Asianet Suvarna News Asianet Suvarna News

Chamarajanagar: ವಾವ್! ನೋಡುಗರನ್ನು ವಿಸ್ಮಯಗೊಳಿಸ್ತಿದೆ ಬಿಳಿಗಿರಿರಂಗನ ಬೆಟ್ಟ!

ಅದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವೆ. ಬಿಳಿ ಬಣ್ಣದಂತೆ ಕಾಣುವ ಆ ಬೆಟ್ಟವನ್ನ ಶ್ವೇತಾದ್ರಿ ಪರ್ವತವೆಂದು ಕರೆಯುತ್ತಾರೆ. ಅಚ್ಚ ಹಸಿರಾದ ಬೆಟ್ಟ ನೋಡಲೂ ಕಣ್ಣೆರಡು ಸಾಲದು. 

very beautiful view set on top of biligiri hills chamarajanagar gvd
Author
Bangalore, First Published May 21, 2022, 12:10 AM IST

ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಮೇ.21): ಅದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವೆ. ಬಿಳಿ ಬಣ್ಣದಂತೆ ಕಾಣುವ ಆ ಬೆಟ್ಟವನ್ನ ಶ್ವೇತಾದ್ರಿ ಪರ್ವತವೆಂದು ಕರೆಯುತ್ತಾರೆ. ಅಚ್ಚ ಹಸಿರಾದ ಬೆಟ್ಟ ನೋಡಲೂ ಕಣ್ಣೆರಡು ಸಾಲದು. ಅಂದ ಚೆಂದದ ಬೆಟ್ಟದ ಸಾಲುಗಳ ಮಧ್ಯೆ ತಣ್ಣಗೆ ಬೀಸುವ ತಂಗಾಳಿ ಮುದ ನೀಡುತ್ತೆ. ಎತ್ತರ ಪ್ರದೇಶದಲ್ಲಿರುವ ಆ ಬೆಟ್ಟದ ಸೊಬಗನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ (Tourists) ದಂಡೆ ಹರಿದು ಬರುತ್ತದೆ. ಅಲ್ಲದೇ ಬೆಟ್ಟದ ಮೇಲ್ಭಾಗದಲ್ಲಿ ಮಂಜು ಕವಿದಿದ್ದು, ಹಾಲಿನ ನೊರೆಯಂತೆ ಕಂಗೊಳಿಸ್ತಿದೆ .ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಎತ್ತಾ ಕಣ್ಣಾಯಿಸಿದರೂ ಅಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲುಗಳು.ತಣ್ಣಗೆ ಮೈ ಸೋಕುವ ತಂಗಾಳಿ. ಅವುಗಳನ್ನ ಕಣ್ತುಂಬಿಕೊಳ್ಳಲು ಬರುತ್ತಿರುವ ಪ್ರವಾಸಿಗರು. ಹೌದು! ಇಂತಹದೊಂದು ಅಪರೂಪವಾದ, ಪ್ರಕೃತಿ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಇರೋದು ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ. ಪ್ರಕೃತಿ ಸೊಬಗನ್ನ ಹೊದ್ದು ಮಲಗಿದಂತೆ ಕಾಣುವ ಈ ಬೆಟ್ಟ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ (Biligiriranga Gills). ಕರ್ನಾಟಕದ ತಿರುಪತಿ, ಶ್ವೇತಾದ್ರಿ ಪರ್ವತ ಎಂದೆಲ್ಲಾ ಭಕ್ತರಿಂದ ಕರೆಯಲ್ಪಡುವ ಬಿಳಿಗಿರಿ ರಂಗನಾಥ ಸ್ವಾಮಿ ಸೋಲಿಗರ ಆರಾಧ್ಯ ದೈವ. ವರ್ಷದ ಬಹುತೇಕ ದಿನಗಳು ಮದುವಣಗಿತ್ತಿಯಂತೆ ಹಸಿರು ಸೀರೆಯುಟ್ಟು ಶೃಂಗಾರಗೊಂಡ ನಾರಿಯಂತೆ ಕಾಣುವ ಈ ಅಚ್ಚ ಹಸಿರಾದ ಬೆಟ್ಟದ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ.  

ಸತ್ತು ಮತ್ತೆ ಜೀವ ಬಂದಿದ್ದ ವ್ಯಕ್ತಿಗೆ ತಿಥಿ ಮಾಡಿದ ಗ್ರಾಮಸ್ಥರು: ಚಾಮರಾಜನಗರ ಜಿಲ್ಲೆಯಲ್ಲೊಂದು ವಿಚಿತ್ರ ಆಚರಣೆ!

ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ. ದೂರಕ್ಕೆ ಹಾಲಿನ ನೊರೆಯಂತೆ ಕಾಣುವ ಈ ಬೆಟ್ಟವನ್ನು ಶ್ವೇತಾದ್ರಿ ಬೆಟ್ಟ ಎಂದು ಕರೆಯುತ್ತಾರೆ. ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿರುವ ಬಿಳಿಗಿರಿ ರಂಗನಾಥ ಬೆಟ್ಟ ನಗರ ವಾಸಿಗಳ ಸ್ವರ್ಗ. ಇದು ಯಾವಾಗಲೂ ಅಚ್ಚ ಹಸಿರಿನಿಂದ ಕಂಗೊಳಿಸುವ ಇಲ್ಲಿನ ವಾತಾವರಣ, ತಣ್ಣಗೆ ಬೀಸುವ ತಂಗಾಳಿ ಪ್ರತಿಯೊಬ್ಬರ ಮೈಸೋಕಿ ಉಲ್ಲಾಸಗೊಳಿಸುತ್ತದೆ. ಇಲ್ಲಿನ ವಾತಾರಣವನ್ನ ಎಸಿಯ ಮನೆ ಎಂದು ಪ್ರವಾಸಿಗರೇ ಕರೆಯುತ್ತಾರೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟವರಂತೂ ಪದೇ ಪದೇ ಇಲ್ಲಿಗೆ ಬಂದು ಪ್ರಕೃತಿಯ ಸೊಬಗನ್ನು  ಸವಿಯುತ್ತಾರೆ. ಆಗಾಗ ಸುರಿಯುವ ತುಂತುರು ಮಳೆ ಪ್ರವಾಸಿಗರ ಮನಸಿಗೆ ಮುದ ನೀಡುತ್ತಿದೆ.

