಷಮೆ ಕೇಳದಿದ್ರೆ ಕಟೀಲ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಸಿಎಂ ಇಬ್ರಾಹಿಂ

ಟ್ವಿಟ್‌ಗೆ ತಿರುಗೇಟು:

ಪ್ರಧಾನಿ ಮೋದಿ ಗುರುವಾರ ಲೋಕಾರ್ಪಣೆಗೊಳಿಸಿದ ನಾರಾಯಣಪುರ ಎಡದಂಡೆ ಕಾಲುವೆಯ ನೀರು ನಿಯಂತ್ರಣ ಹಾಗೂ ಸದ್ಬಳಕೆಯ ಸ್ಕಡಾ ತಂತ್ರಜ್ಞಾನಕ್ಕೆ ಬಸವರಾಜ ಬೊಮ್ಮಾಯಿ ಅವರು 2012ರಲ್ಲಿ ಜಲಸಂಪನ್ಮೂಲ ಸಚಿವರಿದ್ದಾಗ ಪ್ರಸ್ತಾವನೆ ಸಲ್ಲಿಸಿದ್ದರು. ಆಗಿನ ಬಿಜೆಪಿಯ ಸರ್ಕಾರ, ಅದರ ಅಳವಡಿಕೆಗೆ .3,060 ಕೋಟಿ ಕಾಮಗಾರಿಗೆ 5.12.2012 ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಈ ಯೋಜನೆಯನ್ನು ರಾಷ್ಟ್ರೀಯ ಜಲ ಉದ್ದಿಷ್ಟಯೋಜನೆಯಡಿ ನೀರು ಬಳಕೆ ದಕ್ಷತೆ ಕಾರ್ಯಕ್ರಮದಡಿ ಪರಿಗಣಿಸಿ .1,020 ಕೋಟಿ ಅನ್ನು ಕೇಂದ್ರ ಸರ್ಕಾರ ಅನುದಾನ ನೀಡಿದೆ. ಆ ಅನುದಾನದಲ್ಲಿ .1,010 ಕೋಟಿಗಳನ್ನು ಈಗಾಗಲೇ ಕೇಂದ್ರ ನೀಡಿದೆ ಎಂದು ಗೋವಿಂದ ಕಾರಜೋಳ, ಎಂ.ಬಿ. ಪಾಟೀಲ ಮಾಡಿದ ಟೀಕೆಗೆ ತಿರುಗೇಟು ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಇದ್ದರು.