Asianet Suvarna News Asianet Suvarna News

ಲಾಕ್‌ಡೌನ್‌ನಲ್ಲಿ ಸ್ಮಶಾನದಲ್ಲಿ ಕಟ್ಟಿಗೆ ಒಡೆಯುತ್ತಿದ್ದಾರೆ ಸೂರಿ ಶೆಟ್ಟಿ

ಪೊಲೀಸ್‌ ಇಲಾಖೆಯಿಂದಲೇ ಆಪದ್ಭಾಂದವ ಎಂದು ಕರೆಸಿಕೊಂಡಿರುವ ಕಾಪು ಸೂರಿ ಶೆಟ್ಟಿ ಈಗ ಏನ್ಮಾಡ್ತಿದ್ದಾರೆ ಗೊತ್ತಾ..? ಲಾಕ್‌ಡೌನ್‌ ಸಂದರ್ಭದಲ್ಲಿ ಸೂರಿ ಸ್ಮಶಾನದಲ್ಲಿದ್ದಾರೆ. ಏನ್ಮಾಡ್ತಿದ್ದಾರೆ ನೀವೇ ಓದಿ.

 

Udupi man in cemetery breaking woods
Author
Bangalore, First Published Apr 28, 2020, 7:24 AM IST

ಉಡುಪಿ(ಏ.28): ಲಾಕ್‌ಡೌನ್‌ನಿಂದಾಗಿ ಕಳೆದೊಂದು ತಿಂಗಳಿನಿಂದ ಅಪಘಾತ, ಆತ್ಮಹತ್ಯೆ, ಆಕಸ್ಮಿಕ ಸಾವು, ಅನಾಥರ ಸಾವಿನ ಸಂಖ್ಯೆ ತೀವ್ರ ಕಡಿಮೆಯಾಗಿವೆ. ಮೂಲ್ಕಿಯಿಂದ ಉಡುಪಿವರೆಗೆ 30 ಕಿ.ಮೀ. ವ್ಯಾಪ್ತಿಯಲ್ಲಿ ಇಂತಹ ಯಾವುದೇ ಘಟನೆಗಳು ನಡೆದರೂ ಅಲ್ಲಿಗೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ, ಶವಗಳನ್ನು ಶವಾಗಾರಕ್ಕೆ ಕಳುಹಿಸಿ ಪೊಲೀಸ್‌ ಇಲಾಖೆಯಿಂದಲೇ ಆಪದ್ಭಾಂದವ ಎಂದು ಕರೆಸಿಕೊಂಡಿರುವ ಕಾಪು ಸೂರಿ ಶೆಟ್ಟಿಈಗ ನಿರುದ್ಯೋಗಿಯಾಗಿದ್ದಾರೆ.

ಹಾಂಗತ ಸುಮ್ಮನೇ ಕುಳಿತುಕೊಳ್ಳದ ಸೂರಿ ಶೆಟ್ಟಿಏನು ಮಾಡುತಿದ್ದಾರೆ ಎಂದು ಹುಡುಕಿದಾಗ ಅವರು ಬೆಳಪು ಗ್ರಾಮದ ಸ್ಮಶಾನದಲ್ಲಿ ಒಬ್ಬರೇ ಒಂದಷ್ಟುರಾಶಿ ಕಟ್ಟಿಗೆ ಒಡೆಯುತ್ತಿದ್ದಾರೆ.

ಸಂಜೆ ಹೊತ್ತಲ್ಲಿ ಕೊರೋನಾ ರಣಕೇಕೆ: ಬೆಚ್ಚಿಬಿದ್ದ ಕಲಬುರಗಿ ಜನತೆ..!

ಕಿತ್ತುತಿನ್ನುವ ಬಡತನದಿಂದಾಗಿ 3ನೇ ತರಗತಿಯಲ್ಲಿ ವಿದ್ಯೆಗೆ ವಿದಾಯ ಹೇಳಿದ ಸೂರಿ ಅನೇಕ ವರ್ಷಗಳ ಕಾಲ ವಾಹನ ಚಾಲಕರಾಗಿ ದುಡಿದರು. ಈ ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯ ಗುಣ ಬೆಳೆಸಿಕೊಂಡರು. ಕೆರೆ, ಬಾವಿ, ಸಮುದ್ರಗಳಲ್ಲಿ ಸಿಗುವ ಅನಾಥ ಮೃತದೇಹಗಳ ಅಂತ್ಯಸಂಸ್ಕಾರವನ್ನೂ ನಡೆಸಲಾರಂಭಿಸಿದರು. ಕಳೆದ 28 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟುಅಪಘಾತಗಳಲ್ಲಿ ಗಾಯಾಳುಗಳನ್ನು ರಕ್ಷಿಸಿದ ಸೂರಿ, ಸಾವಿರಕ್ಕೂ ಅಧಿಕ ಕೊಳೆತು ನಾರುವ, ಚಿಂದಿಛಿದ್ರವಾಗಿರುವ ಹೆಣಗಳಿಗೆ ಮೋಕ್ಷ ನೀಡಿದ್ದಾರೆ.

