ಶಾಸಕ ದಿನಕರ ಶೆಟ್ಟಿ ಅವರು ಕುಮಟಾದ ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಬಹುನಿರೀಕ್ಷಿತ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದ್ದು, ಈ ಭಾಗದ ರಸ್ತೆ, ಸೇತುವೆ, ನೀರಿನ ಯೋಜನೆಗಳಂತಹ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಶಾಸಕರು ಮಾಹಿತಿ ನೀಡಿದರು.

ಉತ್ತರ ಕನ್ನಡ: ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಅಗತ್ಯವಾದ ಹಲವಾರು ಕಾರ್ಯಗಳನ್ನು ಈವರೆಗೆ ಮಾಡಿದ್ದೇನೆ. ಈ ಗ್ರಾಮಕ್ಕೆ ಬಸ್ ಸೌಕರ್ಯ ಇರಲಿಲ್ಲ. ಈಗ ಸಾರಿಗೆ ಬಸ್ ಸೌಕರ್ಯಕ್ಕೂ ಚಾಲನೆ ನೀಡಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಧಿಕೃತವಾಗಿ ಪ್ರತಿನಿತ್ಯ ಬಸ್ ಸಂಚಾರ

ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಸಾರಿಗೆ ಬಸ್ ಸಂಚಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.ಊರಿಗೆ ಬಸ್ ಬೇಕು ಎಂದು ಇಲ್ಲಿನ ಗಜಾನನ ಪೈ, ದೇವು ಗೌಡ ಇನ್ನಿತರ ಸ್ಥಳೀಯರ ಆಸಕ್ತಿ ಹಾಗೂ ಸಹಕಾರ ಮಹತ್ವದ್ದು. ಗ್ರಾಮಸ್ಥರ ಬಸ್ ಬೇಡಿಕೆಯನ್ನು ಸಾರಿಗೆ ಇಲಾಖೆ ಮುಂದಿಟ್ಟಿದ್ದೆ. ಸಾರಿಗೆ ವ್ಯವಸ್ಥಾಪಕ ವಿನಾಯಕ ಭಂಡಾರಿ ಕೂಡಲೇ ಸ್ಪಂದಿಸಿ, ಸಾರಿಗೆ ಡಿಸಿಗೆ ತಿಳಿಸಿ ಮಂಜೂರಿ ಪಡೆದು ವಾರದ ಹಿಂದೆ ಮಾಸ್ತಿಹಳ್ಳ ಬಸ್‌ ಅನ್ನು ಇಲ್ಲಿವರೆಗೆ ಬಿಟ್ಟು ಪರೀಕ್ಷಿಸಿದ್ದರು. ಈಗ ಅಧಿಕೃತವಾಗಿ ಪ್ರತಿನಿತ್ಯ ಬಸ್ ಸಂಚಾರ ಶುರುವಾಗಿದೆ. ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು. ಅಶೋಕೆಗೂ ಇದೇ ರೀತಿ ಬಸ್ ವ್ಯವಸ್ಥೆ ಮಾಡಿದ್ದೇನೆ. ವಿಶೇಷವಾಗಿ ಇಂದು ಊರಿಗೆ ಬಸ್ ಬಂದಿದೆ ಎಂದು ಎಲ್ಲರೂ ಪಕ್ಷಭೇದ ಮರೆತು ಖುಷಿಯಿಂದ ಬಂದಿದ್ದಾರೆ. ಇದು ಒಳ್ಳೆಯ ಗುಣ. ಯಾವುದೇ ಸಮಸ್ಯೆ ಇದ್ದರೆ ತಿಳಿಸಿ ಎಂದರು.

ಈ ಭಾಗಕ್ಕೆ ರಸ್ತೆ, ಸೇತುವೆ ಮುಂತಾದ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಇಲ್ಲಿನ ಹಾಲಕ್ಕಿ ಸಮಾಜದವರು ವಿಶೇಷ ಕಾಳಜಿಯಿಂದ ನಮ್ಮ ಮನೆಗೆ ಬಂದು ಇಲ್ಲಿನ ಶಾಲೆಗೆ ಶಿಕ್ಷಕರು ಬೇಕೆಂದು ಬೇಡಿಕೆ ಇಟ್ಟಿದ್ದರು. ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂಬುದು ಅವರ ಕಳಕಳಿ. ಇಲ್ಲಿನ ಶಾಲೆಗೆ ಅತಿಥಿ ಶಿಕ್ಷಕರ ನಿಯೋಜನೆಯಾಗಿದೆ.

ಬ್ಯಾರೇಜ್ ಕಂ ಸೇತುವೆ ನಿರ್ಮಾಣ

ಉಳಿದಂತೆ ಜೆಜೆಎಂ ಯೋಜನೆ ಅಡಿಯಲ್ಲಿ ಟ್ಯಾಂಕ್, ಬೋರ್ ಮುಂತಾದವುಗಳನ್ನು ಕಾಲಕಾಲಕ್ಕೆ ನೀಡಲಾಗಿದೆ. ನೀರಿನ ಸಮಸ್ಯೆ ಶಾಶ್ವತ ನಿವಾರಣೆಗೆ ಸಾಂತೂರಿನಲ್ಲಿ ₹5.5 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ಕಂ ಸೇತುವೆ ನಿರ್ಮಾಣಕ್ಕೆ ಮಂಜೂರಿ ತಂದಿದ್ದೇನೆ. ಟೆಂಡರ್ ಬಳಿಕ ಕಾಮಗಾರಿ ನಡೆದು ಈ ಭಾಗದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಗಜಾನನ ಪೈ, ಪಂಚಾಯಿತಿ ಮಾಜಿ ಅಧ್ಯಕ್ಷ ದೇವು ಗೌಡ, ಮಾಜಿ ಸದಸ್ಯರಾದ ರಾಜೀವ ಭಟ್ಟ, ಮಹೇಶ ದೇಶಭಂಡಾರಿ, ಶ್ರೀಧರ ಪೈ, ಸ್ಥಳೀಯರಾದ ಅಶೋಕ ಭಟ್, ಉದಯ ಜೈನ ಇತರರು ಇದ್ದರು.