ಬಿಳಿಗಿರಿ ರಂಗನಾಥ ಬೆಟ್ಟಕ್ಕೆ ಎರಡು ಕಡೆಯಿಂದ ಪ್ರವೇಶ ಪಡೆಯಬಹುದು. ಒಂದು ಯಳಂದೂರು ಮಾರ್ಗದಿಂದ ಮತ್ತೊಂದು ಚಾಮರಾಜನಗರ ಭಾಗದಿಂದ ಹೋಗಲು ಹೊಂಡರಬಾಳು ಬಳಿ ಪ್ರವೇಶ ದ್ವಾರಗಳಿವೆ. ಈ ಎರಡು ಪ್ರವೇಶದ್ವಾರಗಳು ಪ್ರವಾಸಿಗರನ್ನ ಆಕರ್ಷಿಸದೇ ಬಿಡಲಾರವು. ಬರುವ ಪ್ರವಾಸಿಗರನ್ನ ಆನೆ, ಹುಲಿ, ಚಿರತೆ, ಕಾಡಮ್ಮೆಯಂತಹ ವನ್ಯಜೀವಿಗಳೇ ಸ್ವಾಗತ ಕೋರುತ್ತವೆ. ಹೌದು ನೋಡುವುದಕ್ಕೆ ವನ್ಯಜೀವಿಗಳೇ ಎದ್ದು ಬಂದಂತೆ ಕಾಣುವಂತೆ ಚಿತ್ರಿಸಲಾಗಿದೆ. ನಗರ ಪ್ರದೇಶಗಳಿಂದ ಬರುವ ಜನರು ಇವುಗಳನ್ನ ನೋಡಿ ಆಶ್ಚರ್ಯಗೊಳದ್ದೆ ಇರಲಾರರು. ನಂತರ ನಿಧಾನವಾಗಿ ಇಳಿದು ಚಿತ್ರಿಸಿದ ವನ್ಯಪ್ರಾಣಿಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳದೇ ಹೋಗುವುದಿಲ್ಲ. ಎರಡು ಕಡೆಯಿಂದ ಬರುವ ಪ್ರವಾಸಿಗರಿಗೆ ವನ್ಯಜೀವಿಗಳ ದರ್ಶನ ಮಾತ್ರ ಉಚಿತ. 

Chamarajanagar: ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್‌ಗಳ ಕೊರತೆ, ಶಸ್ತ್ರಕ್ರಿಯೆ ಸ್ಥಗಿತ!

ಕಾಡೆಮ್ಮೆ, ಆನೆ, ಜಿಂಕೆ, ಕಡವೆ ಸೇರಿದಂತೆ ಹಲವು ಪ್ರಾಣಿಗಳ ದರ್ಶನ ಪ್ರವಾಸಿಗರ ಮನಸಿಗೆ ಮುದ ನೀಡುತ್ತದೆ. ಅದರಲ್ಲೂ ಈ ಬಾರಿ ರಾಜ್ಯದಲ್ಲೆಡೆ ಮಳೆಯೂ ಕೂಡ ಹೆಚ್ಚಾಗಿದೆ. ಉತ್ತಮ ಮಳೆಯಾದ ಹಿನ್ನೆಲೆ ಬೆಟ್ಟದ ಸೊಬಗು ಕೂಡ ಹೆಚ್ಚಾಗಿದೆ. ಬೆಟ್ಟದಲ್ಲಿ ಕಾಣ್ತಿರುವ ದಟ್ಟ ಮಂಜು ನೋಡುಗರನ್ನು ಮೂಕ ವಿಸ್ಮಿತಗೊಳಿಸುತ್ತೆ. ಜಾಲಿ ಟ್ರಿಪ್ ಬಂದು ಹೋಗಲೂ ಬಿಳಿಗಿರಿರಂಗನ ಬೆಟ್ಟ ಸಖತ್ತಾಗಿದೆ ಅಂತಾರೆ ಪ್ರವಾಸಿಗರು. ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದಿಂದಲೇ ಖ್ಯಾತಿಗಳಿಸಿದ್ದ ಬಿಆರ್‌ಟಿ ಈಗ ಹುಲಿ ಸಂರಕ್ಷಿತ ಪ್ರದೇಶವಾಗಿ ಖ್ಯಾತಿಗಳಿಸಿದೆ. ಹಾಲ್ನೊರೆಯನ್ನು ಹೊದ್ದು ಮಲಗಿದಂತೆ ಕಾಣೋ ದೃಶ್ಯ ಪ್ರವಾಸಿಗರನ್ನು ಮತ್ತೇ ಮತ್ತೇ ಕೈ ಬಿಸಿ ಕರೆಯುತ್ತೆ.

Follow Us:
Download App:
  • android
  • ios