ರೈತರು ಕೃಷಿಯೊಂದಿಗೆ ಹೈನುಗಾರಿಕೆ ಹಾಗೂ ಇತರೆ ಕೃಷಿ ಪೂರಕ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉನ್ನತಿ ಹೊಂದಬೇಕೆಂದು ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

 ಚಿಕ್ಕನಾಯಕನಹಳ್ಳಿ : ರೈತರು ಕೃಷಿಯೊಂದಿಗೆ ಹೈನುಗಾರಿಕೆ ಹಾಗೂ ಇತರೆ ಕೃಷಿ ಪೂರಕ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉನ್ನತಿ ಹೊಂದಬೇಕೆಂದು ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸಚಿವ ಕೆ.ಎನ್‌.ರಾಜಣ್ಣರಿಗೆ ಚಿ.ನಾ.ಹಳ್ಳಿ ತಾಲೂಕು ಸಹಕಾರ ಸಂಘಗಳ ಒಕ್ಕೂಟದಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವರ್ಷ ಪ್ರತಿಯೊಂದು ಗ್ರಾಮಪಂಚಾಯ್ತಿಗೆ ಒಂದರಂತೆ ವಿಎಸ್‌ಎಸ್‌ಎನ್‌ಗಳನ್ನು ಸ್ಥಾಪಿಸಿ ಕೃಷಿಕರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸಲು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.

ಶಾಸಕ ಸಿ.ಬಿ.ಸುರೇಶ್‌ ಬಾಬು ಮಾತನಾಡಿ, ತಾಲೂಕಿನ ನೀರಾವರಿಗಾಗಿ ನಾನು, ಸಂಸದ ಜಿ.ಎಸ್‌.ಬಸವರಾಜು, ಹಲವು ಮಠಾಧೀಶರು ಹೋರಾಟ ಮಾಡಿದ ಫಲವಾಗಿ ತಾಲೂಕಿಗೆ ಹೇಮಾವತಿ ನೀರು ಹರಿಯುತ್ತಿದೆ. ಈ ಹಿಂದಿನ ಸರ್ಕಾರ ಯೋಜನೆಗಳಿಂದಾಗಿ ಹೇಮಾವತಿ, ಎತ್ತಿನ ಹೊಳೆ, ಭದ್ರಾಮೇಲ್ದಂಡೆ ನೀರು ತಾಲೂಕಿಗೆ ಹರಿಯಲಿದ್ದು, ಸದರಿ ಕಾಮಗಾರಿಗಳಿಗೆ ಸರ್ಕಾರದಿಂದ ಸೂಕ್ತ ಅನುದಾನಕ್ಕಾಗಿ ಆಗ್ರಹಿಸಲಾಗುವುದೆಂದು ತಿಳಿಸಿದರು. ಶೆಟ್ಟಿಕೆರೆ ಹೋಬಳಿಗೆ ಡಿಸಿಸಿ ಬ್ಯಾಂಕ್‌ ಶಾಖೆಯನ್ನು ತೆರೆಯುವಂತೆ ರಾಜಣ್ಣರವರಲ್ಲಿ ಶಾಸಕರು ಕೋರಿದರು. ಪ್ರತಿ ಸೋಮವಾರ ಪಟ್ಟಣದಲ್ಲಿ ಸಾರ್ವಜನಿಕರು, ಅಧಿಕಾರಿಗಳ ಸಾಪ್ತಾಹಿಕ ಸಭೆ ಆಯೋಜಿಸಿ, ಸ್ಥಳದಲ್ಲಿಯೇ ಸಾರ್ವಜನಿಕರ ಕುಂದುಕೊರತೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಸಿಂಗದಹಳ್ಳಿ ರಾಜ್‌ಕುಮಾರ್‌, ಮಾಜಿ ಶಾಸಕ ಬಿ.ಲಕ್ಕಪ್ಪ, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾದ ಶಶಿಧರ ಹಾಗೂ ಪಿಎಸ್‌ಸಿಎಸ್‌ನ ನಿರ್ದೇಶಕರು ಹಾಜರಿದ್ದರು.

ಪೋಟೋ: ಕನ್ನಡ ಸಂಘದ ವೇದಿಕೆಯಲ್ಲಿ ಸಚಿವ ಕೆ.ಎನ್‌.ರಾಜಣ್ಣರಿಗೆ ಚಿ.ನಾ.ಹಳ್ಳಿ ತಾಲೂಕು ಸಹಕಾರ ಸಂಘಗಳ ಒಕ್ಕೂಟದಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.