ಇನ್ನೇನು ನಾಲ್ಕು ಹೆಜ್ಜೆ ಮುಂದೆ ಇಟ್ಟಿದ್ರೆ ಸಾಕು ಊರು ಸಿಕ್ಕೇ ಬಿಡ್ತು ಎನ್ನುವಷ್ಟರಲ್ಲೇ ಜವರಾಯನ ಅಟ್ಟಹಾಸಕ್ಕೆ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.

ಚಿತ್ರದುರ್ಗ, (ಸೆಪ್ಟೆಂಬರ್.13): ಅವರು ಆಗ ತಾನೇ ಕೆಲಸ ಮುಗಿಸಿ ರಾತ್ರಿ ತಮ್ಮ ಗ್ರಾಮಕ್ಕೆ ಹಿಂದಿರುಗುವ ಸಮಯ. ಒಂದೇ ಬೈಕ್ ನಲ್ಲಿ ಮೂವರು ಯುವಕರು ರಸ್ತೆ ಮೇಲೆ‌ ಹರಿಯುತ್ತಿದ್ದ ನೀರನ್ನು ಲೆಕ್ಕಿಸದೇ ಸೇತುವೆ ದಾಟಲು ಮಾಡಿದ ದುಸ್ಸಾಹಸದಿಂದ ಇಬ್ಬರು ನೀರುಪಾಲಾಗಿರೋ ಘಟನೆ ನಡೆದಿದೆ. ಅತ್ತ ಬಡತನದಲ್ಲಿ ಇದ್ದ ಕುಟುಂಬಕ್ಕೆ ಇವರೇ ಅಧಾರ ಸ್ತಂಭ ಆಗಿದ್ರಿಂದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಹದಿನೈದು ದಿನಗಳಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಜನರು ಹೈರಾಣಾಗಿ ಹೋಗಿದ್ದಾರೆ. ಅದರಲ್ಲೂ ಚಳ್ಳಕೆರೆ ತಾಲ್ಲೂಕಿನ‌ ಪರಶುರಾಂಪುರ ಭಾಗದ ಜನರ ಗೋಳು ಹೇಳತೀರದು. ಕೊರ್ಲಕುಂಟೆ ಗ್ರಾಮದ ಬಳಿ ಇರುವ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, ತಡರಾತ್ರಿ ಮೂವರು ಯುವಕರು ಬೈಕ್ ನಲ್ಲಿ ರಸ್ತೆ ದಾಟುವ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಓಬಳೇಶ್, ಕುಮಾರ ನೀರು ಪಾಲಾದ ಯುವಕರು.

ಚಿತ್ರದುರ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನೂ ಉಳಿದ ಮೂರನೇ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸೇತುವೆಯಿಂದ ಅಪಾಯ ಆಗಲಿದೆ ಎನಾದ್ರು ಕ್ರಮ ಕೈಗೊಳ್ಳಿ ಅಂತ ಗ್ರಾಮಸ್ಥರು ಎಷ್ಟೇ ಮನವಿ ಮಾಡಿದ್ರು ಅಧಿಕಾರಿಗಳು ಮಾತ್ರ ಕ್ಯಾರೇ ಅಂದಿಲ್ಲ. ಇದರ ಪರಿಣಾಮವಾಗಿ ನಿನ್ನೆ ರಾತ್ರಿ ಇಬ್ಬರು ಯುವಕರು ನೀರು ಪಾಲಾಗಿ ಮೃತಪಟ್ಟಿರೋದಕ್ಕೆ ಅಧಿಕಾರಗಳ ನಿರ್ಲಕ್ಷ್ಯವೇ ಮೂಲ‌ ಕಾರಣ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಇನ್ನೂ ಕೊರ್ಲಕುಂಟೆ ಗ್ರಾಮದ ಓಬಳೇಶ್ ಹಾಗೂ ಕುಮಾರ ಇಬ್ಬರು ಯುವಕರು ನೀರು ಪಾಲಾಗಿ ಮೃತಪಟ್ಟಿದ್ದು ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೂಲಿ ನಾಲಿ ಮಾಡಿ ಕುಟುಂಬ ನಿರ್ವಹಣೆ ಮಾಡ್ತಿದ್ದ ಇಬ್ಬರು ಯುವಕರು ಸಾವನ್ನಪ್ಪಿರೋದು ಅವರ ಮನೆಗೆ ದುಡಿಯುವ ಶಕ್ತಿಗಳೇ ಇಲ್ಲಂದಂತೆ ಆಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.