ಈಗೀಗ ಊರಲ್ಲಿ ಯಾರೇ ಸತ್ತರೂ, ಅಲ್ಲಿ ಮಾಡಬೇಕಾದ ಮರ ಕಡಿಯುವ, ಚಟ್ಟಕಟ್ಟುವ ಇತ್ಯಾದಿ ಅಂತಿಮ ಸಂಸ್ಕಾರಗಳಿಗೆ ಸೂರಿಯೇ ಬೇಕು. ಜೊತೆಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಪು ಮತ್ತು ಬೆಳಪು ಗ್ರಾಮಗಳ ಸಾರ್ವಜನಿಕ ರುದ್ರಭೂಮಿಯಲ್ಲಿ ಹೆಣಗಳನ್ನು ಸುಡುವ ಕೆಲಸ ಮಾಡುತಿದ್ದಾರೆ. ಶ್ರೀಮಂತರಾದರೆ ಒಂದೆರಡು ಸಾವಿರ ರು. ಪಡೆಯುತ್ತಾರೆ, ಬಡವರದ್ದಾದರೆ ಉಚಿತವಾಗಿ ಮೃತದೇಹ ಸುಡುತ್ತಾರೆ.

ಲಾಕ್‌ಡೌನ್ ಸಡಿಲಿಕೆ: ಕರ್ನಾಟಕದಲ್ಲಿ ನಾಲ್ಕು ವಲಯಗಳ ವಿಂಗಡಣೆ

ಯಾರೂ ಮಾಡಲೊಪ್ಪದ ಭೀಭತ್ಸ ಆದರೆ ಅಷ್ಟೇ ಅತ್ಯಗತ್ಯ ಈ ಸೇವೆಯಲ್ಲಿ ನಿತ್ಯವೂ ವ್ಯಸ್ತರಾಗಿರುವ ಅವರಿಗೆ ಈಗ ಲಾಕ್‌ಡೌನ್‌ ಒಂದು ತಿಂಗಳಿಂದ ರಜೆ ನೀಡಿದೆ. ಹಾಗಂತ ಮನೆಯಲ್ಲಿ ಸಮಯವನ್ನು ವ್ಯರ್ಥ ಮಾಡಲೊಪ್ಪದ ಸೂರಿ ಶೆಟ್ಟಿ, ಕಾಪು ಮತ್ತು ಬೆಳಪು ರುದ್ರಭೂಮಿಗಳಲ್ಲಿ ಮಳೆಗಾಲದಲ್ಲಿ ಮೃತದೇಹಗಳನ್ನು ಸುಡುವುದಕ್ಕೆ ಬೇಕಾದ ನೂರಾರು ಕ್ವಿಂಟಲ್‌ ಕಟ್ಟಿಗೆಯನ್ನು ತಾವೇ ಒಡೆಯುತ್ತಿದ್ದಾರೆ.

ಅಪಘಾತಗಳಲ್ಲಿ ಸಾಯುವವರು, ಆತ್ಮಹತ್ಯೆ ಮಾಡಿಕೊಳ್ಳುವವರು ತೀರಾ ಕಡಿಮೆಯಾಗಿದ್ದಾರೆ, ಇದರಿಂದ ನಿಮಗೀಗ ಕೆಲಸವೂ ಇಲ್ಲ ಸಂಪಾದನೆಯೂ ಇಲ್ಲ ಎಂದರೆ, ಮಗುಮನಸ್ಸಿನ ಸೂರಿ ಅದಕ್ಕೂ ಖುಷಿಪಡುತ್ತಾರೆ. ಈ ರೀತಿ ಯಾರೂ ಸಾಯಬಾರದಣ್ಣ, ಅಂತಹವರ ಮನೆಯವರ ನೋವು ನೋಡುವುದಕ್ಕಾಗುವುದಿಲ್ಲಣ್ಣ ಎನ್ನುತ್ತಾರವರು.

ಮೇ.3ರ ಬಳಿಕವೂ ಕುಡುಕರಿಗೆ ಲಾಕ್‌ಡೌನ್, ಅಮೀರ್‌ಗೆ ಎಚ್ಚರಿಸಿದ್ದ ಕಿಂಗ್ ಖಾನ್; ಏ.27ರ ಟಾಪ್ 10 ಸುದ್ದಿ!

ನೀಮಗೇಕೆ ಈ ಕಟ್ಟಿಗೆ ಒಡೆಯುವ ಕೆಲಸ ಸೂರಣ್ಣ ಎಂದು ಕೇಳಿದರೆ, ಮನೆಯಲ್ಲಿ ಸುಮ್ಮನೆ ಕುಳಿತು ನನಗೆ ಗೊತ್ತಿಲ್ಲ, ಶ್ರೀಮಂತರ ಮೃತದೇಹ ಬಂದರೆ ಒಂದೆರಡು ಸಾವಿರ ರು. ಕೊಡುತ್ತಾರೆ, ಅದರಿಂದ ಕಟ್ಟಿಗೆ ಖರೀದಿಸಬಹುದು. ಆದರೆ ತೀರಾ ಬಡವರ ಹೆಣ ಬಂದರೆ ಅವರಿಗೆ ಒಂದಿನ್ನೂರು ಕೊಡುವುದಕ್ಕೂ ಸಾಧ್ಯವಾಗುವುದಿಲ್ಲ. ಅಂತಹವರಿಗಾಗಿ ಕಟ್ಟಿಗೆ ಒಡೆದು ಈಗಲೇ ಸಿದ್ಧ ಮಾಡಿಟ್ಟುಕೊಳ್ಳುತಿದ್ದೇನೆ ಎನ್ನುತ್ತಾರೆ ಸೂರಿ ಶೆಟ್ಟಿ.

-ಸುಭಾಶ್ಚಂದ್ರ ಎಸ್‌. ವಾಗ್ಳೆ

Follow Us:
Download App:
  • android
  • ios