ಕೇಂದ್ರ ವರದಿ ನಂತರ ರಾಜ್ಯಕ್ಕೆ ನೆರೆ ಪರಿಹಾರ : ನಿರ್ಮಲಾ
ಉನ್ನತ ಮಟ್ಟದ ಸಮಿತಿ ಚರ್ಚೆ ನಡೆಸಿ ರಾಜ್ಯಕ್ಕೆ ಅಗತ್ಯವಿರುವ ನೆರೆ ಪರಿಹಾರಕ್ಕೆ ಅನುದಾನ ನೀಡಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಮೈಸೂರು[ಆ.23]: ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಕೇಂದ್ರ ಅಧಿಕಾರಿಗಳ ತಂಡ ವರದಿ ನೀಡಿದ ಬಳಿಕ, ಉನ್ನತ ಮಟ್ಟದ ಸಮಿತಿ ಚರ್ಚೆ ನಡೆಸಿ ರಾಜ್ಯಕ್ಕೆ ಅಗತ್ಯವಿರುವ ನೆರೆ ಪರಿಹಾರಕ್ಕೆ ಅನುದಾನ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಹಲವು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ನಾನು ಕೂಡಾ ಕರ್ನಾಟಕದ ಬಾಗಲಕೋಟೆ ಮತ್ತು ಬೆಳಗಾವಿ ಭಾಗಕ್ಕೆ ಭೇಟಿ ನೀಡಿದ್ದೆ. ನಾನು ನಷ್ಟದ ಅಂದಾಜು ಮಾಡುವುದು ಬೇರೆ. ಆದರೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿ ವರದಿ ನೀಡುವುದು ಮುಖ್ಯ ಎಂದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಧಿಕಾರಿಗಳು ಎಲ್ಲ ಜಿಲ್ಲೆಗೂ ತೆರಳಿ ಯಾವ ಯಾವ ಭಾಗದಲ್ಲಿ ಎಷ್ಟುನಷ್ಟವಾಗಿದೆ ಎಂದು ಅಂದಾಜಿಸಿ, ಕೇಂದ್ರಕ್ಕೆ ವರದಿ ಸಲ್ಲಿಸುತ್ತಾರೆ. ನಂತರ ಉನ್ನತ ಮಟ್ಟದ ಸಮಿತಿಯಲ್ಲಿ ಈ ಕುರಿತು ಚರ್ಚಿಸಿ ರಾಜ್ಯಕ್ಕೆ ಅಗತ್ಯವಿರುವ ಪರಿಹಾರ ಬಿಡುಗಡೆ ಮಾಡಲಾಗುವುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಹಿಡಿಯುವುದರಿಂದ ಅಲ್ಲಿಯವರೆಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನೆರೆ ಸಂತ್ರಸ್ತರಿಗೆ ನೆರವು ನೀಡಲಾಗುತ್ತದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯವನ್ನು ಕೇಂದ್ರ ಸರ್ಕಾರ ಮಾಡುತ್ತದೆ ಎಂದು ಹೇಳಿದರು.