ಇಹಲೋಕ ತ್ಯಜಿಸಿದ ಬಣ್ಣದ ಕುಷ್ಟ| ಕೃಷ್ಣ ಗಾಣಿಗ ನಿಧನ, ವಿವಿಧ ಮೇಳಗಳಲ್ಲಿ 40 ವರ್ಷಗಳ ಕಾಲ ಯಕ್ಷಸೇವೆ| ಸುಹಾಸಿನಿ ಪರಿಣಯದ ರಕ್ತಾಸುರ, ಹಿಡಿಂಬಾ ವಿವಾಹದ ಹಿಡಿಂಬಾಸುರ, ಘಟೋತ್ಕಜ, ಧರ್ಮರಾಜ, ಅರ್ಜುನ ಮತ್ತಿತರ ಪಾತ್ರಗಳನ್ನು ನಿರ್ವಹಿಸಿದ್ದ ಕೃಷ್ಣ ಮಂಜಯ್ಯ ಶೆಟ್ಟಿ| 

ಕಾರವಾರ(ಡಿ.07): ಬಣ್ಣದ ಕುಷ್ಟ ಎಂದೆ ಖ್ಯಾತಿಯ ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಮಂಜಯ್ಯ ಶೆಟ್ಟಿ(85) ಜಲವಳ್ಳಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಹಾರಾಡಿ ರಾಮ ಗಾಣಿಗ ಪ್ರಶಸ್ತಿಗೆ ಪಾತ್ರರಾದ ಇವರು ಸುದೀರ್ಘ ಕಾಲ ಕೆರೆಮನೆ ಸೇರಿದಂತೆ ವಿವಿಧ ಮೇಳಗಳಲ್ಲಿ ಯಶಸ್ವಿಯಾಗಿ ಪಾತ್ರ ನಿರ್ವಹಿಸಿದ್ದರು. ರಾಕ್ಷಸ, ದೈತ್ಯ ಹೀಗೆ ಬಣ್ಣದ ವೇಷಗಳಲ್ಲಿ ವಿಜೃಂಭಿಸುತ್ತಿದ್ದ ಇವರು ದಕ್ಷಿಣೋತ್ತರ ಕನ್ನಡ ಜಿಲ್ಲೆಯ ವಿವಿಧ ಮೇಳಗಳಲ್ಲಿ ತಮ್ಮದೆ ಆದ ಛಾಪು ಒತ್ತುವ ಮೂಲಕ ಬಣ್ಣದ ಕುಷ್ಟಎಂದೆ ಜನಜನಿತರಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಣ್ಣದ ವೇಷವಲ್ಲದೆ, ಕಿರಾತ ಮತ್ತಿತರ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಯಲ್ಲಿ ದೀರ್ಘಕಾಲ ಬಣ್ಣದ ವೇಷ, ಕಿರಾತ ಹಾಗೂ ಪೋಷಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಖ್ಯಾತಿ ಗಳಿಸಿದ್ದರು. ಕೆರೆಮನೆ ಶಂಭು ಹೆಗಡೆ ಅವರೊಟ್ಟಿಗೆ ಪಾತ್ರ ನಿರ್ವಹಿಸಿದ್ದರು.

ಹೊನ್ನಾವರ ತಾಲೂಕಿನ ಜಲವಳ್ಳಿಯ ಮಂಜಯ್ಯ ಹಾಗೂ ಲಕ್ಷ್ಮೀ ದಂಪತಿಯ ಪುತ್ರನಾಗಿ ಜನಿಸಿದ ಇವರು ಬಾಲ್ಯದಲ್ಲಿಯೇ ಯಕ್ಷಗಾನದ ಸೆಳೆತಕ್ಕೆ ಒಳಗಾದರು. ಗುಂಡಬಾಳ ಮೇಳದಲ್ಲಿ 9 ವರ್ಷಗಳ ಕಾಲ ದುಡಿದಿದ್ದಾರೆ. ಮಣ್ಣಿಗೆ ತಿಮ್ಮಣ್ಣ ಯಾಜಿ, ಪಿ.ವಿ. ಹಾಸ್ಯಗಾರ ಅವರ ಮೇಳ, ಇಡಗುಂಜಿ ಮತ್ತಿತರ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

'ನೆಹರೂ ತಪ್ಪಿನಿಂದ ಚೀನಾ ಭಾರತದೊಂದಿಗೆ ಸದಾ ತಂಟೆ'

ಸುಹಾಸಿನಿ ಪರಿಣಯದ ರಕ್ತಾಸುರ, ಹಿಡಿಂಬಾ ವಿವಾಹದ ಹಿಡಿಂಬಾಸುರ, ಘಟೋತ್ಕಜ, ಧರ್ಮರಾಜ, ಅರ್ಜುನ ಮತ್ತಿತರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಂದ್ರಹಾಸ ಚರಿತ್ರೆಯ ಕಟುಕನ ಪಾತ್ರ ಜನಮೆಚ್ಚುಗೆ ಗಳಿಸಿತ್ತು. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಮೇಳಗಳಲ್ಲಿ ಸುಮಾರು 40 ವರ್ಷಗಳ ಕಾಲ ದುಡಿದಿದ್ದಾರೆ.

ನಮ್ಮ ಮೇಳದಲ್ಲಿ 14 ವರ್ಷಗಳ ಕಾಲ ದುಡಿದ ಕೃಷ್ಣ ಗಾಣಿಗ ಉತ್ತಮ ಕಲಾವಿದರಾಗಿದ್ದರು. ಬಣ್ಣದ ವೇಷದಲ್ಲಿ ಪ್ರಸಿದ್ಧರಾಗಿದ್ದರು. ಅವರು ನಿಧನರಾಗಿದ್ದು ನೋವಿನ ಸಂಗತಿ ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದರುಕೆರೆಮನೆ ಶಿವಾನಂದ ಹೆಗಡೆ ಹೇಳಿದ್ದಾರೆ.