ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಚೆನ್ನೈ ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಕೂಡ್ಲಿಗಿ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್. ಘಟನೆ ನಡೆದ ಒಂದು ವಾರದಲ್ಲಿಯೇ ಆರೋಪಿಗಳನ್ನು ಬಂಧಿಸಿ, ಅವರಿಂದ 29.50 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳುವಲ್ಲಿ ಖಾನಾಹೊಸಳ್ಳಿ ಪೊಲೀಸರು ಯಶಸ್ವಿ

ವಿಜಯನಗರ (ಮಾ.22): ಕಡಿಮೆ ಬೆಲೆಗೆ ಬಂಗಾರ ನೀಡುತ್ತೇವೆ ಎಂದು ನಂಬಿಸಿ ಚೆನ್ನೈ ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಘಟನೆ ನಡೆದ ಒಂದೇ ವಾರದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೂಡ್ಲಿಗಿ ಮೂಲದ ಆರೋಪಿಗಳ ಬಂಧನ

ಬಂಧಿತರನ್ನು ಕೂಡ್ಲಿಗಿ ತಾಲೂಕಿನ ಸುರೇಶ ಮತ್ತು ಸೋಮಣ್ಣ ಎಂದು ಗುರುತಿಸಲಾಗಿದೆ. ಈ ಖದೀಮರು ಎಷ್ಟು ಚಲಾಕಿಗಳೆಂದರೆ ಇಲ್ಲಿನ ಜನರಿಗೆ ವಂಚಿಸಿದರೆ ಸಮಸ್ಯೆ ಎಂದು ಹೊರರಾಜ್ಯದವರಿಗೆ ಟೋಪಿ ಹಾಕುವ ಮಸ್ತ್ ಪ್ಲಾನ್ ಮಾಡಿದ್ದಾರೆ ಅದರಂತೆ ತಮಿಳುನಾಡಿನ ಚೆನ್ನೈ ಮೂಲದ ಗುತ್ತಿಗೆದಾರ ಜಿ.ಕುಮಾರ ಎಂಬುವವರಿಗೆ ಗಾಳ ಹಾಕಿ ವಂಚನೆಯ ಜಾಲಕ್ಕೆ ಕೆಡವಿದ್ದರು. ಬಂಧಿತರಿಂದ ಪೊಲೀಸರು ಬರೋಬ್ಬರಿ 29.50 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬಂಗಾರದ ಆಸೆಗೆ ಚೆನ್ನೈನಿಂದ ಬಂದಿದ್ದ ವ್ಯಕ್ತಿಗೆ ಶಾಕ್

ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ದರಕ್ಕೆ ಚಿನ್ನ ಕೊಡಿಸುವುದಾಗಿ ನಂಬಿಸಿದ್ದ ಆರೋಪಿಗಳು, ಕುಮಾರ ಅವರನ್ನು ಕೂಡ್ಲಿಗಿಯ ಕ್ಯಾಸನಕೆರೆ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ಚಿನ್ನದ ಆಸೆ ಲಕ್ಷ ಲಕ್ಷ ನಗದು ಸಮೇತ ಬಂದಿದ್ದ ಚೆನ್ನೈ ಮೂಲದ ಆಸಾಮಿ. ಪಬ್ಲಿಕ್‌ನಲ್ಲಿ ಕೊಟ್ಟರೆ ತೊಂದರೆಯಾಗುತ್ತೆ ನಿರ್ಜನ ಪ್ರದೇಶದಲ್ಲಿ ಚಿನ್ನ ನೀಡುತ್ತೇವೆ ಎಂದು ನಾಟಕವಾಡಿ, ಅವರಿಂದ 30 ಲಕ್ಷ ರೂಪಾಯಿ ನಗದು ಹಣ ಪಡೆದುಕೊಂಡು ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದರು.

ಖದೀಮರನ್ನ ವಾರದಲ್ಲೇ ಬೇಟೆಯಾಡಿದ ಖಾನಾಹೊಸಳ್ಳಿ ಪೊಲೀಸರು

ವಂಚನೆಗೆ ಒಳಗಾದ ಕುಮಾರ ಅವರು ನೀಡಿದ ದೂರಿನ ಮೇರೆಗೆ ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಕೇವಲ ಒಂದು ವಾರದಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ.