ಫೆ.15ರಿಂದ ಎಲ್ಲ ಟೋಲ್‌ ಗೇಟ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ಕಡ್ಡಾಯಗೊಳ್ಳಲಿದೆ. ಇದರ ಬೆನ್ನಲ್ಲೇ ಸ್ಥಳೀಯರಿಗೆ ಟೋಲ್‌ನಲ್ಲಿ ವಿನಾಯಿತಿ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. 

ಪಡುಬಿದ್ರಿ (ಫೆ.13):  ದೇಶಾದ್ಯಂತ ಫೆ.15ರಿಂದ ಎಲ್ಲ ಟೋಲ್‌ ಗೇಟ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ಕಡ್ಡಾಯಗೊಳ್ಳಲಿದ್ದು, ಇದರಿಂದ ಟೋಲ್‌ಗಳಲ್ಲಿ ಸ್ಥಳೀಯರಿಗೆ ದೊರೆಯುತ್ತಿದ್ದ ವಿನಾಯಿತಿಯು ರದ್ದುಗೊಳ್ಳುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿನ್ನೆಲೆಯಲ್ಲಿ ಇಲ್ಲಿನ ಹೆಜಮಾಡಿಯ ಸ್ಥಳೀಯರು ನಾಗರಿಕರ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ತೆರಳಿ, ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿ ನೀಡಬೇಕು ಮತ್ತು ಈ ಹಿಂದೆ ಗ್ರಾಮಸ್ಥರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಂತೆ ಟೋಲ್‌ ಅಧಿಕಾರಿಗಳಿಗೆ ಮನವಿ ಮಾಡಿದರು.

ಹೆಜಮಾಡಿಯಲ್ಲಿ ಟೋಲ್‌ ನಿರ್ಮಿಸುವ ಸಂದರ್ಭದಲ್ಲಿ ಸ್ಥಳೀಯರಿಗೆ ವಿನಾಯಿತಿ, ಉದ್ಯೋಗಾವಕಾಶ, ಕನ್ನಂಗಾರು ಬಳಿ ಸರ್ವಿಸ್‌ ರಸ್ತೆ, ಶಿವನಗರ ಬಳಿ ಸ್ಕೈವಾಕ್‌, ಸಮಗ್ರ ದಾರಿದೀಪ ಮತ್ತು ಚರಂಡಿ ವ್ಯವಸ್ಥೆ, ಬಸ್ಸು ತಂಗುದಾಣ ನಿರ್ಮಾಣ ಸಹಿತ ವಿವಿಧ ಬೇಡಿಕೆಗಳನ್ನು ಸಲ್ಲಿಸಿದ್ದು, ಟೋಲ್‌ ನಡೆಸುವ ನವಯುಗ್‌ ಕಂಪೆನಿ ಮತ್ತು ಹೆದ್ದಾರಿ ಇಲಾಖೆಗಳು ಈ ಎಲ್ಲಾ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಭರವಸೆ ನೀಡಿದ್ದವು.

Fastag ಗಡುವು ವಿಸ್ತರಣೆ ಕುರಿತು ನಿತಿನ್ ಗಡ್ಕರಿ ಖಡಕ್ ಸಂದೇಶ; ಏನದು ಹೊಸ ಆದೇಶ!

ಆದರೆ ಅವುಗಳಲ್ಲಿ ಬಹುತೇಕ ಬೇಡಿಕೆಗಳು ಇನ್ನೂ ಈಡೇರಿಲ್ಲ, ಇನ್ನಾದರೂ ತಕ್ಷಣ ಬೇಡಿಕೆ ಈಡೇರಿಸಬೇಕು, ಇಲ್ಲಾ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಮನವಿ ಸ್ವೀಕರಿಸಿದ ಟೋಲ್‌ ಮ್ಯಾನೇರ್ಜ ಶಿವಪ್ರಸಾದ್‌ ಶೆಟ್ಟಿ, ಸರ್ಕಾರದ ನೂತನ ನಿಯಮದಂತೆ ಪ್ರತಿ ವಾಹನಕ್ಕೆ ಫಾಸ್‌ಟ್ಯಾಗ್‌ ಕಡ್ಡಾಯವಾಗಿದ್ದು, ಯಾವುದೇ ವಾಹನಗಳಿಗೆ ರಿಯಾಯಿತಿ ಅಸಾಧ್ಯ. ಆದರೂ ಹೆಜಮಾಡಿ ಟೋಲ್‌ನಲ್ಲಿ ಹೆಜಮಾಡಿ ವಾಸಿಗಳ ವಾಹನಗಳಿಗೆ ಸಂಪೂರ್ಣ ರಿಯಾಯಿತಿ ನೀಡಲು ಕಂಪನಿ ನಿರ್ಧರಿಸಿದೆ ಎಂದರು.

ಕ್ರಿಯಾ ಸಮಿತಿಯ ಕಾರ್ಯದರ್ಶಿ ಸನಾ ಇಬ್ರಾಹಿಮ್, ಸದಸ್ಯರಾದ ಶೇಖಬ್ಬ ಕೋಟೆ, ರೋಲ್ಫಿ ಡಿಕೋಸ್ತಾ, ಪ್ರಣೇಶ್‌ ಹೆಜ್ಮಾಡಿ, ಕಾಪು ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ರಮೀಝ್‌ ಹುಸೈನ್‌, ಮುಖಂಡರಾದ ಸುಭಾಷ್‌ ಸಾಲ್ಯಾನ್‌, ಸುಧೀರ್‌ ಕರ್ತೇರ, ಸುಧೀರ್‌ ಕರ್ಕೇರ, ವಾಮನ ಕೋಟ್ಯಾನ್‌ ನಡಿಕುದ್ರು, ಗ್ರಾ.ಪಂ. ಸದಸ್ಯರಾದ ಪಾಂಡುರಂಗ ಕರ್ಕೇರ ಮತ್ತಿತರರು ಇದ್ದರು.