ಮತ್ತೆ ಕರ್ನಾಟಕ ಬಂದ್ಗೆ ವಾಟಾಳ್ ನಾಗರಾಜ್ ಕರೆ ?
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಒಂದು ವೇಳೆ ಔರಾದ್ಕರ್ ಸಮಿತಿ ವರದಿ ಜಾರಿಯಾಗದಿದ್ದಲ್ಲಿ ಕರ್ನಾಟಕ ಬಂದ್ ಮಾಡುವುದಾಗಿ ಹೇಳಿದ್ದಾರೆ.
ಬೆಂಗಳೂರು (ಜೂ,14): ರಾಜ್ಯ ಪೊಲೀಸರ ವೇತನ ಪರಿಷ್ಕರಣೆ ಸೇರಿ ದಂತೆ ಪೊಲೀಸ್ ಇಲಾಖೆಯ ಸುಧಾರಣೆಗೆ ಸಂಬಂಧಿಸಿದ ರಾಘವೇಂದ್ರ ಔರಾದ್ಕರ್ ವರದಿಯನ್ನು ಒಂದು ತಿಂಗಳೊಳಗೆ ಅನುಷ್ಠಾನಗೊಳಿಸದಿದ್ದರೆ ಜು.13 ರಂದು ‘ಕರ್ನಾಟಕ ಬಂದ್’ ನಡೆಸುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಔರಾದ್ಕರ್ ವರದಿ ಅನುಷ್ಠಾನ ಸೇರಿದಂತೆ ಪೊಲೀಸರಿಗೆ ವಿವಿಧ ಸೌಲಭ್ಯಗಳಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಗುರುವಾರ ಪೊಲೀಸ್ ಸಮವಸ್ತ್ರ ಧರಿಸಿ ವಿಧಾನಸೌ ಧದ ಬಳಿ ವಿನೂತನವಾಗಿ ಪ್ರತಿಭಟಿಸಿದರು. ವಿಧಾನಸೌಧದ ಸುತ್ತಮುತ್ತ ಪ್ರತಿಭಟನೆ ನಿಷೇಧಿಸಿರುವುದರಿಂದ ಪೊಲೀಸರು ವಾಟಾಳ್ ಪ್ರತಿಭಟನೆಗೆ ಅವಕಾಶ ಈ ವೇಳೆ ಪ್ರತಿ ರೋಧ ತೋರಿದ ವಾಟಾಳ್ ಅವರನ್ನು ವಶಕ್ಕೆ ಪಡೆದು ಕರೆ ದೊಯ್ದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ರಾಘವೇಂದ್ರ ಔರಾದ್ಕರ್ ಸಮಿತಿಯ ವರದಿ ಅನುಷ್ಠಾನಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಪೊಲೀಸ್ ಇಲಾಖೆಯ ‘ಡಿ ಗ್ರೂಪ್’ ನೌಕರರು ಬಡ್ತಿ ಸಿಗದೆ ವಂಚಿತರಾಗುತ್ತಿದ್ದಾರೆ ಎಂದರು.