ಹಳೆ ಬಸ್‌ ನಿಲ್ದಾಣ ಶೀಘ್ರ ಪ್ರಾರಂಭಿಸಿ, ಪುಟ್ಟರಾಜರ ಹೆಸರಿಡಿ| ಗದಗ ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ| ಈ ಭಾಗದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜನಸಂಪರ್ಕ ಇಲ್ಲದೆ ವ್ಯಾಪಾರ ವಹಿವಾಟು ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ|

ಗದಗ(ಜ.24): ಮೂರು ವರ್ಷಗಳ ಹಿಂದೆಯೇ ಪ್ರಾರಂಭಗೊಂಡಿರುವ ಗದಗ ನಗರದ ಹಳೇ ಬಸ್‌ ನಿಲ್ದಾಣ ನವೀಕರಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಗುರುವಾರ ನಗರದ ಹಳೆ ಬಸ್‌ ನಿಲ್ದಾಣದ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ಕ್ರಾಂತಿ ಸೇನಾ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಕಾಮಗಾರಿ ವಿಳಂಬದಿಂದಾಗಿ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬರುವ ಜನರಿಗೆ, ವ್ಯಾಪಾರಸ್ಥರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗಿದೆ. ಜಿಲ್ಲಾ ಆಸ್ಪತ್ರೆಗೆ ತೆರಳುವ ಜನರಿಗೆ ಹೊಸ ಬಸ್‌ ನಿಲ್ದಾಣದಿಂದ ಹೋಗಲು ತೊಂದರೆಯಾಗುತ್ತಿದೆ. ಈ ಭಾಗದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜನಸಂಪರ್ಕ ಇಲ್ಲದೆ ವ್ಯಾಪಾರ ವಹಿವಾಟು ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಶೀಘ್ರವಾಗಿ ಉದ್ಘಾಟಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಹಳೆ ಬಸ್‌ ನಿಲ್ದಾಣಕ್ಕೆ ಸಂಗೀತ ಲೋಕದ ಧ್ರುವತಾರೆ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಿಡಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಭಾಷಾಸಾಬ ಮಲ್ಲಸಮುದ್ರ ಮಾತನಾಡಿದರು. ಮುಖಂಡರಾದ ಮಹಾಂತೇಶ ಮದ್ನೂರ, ಸಯ್ಯದ ಕೊಪ್ಪಳ, ಶೌಕತ ಕಾತರಕಿ, ದಾದಾಪೀರ ಮುಂಡರಗಿ, ಕುಮಾರ ತಡಸದ, ಉಸ್ಮಾನ ಚಿತ್ತಾಪೂರ, ಅಬ್ದುಲ್‌ ಮುನಾಫ ಮುಲ್ಲಾ, ಲುಕ್ಕಣಸಾ ರಾಜೋಳಿ, ಸಂಗನಗೌಡ ಪಾಟೀಲ, ಸಿದ್ದಯ್ಯ ಚನ್ನಳ್ಳಿಮಠ, ಬಸವರಾಜ ಗಾಮನಕಟ್ಟಿ, ಕಿರಣ ಗಾಮನಗಟ್ಟಿ, ಶರಣಪ್ಪ ಚಿಂಚಲಿ, ಕಾಶೀಮಸಾಬ ಸಾಲಗಾರ, ಶರಣಪ್ಪ ಮಡಿವಾಳರ, ರಾಮು ಕಬಾಡಿ, ಭೀಮಾ ಕಾಟಿಗರ, ಭರತ ಮಾರೆಪ್ಪನವರ, ಪ್ರವೀಣ ಹಬೀಬ, ಬಸವರಾಜ ಬಾರಕೇರ, ಕಂಠಯ್ಯ, ಶಿವಲಿಂಗಜ್ಜ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರ ಸಂಘ, ಸಂಗಮೇಶ ಅಂಗಡಿ ಬಳಗ, ಕ.ರಾ.ಯುವಜನ ಸೇನೆ, ರಕ್ಷಣಾ ವೇದಿಕೆ, ಭಗತಸಿಂಗ ಅಭಿಮಾನಿ ಬಳಗ, ಎ.ಡಿ.ಎಸ್‌.ಎಸ್‌ ಅಲ್ಪಸಂಖ್ಯಾತರ ಘಟಕ ಸೇರಿದಂತೆ ವಿವಿಧ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.